ಹೊಸದಿಲ್ಲಿ: ಕೊರೋನ ಎದುರಿಸುವಲ್ಲಿ ಮೋದಿ ಸರಕಾರ ವಿಫಲ: ಸೋನಿಯಾ ಕಿಡಿ
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಭಾರೀ ಹೆಚ್ಚಳದ ನಡುವೆಯೇ ಬಿಕ್ಕಟ್ಟನ್ನು ಎದುರಿಸಲು ಯಾವುದೇ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುವಲ್ಲಿ ವೈಫಲ್ಯಕ್ಕಾಗಿ ಮತ್ತು ತಾತ್ಕಾಲಿಕ ಪರಿಹಾರ ಸೂತ್ರವನ್ನು ನೆಚ್ಚಿಕೊಂಡಿರುವುದಕ್ಕಾಗಿ ಶನಿವಾರ ಮೋದಿ ಸರಕಾರದ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಲಸಿಕೆ ನೀಡಿಕೆ ವಯಸ್ಸನ್ನು 25 ವರ್ಷ ತಗ್ಗಿಸುವಂತೆ ಮತ್ತು ನಿರ್ಬಂಧಗಳು, ಕರ್ಫ್ಯೂ ಮತ್ತು ಲಾಕ್ಡೌನ್ನಿಂದಾಗಿ ಆದಾಯ ಕೊರತೆಯ ಸಂಕಷ್ಟದಲ್ಲಿರುವ ಜನರಿಗೆ ಆರ್ಥಿಕ ಬೆಂಬಲವನ್ನೊದಗಿಸುವಂತೆ ಸಲಹೆ ನೀಡಿದರು.
ಇಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸೋನಿಯಾ, ಕೋವಿಡ್-19 ಚಿಕಿತ್ಸೆಗೆ ಅಗತ್ಯವಾಗಿರುವ ಎಲ್ಲ ಉಪಕರಣಗಳು, ಔಷಧಿಗಳು ಮತ್ತು ಇತರ ಸಾಧನಗಳನ್ನು ಜಿಎಸ್ಟಿಯಿಂದ ಮುಕ್ತಗೊಳಿಸುವಂತೆಯೂ ಕರೆ ನೀಡಿದರು.
ಕೋವಿಡ್-19 ವಿರುದ್ಧದ ಹೋರಾಟವು ರಾಷ್ಟ್ರೀಯ ಸವಾಲು ಆಗಿದೆ ಮತ್ತು ಇದು
ಪಕ ರಾಜಕೀಯದಿಂದ ಹೊರತಾಗಿರಬೇಕು ಎಂದು ಕಾಂಗ್ರೆಸ್ ಸದಾ ನಂಬಿದೆ ಎಂದ ಅವರು, ಪಕ್ಷವು ಮುಂದಿರಿಸಿರುವ ಸಲಹೆಗಳನ್ನು ನಿಜವಾದ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಕೇಂದ್ರವು ಕೆಲವು ರಾಜ್ಯಗಳಿಗೆ ಆದ್ಯತೆಯನ್ನು ನೀಡುತ್ತಿದೆ ಎಂದು ಆರೋಪಿಸಿದ ಸೋನಿಯಾ, ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮನವಿಗಳ ಬಗ್ಗೆ ಅದು ದಿವ್ಯ ಮೌನವನ್ನು ವಹಿಸಿದೆ ಎಂದರು. ರಾಜಕೀಯ ಪ್ರತಿಸ್ಪರ್ಧಿಗಳಂತಲ್ಲದೆ ಭಾರತೀಯರಾಗಿ ಈ ಸವಾಲಿನ ಸಮಯವನ್ನು ಎದುರಿಸುವುದು ನಿಜವಾದ ರಾಜಧರ್ಮವಾಗಿದೆ ಎಂದರು.