ಭಟ್ಕಳ: ‘ಜಿಲ್ಲಾಡಳಿತದ ಆದೇಶದಂತೆ ಪಟ್ಟಣದಲ್ಲಿ ಶುಕ್ರವಾರದಿಂದ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಈಗಾಗಲೇ ಆಯಾ ವಿಭಾಗದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶನಿವಾರದಿಂದ ಎಲ್ಲವೂ ಜನರ ಮನೆಗೆ ಬರಲಿದ್ದು, ಜನರು ಅತ್ಯಾವಶ್ಯಕ ವಸ್ತುಗಳನ್ನೇ ಮನೆಗೆ ಪಡೆದುಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಎಸ್.ಭರತ ತಿಳಿಸಿದರು.
ಅವರು ಶುಕ್ರವಾರದಂದು ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಜನರು ಮನೆಯಿಂದ ಹೊರಬರಬಾರದು. ಒಂದಾನು ವೇಳೆ ಬಂದಿದ್ದಲ್ಲಿ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುತ್ತದೆ. ಗುರುತಿನ ಚೀಟಿ ಇಲ್ಲದೆ ಅನಾವಶ್ಯಕವಾಗಿ ವಾಹನದಲ್ಲಿ ಓಡಾಡಿದರೆ ಪರವಾನಗಿ ರದ್ದು ಮಾಡುವುದರ ಜೊತೆಗೆ, ಎರಡನೇ ಬಾರಿ ನಿಯಮ ಮೀರಿದರೆ ವಾಹನ ವಶಕ್ಕೆ ಪಡೆದು ಜಪ್ತಿ ಮಾಡಲಿದ್ದೇವೆ. ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ತುರ್ತು ಸೇವೆಗಳ ಅತ್ಯಾವಶ್ಯಕ ಇರುವವರು ಮಾತ್ರ ವಸ್ತುಗಳ ಆರ್ಡರ್ ಮಾಡಿ ಪಡೆದುಕೊಳ್ಳಿರಿ’ ಎಂದು ಹೇಳಿದರು.
‘ಜನರಿಗೆ ಎಲ್ಲಾ ರೀತಿಯ ಮೆಡಿಕಲ್ ವಸ್ತುಗಳ ಪೂರೈಕೆ ಮಾಡಲಿದ್ದು, ಸ್ಯಾನಿಟೈಸರ್, ಮಾಸ್ಕ್ ಅನ್ನೂ ಪೂರೈಸಲಿದ್ದೇವೆ. ಈ ಹಿಂದೆ ತಾಲೂಕಾಡಳಿತದಿಂದ ಮಾಡಲಾದ ಯಾವುದೇ ಸ್ವಯಂ ಸೇವಕರಿಲ್ಲ. ಈ ಹಿಂದೆ ವಿತರಣೆಯಾದ ಎಲ್ಲಾ ಸ್ವಯಂ ಸೇವಕರ ಕಾರ್ಡ್ ಅನ್ನು ವಾಪಸ್ಸು ಪಡೆದುಕೊಂಡಿದ್ದು, ಬದಲಿಗೆ ಅಂಗಡಿಕಾರರು ಹಾಗೂ ಅಗತ್ಯ ವಸ್ತುಗಳ ವಿತರಕರಿಗೆ ಮಾತ್ರ ಫೊಟೋ ಹಾಗೂ ಆಧಾರ್ ಕಾರ್ಡ್ ಪಡೆದುಕೊಂಡು ಮನೆ ಮನೆ ಸಾಮಾಜಿಕ ಅಂತರವಿಟ್ಟು ಅಗತ್ಯ ವಸ್ತುಗಳ ಪೂರೈಕೆ ಮಾಡಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
‘ಖಾಸಗಿ ಆಸ್ಪತ್ರೆ ವೈದ್ಯರ ಅವಶ್ಯಕತೆ ಇದ್ದಲ್ಲಿ ತಾಲೂಕಾಡಳಿತ ಸಹಕರಿಸಲಿದ್ದು, ವಾಹನ ವ್ಯವಸ್ಥೆ ಮಾಡಲಿದ್ದೇವೆ. ಅವರು ಹೊರಗೆ ಬಂದ ಜನರ ಸೇವೆ ಮಾಡಬಹುದಾಗಿದೆ. ಆದರೆ, ಅವರನ್ನು ಸಂಪರ್ಕಿಸಿದಾಗ ಅವರ ಕ್ಲಿನಿಕ್ ಸ್ಟಾಫ್, ನರ್ಸ್ಗಳು ಮನೆಯಿಂದ ಹೊರ ಬರುತ್ತಿಲ್ಲವಾಗಿದೆ. ಸಾರ್ವಜನಿಕರಿಗೆ ಯಾವುದೇ ತುರ್ತು ಪರಿಸ್ಥಿತಿಯಿದ್ದಲ್ಲಿ ಅಗತ್ಯ ವಸ್ತುಗಳ ಪೂರೈಕೆ ಬೇಕಿದ್ದಲ್ಲಿ ಅವರು ೦೮೩೮೫- ೨೨೬ ೪೨೨ ತುರ್ತು ಹೆಲ್ಪ್ ಲೈನ್ಗೆ ಕರೆ ಮಾಡಿ, ಅವಶ್ಯಕ ವಸ್ತುವನ್ನು ಪಡೆದುಕೊಳ್ಳಬಹುದಾಗಿದೆ’ ಎಂದು ತಿಳಿಸಿದರು.
