ಅತ್ಯಾಚಾರಿಗಳನ್ನು ಮತ್ತೆ ಜೈಲಿಗೆ ಕಳುಹಿಸಿ; ಡಿಸಿಡಬ್ಲ್ಯೂ ಅಧ್ಯಕ್ಷೆ ಮಲಿವಾಲ್ರಿಂದ ಮೋದಿಗೆ ಪತ್ರ
ಹೊಸದಿಲ್ಲಿ: ಪರೋಲ್ನಲ್ಲಿರುವ ದೇರಾ ಸಚ್ಚಾ ಸೌಧಾದ ಮುಖ್ಯಸ್ಥ ಗುರ್ಮೀತ್ ಸಿಂಗ್ ಹಾಗೂ ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಮತ್ತೆ ಜೈಲಿಗೆ ಕಳುಹಿಸುವಂತೆ ಆಗ್ರಹಿಸಿ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ 2017ರಲ್ಲಿ ದೋಷಿ ಎಂದು ಪರಿಗಣಿತನಾದ ಗುರ್ಮಿತ್ ಸಿಂಗ್ 2022 ಅಕ್ಟೋಬರ್ 14ರಿಂದ ಪರೋಲ್ನಲ್ಲಿ ಹೊರಗಿದ್ದಾನೆ. ಹರ್ಯಾಣ ಸರಕಾರ ಗುರ್ಮೀತ್ ಸಿಂಗ್ಗೆ 40 ದಿನಗಳ ಪರೋಲ್ ನೀಡಿದೆ. ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಮಂದಿ ದೋಷಿಗಳನ್ನು ಗುಜರಾತ್ ಸರಕಾರ ಬಿಡುಗಡೆ ಮಾಡಿದೆ.
“ಈ ಘಟನೆಗಳು ತೀವ್ರ ಆತಂಕ ಉಂಟು ಮಾಡುತ್ತವೆ ಹಾಗೂ ಪ್ರಭಾವಿ ದೋಷಿಗಳೊಂದಿಗೆ ರಾಜಕಾರಣಿಗಳು ಶಾಮೀಲಾಗಿರುವುದನ್ನು ತೋರಿಸುತ್ತದೆ. ರಾಜಕಾರಣಿಗಳು ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕೆ ಅತ್ಯಾಚಾರಿಗಳನ್ನು ಬಳಸುತ್ತಿದ್ದಾರೆ'' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ದೇಶದಲ್ಲಿ ಬಿಡುಗಡೆ, ಪರೋಲ್ಗೆ ಸಂಬಂಧಿಸಿ ಅಸ್ತಿತ್ವದಲ್ಲಿ ಇರುವ ನಿಯಮಗಳು ಹಾಗೂ ನೀತಿಗಳು ತೀವ್ರ ದುರ್ಬಲವಾಗಿವೆ. ರಾಜಕಾರಣಿಗಳು ಹಾಗೂ ದೋಷಿಗಳು ತಮ್ಮ ಲಾಭಕ್ಕಾಗಿ ಅದನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಇದನ್ನು ತಪ್ಪಿಸಲು ಹಾಗೂ ಕಾನೂನು, ನೀತಿಗಳು ಯಾವುದೇ ರೀತಿಯಲ್ಲಿ ದುರ್ಬಳಕೆ ಆಗದಿರಲು ಮರು ಪರಿಶೀಲಿಸುವ ಹಾಗೂ ಹೆಚ್ಚು ಕಠಿಣಗೊಳಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.