ದಲಿತ ಬಾಲಕಿಗೆ ಶಾಲೆಗೆ ಹೋಗುವುದಕ್ಕೆ ಅಡ್ಡಿ; 7 ಮಂದಿಯ ಬಂಧನ
ಶಾಜಪುರ (ಮಧ್ಯಪ್ರದೇಶ): ಬವಲಿಯಖೇಡಿ ಗ್ರಾಮದಲ್ಲಿ 16 ವರ್ಷದ ದಲಿತ ಬಾಲಕಿಗೆ ಶಾಲೆಗೆ ಹೋಗದಂತೆ ತಡೆ ಒಡ್ಡಿದ ಆರೋಪದಲ್ಲಿ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ಗ್ರಾಮದಿಂದ ಇತರ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಆದುದರಿಂದ ನೀನು ಕೂಡ ಹೋಗಬಾರದು ಎಂದು ಗ್ರಾಮದ ನಿವಾಸಿಗಳ ಗುಂಪೊಂದು ಬಾಲಕಿಗೆ ಬೆದರಿಕೆ ಒಡ್ಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 23ರಂದು ನಡೆದ ಈ ಘಟನೆಗೆ ಸಂಬಂಧಿಸಿ 7 ಮಂದಿಯನ್ನು ಬಂಧಿಸಿದ ಬಳಿಕ ಬಾಲಕಿಯ ಕುಟುಂಬ ಹಾಗೂ ಆರೋಪಿಗಳ ಕುಟುಂಬದ ನಡುವೆ ಘರ್ಷಣೆ ನಡೆದಿದೆ ಇದರಿಂದ ಹಲವರ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಶನಿವಾರ ಶಾಲೆಗೆ ಹಾಜರಾಗಿ ಮಧ್ಯಾಹ್ನ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಗ್ರಾಮದ ಇತರ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಆದುದರಿಂದ ನೀನು ಕೂಡ ಶಾಲೆಗೆ ಹೋಗಬಾರದು ಎಂದು ಹೇಳಿದ ಆರೋಪಿಗಳು ಬ್ಯಾಗ್ ಅನ್ನು ಕಿತ್ತುಕೊಂಡಿದ್ದರು ಎಂದು ಕೊಟ್ಟಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅವಧೇಶ್ ಕುಮಾರ್ ಶೇಷಾ ಅವರು ಹೇಳಿದ್ದಾರೆ.
ಬಾಲಕಿ ನೀಡಿದ ದೂರಿನ ಹಿನ್ನೆಲೆಯಲ್ಲಿ 7 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ ಹಾಗೂ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿದ ಸೆಕ್ಷನ್, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪ್ರತಿ ದೂರು ದಾಖಲಿಸಿದ್ದು, ಬಾಲಕಿಯ ಸಹೋದರ ಹಾಗೂ ಇತರ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.