ದಾಂಡೇಲಿ: ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾದ ಬಾಲಕ! ಕಾಳಿ ನದಿ ದಂಡೆಯಲ್ಲಿ ಘಟನೆ: ಸ್ಥಳಕ್ಕೆ ಹಲವರ ಭೇಟಿ: ತೀವ್ರ ಹುಡುಕಾಟ
ದಾಂಡೇಲಿ: ನಗರದ ಹಳಿಯಾಳ ರಸ್ತೆಯ ಕಾಳಿ ನದಿ ದಂಡೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಹಿಡಿದು ಎಳೆದೊಯ್ದಿರುವ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ವಿನಾಯಕ ನಗರದ ನಿವಾಸಿ ಮೊಯೀನ್ ಮೆಹಬೂಬ (15) ಮೊಸಳೆ ದಾಳಿಗೆ ಒಳಗಾದವನು. ಆ ಭಾಗದ ಜನರು ಬಟ್ಟೆ ತೊಳೆಯಲು ಹೋಗುವ ಜಾಗದಲ್ಲಿ ಬಾಲಕ ಮೀನು ಹಿಡಿಯಲು ಗಾಳ ಹಾಕಿ ಕುಳಿತುಕೊಂಡಾಗ ಕಾಳಿ ನದಿಯಿಂದ ಹೊರಬಂದ ಮೊಸಳೆಯೊಂದು ಬಾಲಕನನ್ನು ಎಳೆದುಕೊಂಡು ಹೋಗಿದೆ ಎಂದು ಅಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಪ್ರಭು ಗಂಗನಹಳ್ಳಿ, ನಗರದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಯುನೀಸ್ ಗಡ್ಡಕರ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ 5 ಸ್ಥಳಕ್ಕಾಗಮಿಸಿ ಬಾಲಕನ ಹುಡುಕಾಟ ಆರಂಭಿಸಿದರು, ಆರ್. ಎಫ್ಒ ವಿನಯ್ ಭಟ್ಟ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ಬಾಲಕ ಶೋಧಕಾರ್ಯದಲ್ಲಿ ತೊಡಗಿರುವ ರಾಫ್ಟಿಂಗ್ ಬೋಟುಗಳು,
ರವಿ ನಾಯ್ಕ ಅವರ ರಾಪಿಂಗ್ ತಂಡವು ಬಾಲಕನ ಶೋಧ ಕಾರ್ಯದಲ್ಲಿ ನಿರತರಾಗಿದೆ. ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ರುಕ್ಕಿಣಿ ಬಾಗಡೆ ಉಪಸ್ಥಿತರಿದ್ದರು.
ನೀರು ನಿಲ್ಲಿಸಿದ ಜಲಾಶಯ: ಸೂಪಾ ಜಲಾಶಯದಿಂದ ಹೊರ ಹರಿವು ಇದ್ದ ಕಾರಣ ಕಾಳಿ ನದಿಯಲ್ಲಿ ನೀರಿ ತುಂಬಿ ಹರಿಯುತ್ತಿತ್ತು. ಘಟನೆ ನಡೆದ ತಕ್ಷಣ ಅಧಿಕಾರಿಗಳು ಕರ್ನಾಟಕ ವಿದ್ಯುತ್ ನಿಗಮದವರಲ್ಲಿ ಮನವಿ ಮಾಡಿಕೊಂಡಂತೆ ಜಲಾಶಯದ ಹೊರ ಹರಿವನ್ನು ಸ್ಥತಗಿತಗೊಳಿಸಿದ್ದಾರೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಶೋಧ ಕಾರ್ಯಕ್ಕೆ ಅನುಕೂಲವಾಗಿದೆ.
ಬಾಲಕನ ಮನೆಯಲ್ಲಿ ಆಕ್ರಂದನ: ಮೊಸಳೆ ಎಳೆದುಕೊಂಡು ಹೋದ ಬಾಲಕನ ಕುಟುಂಬ ತೀರ ಬಡ ಕುಟುಂಬವಾಗಿದೆ. ತಂದೆ ರಿಕ್ಷಾ ಓಡಿಸಿಕೊಂಡು ಕುಟುಂಬ ನಿರ್ವಹಿಸುವವನಾಗಿದ್ದು, ಈ ಘಟನೆಯಿಂದ ಇಡೀ ಕುಟುಂಬ ನೊಂದಕೊಂಡಿದೆ. ತಾಯಿ ಹಾಗೂ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.