ಭಾರತೀಯ ಚಿತ್ರರಂಗದ ದೈತ್ಯಪ್ರತಿಭೆ ರಿಷಿ ಕಪೂರ್ ನಿಧನಕ್ಕೆ ನಾಗಾಭರಣ ಸಂತಾಪ
ಬೆಂಗಳೂರು: ಬಾಲಿವುಡ್ ಹಿರಿಯ ನಟ, ಭಾರತೀಯ ಚಿತ್ರರಂಗದ ದೈತ್ಯಪ್ರತಿಭೆ ರಿಷಿ ಕಪೂರ್ ಅವರ ನಿಧನದ ಸುದ್ದಿ ಅತ್ಯಂತ ನೋವಿನ ಸಂಗತಿಯಾಗಿದ್ದು ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಕಳಕಳಿಯ ಮನೋಭಾವವನ್ನು ಹೊಂದಿದ್ದ, ಜಾತಿ ವ್ಯವಸ್ಥೆಯ ವಿರುದ್ಧ ದೊಡ್ಡ ಸಾಂಸ್ಕೃತಿಕ ದನಿಯಾಗಿದ್ದ ರಿಷಿ ಕಪೂರ್ ಅವರು, ತಮ್ಮ ಮನೋಜ್ಞ ಅಭಿನಯದ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ದರು ಎಂಬುದಕ್ಕೆ ಅವರಿಗೆ ದೊರೆತಿರುವ ಹಲವಾರು ರಾಷ್ಟ್ರಮಟ್ಟದ ಪ್ರಶಸ್ತಿಗಳೇ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
ಬಾಬ್ಬಿ, ಸಾಗರ್, ಚಾಂದಿನಿ ಮುಂತಾದ ಚಿತ್ರಗಳು ಸೇರಿದಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿರುವ ರಿಷಿ ಕಪೂರ್ ಅವರು ಅನಾರೋಗ್ಯದಿಂದಾಗಿ ಇಂದು ಮುಂಬೈನಲ್ಲಿ ನಿಧನರಾಗಿದ್ದು, ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕಂಬನಿ ಮಿಡಿದಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.