ಕಾರವಾರ: ಜಿಲ್ಲೆಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸಮಾನ ಮನಸ್ಕರು ರಚಿಸಿಕೊಂಡಿರುವ ಯುನೈಟೆಡ್ ಎಜ್ಯುಕೇಶನ್ ಟ್ರಸ್ಟ್ ನಿರ್ಧರಿಸಿದೆ.
ಮೊದಲ ಪ್ರಯತ್ನವಾಗಿ ನಗರದ ರಹೀಮ್ಖಾನ್ ಯುನಿಟಿ ಪ್ರೌಢಶಾಲೆಯಲ್ಲಿ ತರಬೇತಿಗೆ ಆಯ್ಕೆ ಮಾಡಲು ಎಸ್.ಎಸ್.ಎಲ್.ಸಿ. ತರಗತಿಯ ಆಸಕ್ತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದಿದ್ದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
‘ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡುವವರ ಸಂಖ್ಯೆ ಕಡಿಮೆ ಇದೆ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗೆ ಮಕ್ಕಳನ್ನು ಅಣಿಗೊಳಿಸುವವರು ತೀರಾ ಕಡಿಮೆ. ಜೆಇಇ ಅಡ್ವಾನ್ಸ್ಡ್, ಜೆಇಇ ಮೇನ್ಸ್, ನೀಟ್, ಸಿಎಸ್ಇಇಟಿ, ಸಿ.ಎ. ಫೌಂಡೇಶನ್ ಮುಂತಾದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಸಮಾನ ಮನಸ್ಕರು ನಿರ್ಧರಿಸಿದ್ದೇವೆ. ಹೀಗಾಗಿ ಟ್ರಸ್ಟ್ ರಚಿಸಿಕೊಳ್ಳಲು ಮುಂದಾಗಿದ್ದೇವೆ’ ಎಂದು ತಾರಿಕ್ ಅಹ್ಮದ್ ಶೇಖ್ ಹೇಳಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿ ಪಾಲಕರಿಗೆ ಕಾರ್ಯಾಗಾರ ನಡೆಸಿ ಟ್ರಸ್ಟ್ ಉದ್ದೇಶ ತಿಳಿಸಲಾಯಿತು. ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಆಯ್ಕೆ ಮಾಡಲು ಆಸಕ್ತರಿಗೆ ಪರೀಕ್ಷೆ ನಡೆಸಲಾಗಿದೆ. ಮುಂದಿನ ಹಂತದಲ್ಲಿ ಪುನಃ ಪರೀಕ್ಷೆ ನಡೆಸುತ್ತೇವೆ. ಹೆಚ್ಚು ಅಂಕಗಳಿಸಿದವರಿಗೆ ತರಬೇತಿ ಒದಗಿಸುತ್ತೇವೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು’ ಎಂದು ವಿವರಿಸಿದರು.
ಟ್ರಸ್ಟ್ ನಲ್ಲಿ ಅಬ್ದುಲ್ ಸಾದಿಕ್ ಶೇಖ್, ಮಹ್ಮದ್ ಮುಜಮ್ಮಿಲ್ ಮಾಂಡ್ಲಿಕ್, ಅಬ್ದುಲ್ಲಾ ಮಹ್ಮದ್ ಶೇಖ್, ಫೈರೋಜ್ ಗಫೂರ್ ಶೇಖ್, ತಬ್ರೇಜ್ ಅಹ್ಮದ್ ಶೇಖ್ ಇದ್ದಾರೆ.