12–16 ವಾರಗಳ ಲಸಿಕಾ ಅಂತರ ಬೆಂಬಲಿಸಿದ ಕೋವಿಶೀಲ್ಡ್‌ ಪ್ರಯೋಗದ ತನಿಖಾಧಿಕಾರಿ

Source: PTI | By MV Bhatkal | Published on 20th June 2021, 11:40 AM | National News |

ನವದೆಹಲಿ: ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ 12–16 ವಾರಗಳ ಅಂತರವನ್ನು ಲಸಿಕೆಯ ಕ್ಲಿನಿಕಲ್‌ ಪ್ರಯೋಗದ ಮುಖ್ಯ ತನಿಖಾಧಿಕಾರಿ ಬೆಂಬಲಿಸಿದ್ದಾರೆ.
ಒಂದು ಡೋಸ್‌ನಿಂದ ಸಿಗುವ ರಕ್ಷಣೆಯು ಎರಡು ಮತ್ತು ಮೂರನೇ ತಿಂಗಳಲ್ಲಿ ಗಮನಾರ್ಹವಾಗಿ ವೃದ್ಧಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮ ಸಂಸ್ಥೆ ‘ದಿ ವೈರ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರೊಫೆಸರ್ ಆಂಡ್ರ್ಯೂ ಪೊಲಾರ್ಡ್, ‘ಬ್ರಿಟನ್ ಮತ್ತು ಭಾರತದಲ್ಲಿನ ಲಸಿಕೆ ನೀತಿಯನ್ನು ಪರಸ್ಪರ ಹೋಲಿಕೆ ಮಾಡಿ ನೋಡಲಾಗದು. ಎರಡೂ ದೇಶಗಳಲ್ಲೂ ಭಿನ್ನ ಸನ್ನಿವೇಶಗಳಿವೆ. ಪ್ರಸ್ತುತ ಕನಿಷ್ಠ ಒಂದು ಡೋಸ್‌ನೊಂದಿಗೆ ಅತಿ ಹೆಚ್ಚು ಜನರಿಗೆ ರೋಗದಿಂದ ರಕ್ಷಣೆ ನೀಡುವುದು ಭಾರತದ ಲಸಿಕೆ ನೀತಿಯಾಗಿದೆ,’ ಎಂದು ಆಕ್ಸ್‌ಫರ್ಡ್‌ ಲಸಿಕೆ ಸಮೂಹದ ನಿರ್ದೇಶಕರೂ ಆಗಿರುವ ಪೊಲಾರ್ಡ್ ಹೇಳಿದ್ದಾರೆ.
ಭಾರತದಲ್ಲಿನ ಲಸಿಕೆ ಅಂತರವನ್ನು ಪೊಲಾರ್ಡ್‌ ಬೆಂಬಲಿಸಿದ್ದಾರಾದರೂ, ಕೋವಿಶೀಲ್ಡ್‌ ಒಂದೇ ಡೋಸ್‌ನ ಲಸಿಕೆಯಲ್ಲ ಎಂಬುದನ್ನೂ ಅವರು ಪ್ರತಿಪಾದಿಸಿದ್ದಾರೆ.
‘ಕೋವಿಶೀಲ್ಡ್‌ ಎರಡು ಡೋಸ್‌ಗಳ ಲಸಿಕೆ. ಒಂದು ಡೋಸ್‌ ಹಾಕಿಸಿಕೊಂಡಿದ್ದರೆ ಸರಿ. ಆದರೆ, ದೇಹದಲ್ಲಿನ ಪ್ರತಿರೋಧಕ ಶಕ್ತಿಯನ್ನು ಉದ್ದೀಪಿಸಲು ಎರಡನೇ ಡೋಸ್‌ ಅತ್ಯಗತ್ಯ,‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಗಂಭೀರ ಅನಾರೋಗ್ಯವನ್ನು ತಗ್ಗಿಸುವುದು, ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಡಿಮೆ ಮಾಡುವುದರತ್ತ ನಮ್ಮ ಗಮನ ಇರಬೇಕು,‘ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕೋವಿಡ್‌ ಲಸಿಕೆಗಳ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸುತ್ತಿರುವ ನಡುವೆಯೇ ಬ್ರಿಟನ್‌ನಲ್ಲಿ ಅಂತರವನ್ನು ಕಡಿಮೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲಾರ್ಡ್‌, ಬ್ರಿಟನ್‌ನಲ್ಲಿ ಈಗಾಗಲೇ ಭಾಗಶಃ ಜನಸಂಖ್ಯೆಗೆ ಒಂದು ಡೋಸ್‌ ನೀಡಲಾಗಿದೆ. ಹೀಗಾಗಿ ಎರಡನೇ ಡೋಸ್‌ನ ಅಂತರವನ್ನು ತಗ್ಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
‘ಡೆಲ್ಟಾ ಮಾದರಿಯ ಕೊರೊನಾ ವೈರಸ್‌ ತಳಿ ಭಾರತದಲ್ಲಿ ಅತಿವೇಗವಾಗಿ ಹರಡುತ್ತಿರುವುದರ ನಡುವೆಯೂ ದೇಶದಲ್ಲಿ ಬಹುದೊಡ್ಡ ಜನಸಂಖ್ಯೆಗೆ ಲಸಿಕೆ ಲಭ್ಯವಾಗಿಲ್ಲ. ಹೀಗಾಗಿ ಅವರಿಗೆ ರಕ್ಷಣೆ ದೊರೆತಿಲ್ಲ,‘ ಎಂದು ಕೆಲ ವಿಜ್ಞಾನಿಗಳು ಹೇಳಿದ್ದರು.
ಭಾರತವು ಈವರೆಗೆ ಒಟ್ಟು 26,89,60,399 (26.89 ಕೋಟಿ) ಕೋವಿಡ್‌ ಲಸಿಕೆಗಳನ್ನು ಜನರಿಗೆ ನೀಡಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...