ಭಟ್ಕಳದಲ್ಲಿ ಕೊರೊನಾ ಕ್ವಾರೆಂಟೈನ್ ಪರಿಣಾಮ; ಸತತ 4ನೇ ಶುಕ್ರವಾರ ಬಿಕೋ ಎಂದ ಜುಮ್ಮಾ ಮಸೀದಿಗಳು
ಭಟ್ಕಳ: ಉತ್ತರಕನ್ನಡ ಜಿಲ್ಲೆ ಕೊರೊನಾ ಹಾಟ್ಸ್ಪಾಟ್ನಿಂದ ಜಾರಿ ಹಾಟ್ಸ್ಪಾಟೇತರ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ, ಭಟ್ಕಳ ಶಹರದಲ್ಲಿ ಬಿಸಿ ಇನ್ನೂ ತಣ್ಣಗಾಗಿಲ್ಲ. ತಾಲೂಕಿನಾದ್ಯಂತ ವಿಶೇಷವಾಗಿ ಭಟ್ಕಳ ಶಹರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಸತತ 4ನೇ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಇಲ್ಲದಂತಾಗಿದೆ.
ದೇಶದಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದರೂ ಭಟ್ಕಳದಲ್ಲಿ ಆತಂಕ ಸೃಷ್ಟಿಯಾಗಿರಲಿಲ್ಲ. ಭಟ್ಕಳ ಶಿರಾಲಿಯ ಯುವಕನೋರ್ವ ದುಬೈನಿಂದ ಭಟ್ಕಳಕ್ಕೆ ಬರುವ ಮಾರ್ಗ ಮಧ್ಯೆ ಮಂಗಳೂರಿನಲ್ಲಿ ಕೊರೊನಾ ಸೋಂಕಿತನಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾದರೂ ಇಲ್ಲಿನ ಜನರು ತಲೆ ಕೆಡಿಸಿಕೊಂಡಿರಲಿಲ್ಲ.
32 ಜನರ ಪರೀಕ್ಷಾ ವರದಿ ಭಟ್ಕಳಕ್ಕೆ ನಿರ್ಣಾಯಕ ಭಟ್ಕಳ: ಕೊರೊನಾ ಸೋಂಕಿತ 176 ಹಾಗೂ 260ನೇ ಕ್ರಮ ಸಂಖ್ಯೆಯ ವ್ಯಕ್ತಿಗಳೊಂದಿಗೆ ನೇರ ಹಾಗೂ ಎರಡನೇಯ ಹಂತದ ಸಂಪರ್ಕ ಹೊಂದಿದ ತಾಲೂಕಿನ ಒಟ್ಟೂ 32 ಜನರ ರಕ್ತ ಹಾಗೂ ಗಂಟಲಿನ ದ್ರವ ಮಾದರಿಯ ಪರೀಕ್ಷಾ ವರದಿಯು ಭಟ್ಕಳದ ಪಾಲಿಗೆ ನಿರ್ಣಾಯಕವಾಗಿದೆ. ಇಷ್ಟರಲ್ಲಿಯೇ ವರದಿ ಕೈ ಸೇರಬೇಕಿತ್ತಾದರೂ ಶಿವಮೊಗ್ಗ ಪ್ರಯೋಗಾಲಯದಲ್ಲಿ ಮತ್ತೊಮ್ಮೆ ಯಂತ್ರ ಕೆಟ್ಟು ಹೋದ ಕಾರಣ ಮಾದರಿಗಳೆಲ್ಲವನ್ನೂ ಬೆಂಗಳೂರಿಗೆ ಕಳುಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ವರದಿ ಕೈ ಸೇರುವ ಸಾಧ್ಯತೆ ಇದೆ. ಈಗಾಗಲೇ ಕೊರೊನಾ ಸೋಂಕಿತ ಗರ್ಭೀಣಿ ಮಹಿಳೆಗೆ ಸ್ಕ್ಯಾನಿಂಗ್ ಮಾಡಿದ್ದ ವೈದ್ಯರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸಮಾಧಾನ ತಂದಿದೆ. ಅಲ್ಲದೇ ಪ್ರಸಕ್ತವಾಗಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ನಲ್ಲಿರುವ ಎಲ್ಲ ಶಂಕಿತರ ವರದಿಯೂ ನೆಗೆಟಿವ್ ಬಂದಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. |
ಕ್ವಾರೆಂಟೈನ್ ಆದೇಶವೆಲ್ಲ ಜನರ ದಿಕ್ಕು ತಪ್ಪಿಸಲು ದೇಶದಲ್ಲಿ ನಡೆಯುತ್ತಿರುವ ತಂತ್ರಗಾರಿಕೆ ಎಂಬ ಹೇಳಿಕೆಗಳು ಕೇಳಿ ಬರುತ್ತಿದ್ದವು. ಅಲ್ಲದೇ ಸಾಂಕ್ರಾಮಿಕ ರೋಗದಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಎಲ್ಲರೂ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ, ನಮಾಜು ಮಾಡುವುದು ಉತ್ತಮ ಎಂಬ ಸಂದೇಶ ಭಟ್ಕಳದಲ್ಲಿ ಹರಿದಾಡುತ್ತಲೇ ಇತ್ತು. ಇದಕ್ಕೆ ಇಂಬು ನೀಡುವಂತೆ ಅಲ್ಲಲ್ಲಿ ಪೂಜೆಗಳು ನಡೆಯುತಿದ್ದರೆ, ಮಸೀದಿಗೆ ಬರುವುದು ನಮ್ಮ ಹಕ್ಕು ಎನ್ನುವವರ ಸಂಖ್ಯೆ ಸಾಕಷ್ಟು ದೊಡ್ಡದಾಗಿಯೇ ಇತ್ತು.
ಅಧಿಕಾರಿಗಳ ಮುಂದೆಯೇ ಪರಸ್ಪರ ಆರೋಪಗಳೂ ಸುಳಿದು ಹೋದವು. ಆದರೆ ಯಾವಾಗ ಭಟ್ಕಳದಲ್ಲಿಯೇ ಕೊರೊನಾ ಸೋಂಕಿತರು ಪತ್ತೆಯಾಗಲು ಆರಂಭಿಸಿದರೋ, ಜನರ ಚಿಂತನೆಗಳೇ ಬದಲಾಗಿ ಹೋದವು. ಭಟ್ಕಳದಲ್ಲಿ ಜಾತ್ರೆಯೇ ರದ್ದಾಯಿತು. ಪೂಜೆಗೆ ಬಂದು ಓಡಿ ಹೋಗುವವರು ಕಾಣಸಿಗಲು ಆರಂಭಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಮಸೀದಿಗಳಲ್ಲಿ ನಮಾಜು ಸಂಪೂರ್ಣವಾಗಿ ನಿಂತು ಹೋಯಿತು.
ಅಂತರವನ್ನು ಕಾಯ್ದುಕೊಂಡು ಶುಕ್ರವಾರದ ನಮಾಜಿಗೆ ಅವಕಾಶ ಸಿಗುತ್ತದೆ ಎಂಬ ಭ್ರಮೆಯೂ ಕಳಚಿ ಹೋಯಿತು. ಇದಾಗಿ 4 ವಾರಗಳೇ ಕಳೆದು ಹೋದವು. 4ನೇ ಶುಕ್ರವಾರವೂ ಜುಮ್ಮಾ ಮಸೀದಿಗಳು ಜನರಿಲ್ಲದೇ ಬಿಕೋ ಎಂದವು. ಮುಂಜಾಗೃತಾ ಕ್ರಮವಾಗಿ ಪೊಲೀಸರು ಮಸೀದಿಗಳ ಆವರಣದಲ್ಲಿ ಬೀಡು ಬಿಟ್ಟು ಅಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿದರು.