ನವದೆಹಲಿ : ಇನ್ನು ಕೆಲವೇ ತಿಂಗಳುಗಳಲ್ಲಿ ಭಾರತ ಕೊರೋನಾ ವ್ಯಾಕ್ಸಿನ್ ಹೊಂದುವ ನಿರೀಕ್ಷೆ ಇದ್ದು, ಮುಂದಿನ ಆರು ತಿಂಗಳಲ್ಲಿ ವ್ಯಾಕ್ಸಿನ್ ಅನ್ನು ದೇಶಾದ್ಯಂತ ವಿತರಣೆ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮತ್ತು ಸೇಂಟ್ ಜಾನ್ಸ್ ಆಂಬ್ಯುಲೆನ್ಸ್ನ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಶ್ವದ ಇತರೆ ದೇಶಗಳಂತೆಯೇ ಭಾರತ ಕೂಡ ಕೊರೋನಾ ವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ಆರು ತಿಂಗಳಲ್ಲಿ ಕೊರೋನಾ ಲಸಿಕೆಯನ್ನು ಜನರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ. ಈ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ನಾವು ಆರು ಅಡಿಗಳಷ್ಟು ದೂರದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜೊತೆಗೆ ನಿಯಮಿತವಾಗಿ ಕೈ ತೊಳೆಯುವುದು ಮತ್ತು ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಇದರಿಂದ ಹಲವರ ಜೀವ ಉಳಿಸಬಹುದು ಎಂದು ಅವರು ಹೇಳಿದ್ದಾರೆ.