ಭಟ್ಕಳ: ಕೋವಿಡ್ ಆತಂಕ ಹಾಗೂ ಮಾರ್ಗಸೂಚಿ ಪಾಲನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಡಿಕೊಂಡಿರುವ ಮನವಿಯನ್ನು ಪರಿಗಣಿಸಿ ಇಲ್ಲಿನ ತಹಸೀಲ್ದಾರ ಕಚೇರಿಯ ಮುಂದೆ ಜ.12ರಿಂದ ನಡೆಯಬೇಕಾಗಿದ್ದ ಮೊಗೇರ ಸಮುದಾಯದ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ ಎಂದು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಮ್.ಕರ್ಕಿ ಹೇಳಿದ್ದಾರೆ.
ಅವರು ಮಂಗಳವಾರ ಇಲ್ಲಿನ ಸತ್ಕಾರ್ ಹೊಟೆಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೊಗೇರ ಸಮಾಜದ ವಿರುದ್ಧ ಅಧಿಕಾರಿಗಳು, ಸರಕಾರ, ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು, ಸಂಘಟನೆಗಳು ದಬ್ಬಾಳಿಕೆ ನಡೆಸಿಕೊಂಡು ಬಂದಿದ್ದು, ಅದರ ವಿರುದ್ಧ ಜ.12ರಿಂದ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಕೋವಿಡ್ ಹಾಗೂ ಮಾರ್ಗಸೂಚಿ ಪಾಲನೆಯ ಕಾರಣದಿಂದ ಅಧಿಕಾರಿಗಳು ಜ.12ರ ನಂತರ ನಡೆಸಲು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾವು ಅಧಿಕಾರಿಗಳ ಮುಂದೆ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದೇವೆ. ನಮ್ಮ ಮನವಿಯನ್ನು ಆಲಿಸಲು ಸ್ವತಃ ಜಿಲ್ಲಾಧಿಕಾರಿಗಳು ಭಟ್ಕಳಕ್ಕೆ ಆಗಮಿಸಬೇಕು, ಯಾರೋ ನೀಡಿದ ದೂರನ್ನು ಆಧರಿಸಿ ಮೊಗೇರ ಸಮಾಜಕ್ಕೆ ಅನ್ಯಾಯ ಮಾಡಬಾರದು, ಅಧಿಕಾರಿಗಳು ವಿವೇಚನೆಯಿಂದ ಕ್ರಮ ಕೈಗೊಳ್ಳಬೇಕು, ನಮ್ಮ ಸಮಾಜದ ಮೇಲೆ ಗೂಬೆ ಕೂರಿಸುವ, ನಮ್ಮ ಸಮಾಜದ ಜನರನ್ನು ಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಬಾರದು, ಮೊಗೇರ ಸಮಾಜದವರು ಜಾತಿ ಪ್ರಮಾಣ ಪತ್ರವನ್ನು ಮಾರ್ಕೆಟ್ನಿಂದ ಪಡೆದುಕೊಂಡಿಲ್ಲ, ಅಧಿಕಾರಿಗಳು ಪರಿಶೀಲನೆ ನಡೆಸಿಯೇ ನೀಡಿದ್ದು, ಈಗ ಬೇರೊಬ್ಬ ಅಧಿಕಾರಿಗಳು ಸರಕಾರದ ವ್ಯವಸ್ಥೆಯ ಮೇಲೆ ಭರವಸೆ ಇಲ್ಲದೇ ಆ ಜಾತಿ ಪ್ರಮಾಣವನ್ನು ರದ್ದುಪಡಿಸುವ ಕೆಲಸಕ್ಕೆ ಕೈ ಹಾಕಬಾರದು, ಈಗಾಗಲೇ ರದ್ದುಪಡಿಸಿರುವ ಮೊಗೇರ ಸಮಾಜದವರ ಜಾತಿ ಪ್ರಮಾಣ ಪತ್ರ ರದ್ಧತಿ ಆದೇಶವನ್ನು ಹಿಂಪಡೆದು ನ್ಯಾಯ ಒದಗಿಸಬೇಕು, ಮೊಗೇರ ಸಮಾಜದವರು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಭಟ್ಕಳ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ, ಭಾಸ್ಕರ ಗೋವಿಂದ ಮೊಗೇರ, ಜಟಗಾ ಮೊಗೇರ, ಪುಂಡಲೀಕ ಹೆಬಳೆ, ಶ್ರೀಧರ ಮೊಗೇರ, ಗೋಪಾಲ ಮೊಗೇರ, ಎಫ್.ಕೆ.ಮೊಗೇರ, ದಾಮೋದರ ಮೊಗೇರ, ಅನಂತ ಮೊಗೇರ, ಕೇಶವ ಮೊಗೇರ, ಮೋಹನ ಹೆಬಳೆ, ಕೃಷ್ಣ ಮೊಗೇರ ಹೊನ್ನೆಗದ್ದೆ ಮೊದಲಾದವರು ಉಪಸ್ಥಿತರಿದ್ದರು.