ಅಗತ್ಯ ವಸ್ತುಗಳ ಪೂರೈಕೆಯ ವಿಭಾಗದಲ್ಲಿ ತಾಲೂಕಾ ನೋಡಲ್ ಅಧಿಕಾರಿ ಸಾಜಿದ್ ಅಹಮದ್ ಮುಲ್ಲಾ ಮಾತನಾಡಿ, ‘ಕೆಲವೊಂದು ಷರತ್ತಿನ್ವಯ ಅಗತ್ಯ ವಸ್ತುಗಳಾದ ತರಕಾರಿ, ದಿನಸಿ, ಮೆಡಿಕಲ್, ಪೇಪರ್ ಹಾಗೂ ಹಾಲು ವಿತರಣೆಯನ್ನು ಮಾಡಲಾಗಿದೆ. ನಾಳೆಯಿಂದ ಅಗತ್ಯ ವಸ್ತುಗಳ ಪೂರೈಕೆ ಎಲ್ಲಾ ಅಂಗಡಿಕಾರರ ಹೆಸರು ಮೊಬೈಲ್ ಸಂಖ್ಯೆ ವೈರಲ್ ಆಗಲಿದೆ. ಜನರು ಅನಾವಶ್ಯಕ ಕರೆ ಮಾಡುವ ಬದಲು, ಅವಶ್ಯಕತೆ ಇರುವ ವಸ್ತುಗಳಿಗಾಗಿ ಮಾತ್ರ ಕರೆ ಮಾಡಿ ಪಡೆಯಿರಿ. ಅಗತ್ಯ ವಸ್ತುಗಳ ಅಂಗಡಿಗಳ ಪಟ್ಟಿಯಲ್ಲಿ ಕಛೇರಿ ಮೇಲ್ವಿಚಾರಕರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಲಿದ್ದು, ಅವರಿಗೂ ಸಹ ಕರೆ ಮಾಡಬಹುದಾಗಿದೆ. ಎಲ್ಲಾ ಅಗತ್ಯ ವಸ್ತುಗಳು ಮನೆಗೆ ಬಂದು ನೀಡಲಿದ್ದು, ಡೋರ್ ಡೆಲಿವರಿ ವ್ಯವಸ್ಥೆ ಕಲ್ಪಿಸಲಿದ್ದೇವೆ. ಎಲ್ಲಾ ಅಗತ್ಯ ವಸ್ತುಗಳ ಅಂಗಡಿಕಾರರು ವಸ್ತುಗಳ ದರದ ಮೇಲೆ ಗಮನ ಹರಿಸಬೇಕು. ಈ ವಿಪತ್ತಿಗೆ ಎಲ್ಲರ ಸಹಕಾರ ಅಗತ್ಯವಿದ್ದು, ಬದುಕಲು ಬೇಕಾಗಿರುವ ವಸ್ತು ಪಡೆದು ಮನೆಯಲ್ಲಿಯೇ ಇರಿ ಹೊರತು ನಾಲಿಗೆ ರುಚಿಗಾಗಿ ಯಾವುದನ್ನು ಮಾಡಬೇಡಿ. ಮುಖ್ಯವಾಗಿ ಹೋಮ್ ಡೆಲಿವರಿಯಲ್ಲಿ ವಿತರಕರ ಜೊತೆಗೆ ತಕರಾರು ಮಾಡದೇ ಜನರು ಸಹಕರಿಸಬೇಕು’ ಎಂದರು.
ಕಾನೂನು ಸುವ್ಯವಸ್ಥೆಯ ಪಾಲನೆಯ ನೋಡಲ್ ಅಧಿಕಾರಿ ಡಿವೈಎಸ್ಪಿ ಗೌತಮ್ ಕೆ.ಸಿ., ‘ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಿಬಿಡುವವರ ಮೇಲೆ ಕ್ರಮಕ್ಕೆ ಮುಂದಾಗಲಿದ್ದು, ಈಗಾಗಲೇ ಹೊನ್ನಾವರದಲ್ಲಿ ಓರ್ವರ ಮೇಲೆ ಕೇಸ್ ದಾಖಲಾಗಿದೆ. ಸೋಶಿಯಲ್ ಮಿಡಿಯಾ ಇಂಟಲಿಜೆನ್ಸ್ ಒಬ್ಸರ್ವೇಶನ್ ವಿಭಾಗವನ್ನು ಸಿದ್ಧಪಡಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದೆ. ತಾಲೂಕಾಡಳಿತದಿಂದ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರು ಅದಾಗ್ಯೂ ಕೂಡ ರಸ್ತೆಯಲ್ಲಿ ತಿರುಗಾಡಿದರೆ ಲಾಠಿ ಪೆಟ್ಟಿನ ಜೊತೆಗೆ, ಅಂಥÀವರ ಮೇಲೆ ಕೇಸ್ ಹಾಕಲಿದ್ದೇವೆ. ಮೆಡಿಕಲ್ ಎಮರ್ಜೆನ್ಸಿ ಇದ್ದಲ್ಲಿ ಡಿವೈಎಸ್ಪಿ ಅವರಿಗೆ ಕರೆ ಮಾಡಿ ಮೊದಲೇ ತಿಳಿಸಬೇಕು. ಅವಶ್ಯಕತೆ ಇದ್ದಲ್ಲಿ ಆಗ ಪೊಲೀಸರನ್ನು ಕಳುಹಿಸಿಕೊಡಲಿದ್ದೇವೆ’ ಎಂದು ತಿಳಿಸಿದರು.
ಆರೋಗ್ಯ ವಿಭಾಗದ ವ ಅಧಿಕಾರಿ ಡಾ.ಶರದ್ಕುಮಾರ ನಾಯಕ ಮಾತನಾಡಿ, ‘ಹೋಮ್ ಕ್ವಾರಂಟೈನ್ ಆಗಿದ್ದವರು ದಯವಿಟ್ಟು ಮನೆಯಲ್ಲಿಯೇ ಇರಬೇಕು. ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಉತ್ತಮ. ಸ್ವಚ್ಛತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸತಕ್ಕದಾಗಿದ್ದು, ಪ್ರತಿ ಬಾರಿಯೂ ಸ್ವಾನಿಟೈಸರ್ ಬಳಸಲು ಆಗದಿದ್ದಲ್ಲಿ ಸೋಪ್ ಬಳಸಿ ಕೈ ತೊಳೆಯಿರಿ. ತಾಲೂಕಾ ಆಸ್ಪತ್ರೆಯನ್ನು ಕೊರೋನಾಕ್ಕಾಗಿ ಮೀಸಲಿಡಲಾಗಿದೆ. ಜ್ವರ ಸೇರಿದಂತೆ ಕೊರೋನಾ ಲಕ್ಷಣ ಕಂಡುಬAದಲ್ಲಿ ತಾಲೂಕಾ ಆಸ್ಪತ್ರೆಗೆ ಬರಬಹುದಾಗಿದೆ. ಸದ್ಯ ಒಪಿಡಿಯನ್ನು ಆಸ್ಪತ್ರೆಯಲ್ಲಿ ಸ್ಥಗಿತಗೊಳಿಸಿದ್ದು, ಶಿರಾಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಬೇಕಿದೆ’ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಎನ್.ಅಶೋಕಕುಮಾರ್ ಉಪಸ್ಥಿತರಿದ್ದರು