ಕರ್ನಾಟಕದಲ್ಲಿ ಕೊರೊನಾ ತಡೆಗೆ ಸರಕಾರದ ರಾತ್ರಿ ಕಫ್ರ್ಯೂ; ಭಟ್ಕಳದಲ್ಲಿ ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು
ಭಟ್ಕಳ: ದೂರದ ಸೌದಿಅರೇಬಿಯಾ ಸರಕಾರ ಈಗಾಗಲೇ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿಷೇಧ ಹೇರಿರುವುದರ ನಡುವೆಯೇ, ಕರ್ನಾಟಕ ಸರಕಾರ ಹೊಸ ವರ್ಷ ಆಚರಣೆಗೆ ಒಂದು ವಾರ ಇರುವಂತೆಯೇ ರಾತ್ರಿ ಕಫ್ರ್ಯೂವನ್ನು ವಿಧಿಸಿದೆ. ಈ ಎರಡೂ ಬೆಳವಣಿಗೆ ಭಟ್ಕಳದಲ್ಲಿ ನಿಗದಿಯಾಗಿರುವ ಮದುವೆ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿದೆ.
ಸಾಮಾನ್ಯವಾಗಿ ಇಸ್ಲಾಮ್ ಧರ್ಮೀಯರ ಬಾಹುಳ್ಯ ಇರುವ ಭಟ್ಕಳ ಪಟ್ಟಣ ಪ್ರದೇಶದ ಹೆಚ್ಚಿನ ಜನರು ಉದ್ಯೋಗ ಕಾರಣದಿಂದಾಗಿ ಯುಎಇ ಮಾತ್ರವಲ್ಲದೇ ಸೌದಿಅರೇಬಿಯಾದಲ್ಲಿಯೂ ನೆಲೆ ಕಂಡುಕೊಂಡಿದ್ದಾರೆ. ಕೊರೊನಾ ತಡೆ ಲಾಕ್ಡೌನ್ ತೆರವು ಆರಂಭವಾಗುತ್ತಿದ್ದಂತೆಯೇ ಅರಬ್ ರಾಷ್ಟ್ರಗಳಲ್ಲಿರುವ ಭಟ್ಕಳಿಗರು ನಿಟ್ಟುಸಿರು ಬಿಟ್ಟಿದ್ದರು. ವಿಮಾನ ಹಾರಾಟಕ್ಕೆ ಅನುಮತಿ ಸಿಕ್ಕ ನಂತರ ದುಬೈ, ಸೌದಿಅರೇಬಿಯಾದಿಂದ ಭಟ್ಕಳಕ್ಕೆ, ಭಟ್ಕಳದಿಂದ ಅರಬ್ ರಾಷ್ಟ್ರಗಳತ್ತ ಜನರ ಪ್ರಯಾಣ ಹೆಚ್ಚುತ್ತಾ ಹೋಯಿತು. ಕೊರೊನಾ ಸೋಂಕಿನ ಕಾರಣ ಜೂನ್, ಜುಲೈ, ಆಗಸ್ಟ ( ಪ್ರತಿ ವರ್ಷ ಈ ಅವಧಿಯಲ್ಲಿ ಭಟ್ಕಳ ಪಟ್ಟಣದಲ್ಲಿ ಹೆಚ್ಚಿನ ಮದುವೆ ಕಾರ್ಯಕ್ರಮಗಳು ನೆರವೇರುತ್ತವೆ) ತಿಂಗಳಿನಲ್ಲಿ ನಡೆಯಬೇಕಾಗಿದ್ದ ಮದುವೆ ಕಾರ್ಯಕ್ರಮಗಳನ್ನು ಮುಂದೂಡಿದ್ದ ವರ, ವಧುವಿನ ಕಡೆಯವರು ಮತ್ತೊಮ್ಮೆ ಮದುವೆ ದಿನಾಂಕ ನಿಗದಿಗೆ ಮುಂದಾದರು. ಆ ಕಾರಣದಿಂದಲೇ ಅರಬ್ ರಾಷ್ಟ್ರಗಳಿಗೆ ಹೋಗುವವರು, ಬರುವವರು ಫ್ಲೈಟ್ ಟಿಕೇಟ್ ಬುಕ್ ಮಾಡಿಕೊಳ್ಳಲಾರಂಭಿಸಿದರು. ಆದರೆ ಸೌದಿಅರೇಬಿಯಾ ಆಡಳಿತ ವಿಮಾನ ಹಾರಾಟಕ್ಕೆ ನಿಷೇಧ ಹೇರಿದ ನಂತರ ಜನರು ಫಜೀತಿಗೆ ಬಿದ್ದಿದ್ದಾರೆ. ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೂ ಹೋಗಲಾಗದೇ ಸಂಕಟ ಅನುಭವಿಸುತ್ತಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಇದೀಗ ಕರ್ನಾಟಕದಲ್ಲಿಯೂ ಸರಕಾರ ರಾತ್ರಿ ಕಫ್ರ್ಯೂ ಹೇರಿದ್ದು, ಈಗಾಗಲೇ ನಿಗದಿಯಾಗಿರುವ ( ಭಟ್ಕಳ ಪಟ್ಟಣದಲ್ಲಿ ಹೆಚ್ಚಾಗಿ ರಾತ್ರಿ ವೇಳೆಯಲ್ಲಿಯೇ ಮದುವೆ ಕಾರ್ಯಕ್ರಮಗಳು ನಡೆಯುತ್ತವೆ) ಮದುವೆ ಕಾರ್ಯಕ್ರಮಗಳ ಮೇಲೆ ಕರಿನೆರಳು ಆವರಿಸಿಕೊಂಡಿದೆ. ಲಭ್ಯ ಮಾಹಿತಿಯ ಪ್ರಕಾರ ಕೆಲವರು ಮದುವೆ ಕಾರ್ಯಕ್ರಮಗಳ ಸಮಯ ಬದಲಾವಣೆಗೆ ಮುಂದಾಗಿದ್ದರೆ, ಇನ್ನೂ ಕೆಲವರು 10 ದಿನಗಳ ಮಟ್ಟಿಗೆ ಮದುವೆಯನ್ನು ಮುಂದೂಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಈ ಕೊರೊನಾ ತಡೆ ಲಾಕ್ಡೌನ್ ಮುಂದುವರೆದರೆ ಏನು ಮಾಡುವುದು ಎಂಬ ಚಿಂತೆ ಮತ್ತೆ ಕೆಲವರದ್ದಾಗಿದೆ. ಈ ಕುರಿತು ಪ್ರತಿಕ್ರಿಯೆ ತಾಲೂಕಿನ ಕಾರಗದ್ದೆ ನಿವಾಸಿ ನಸೀಫ್, ನನ್ನ ಹಾಗೂ ಸಹೋದರನ ಮದುವೆ ಜ.4ರಂದು ನಿಗದಿಯಾಗಿದೆ. ಅದಕ್ಕಾಗಿ ತಯಾರಿಯನ್ನೂ ಮಾಡಿಕೊಂಡಿದ್ದೇವೆ. ಆದರೆ ಸೌದಿಅರೇಬಿಯಾ ವಿಮಾನ ಹಾರಾಟವನ್ನು ನಿಷೇಧಿಸಿರುವುದರಿಂದ ಸಹೋದರನಿಗೆ ಭಾರತಕ್ಕೆ ವಾಪಸ್ಸಾಗಲು ಆಗುತ್ತಿಲ್ಲ. ಇನ್ನೊಂದೆಡೆ ಕನಾಟಕ ಸರಕಾರ ರಾತ್ರಿ ಕಫ್ಯೂ ಹೇರಿದೆ. ನಾವು ಸದ್ಯ ಗೊಂದಲದಲ್ಲಿದ್ದೇವೆ ಎಂದು ಹೇಳಿದ್ದಾರೆ. ಇವರಂತೆಯೇ ತಾಲೂಕಿನಲ್ಲಿ ಮದುವೆ ಸಿದ್ಧತೆಯನ್ನು ಮಾಡಿಕೊಂಡಿರುವ 10ಕ್ಕೂ ಹೆಚ್ಚು ಕುಟುಂಬಗಳು ಯಾವುದೇ ನಿರ್ಧಾರಕ್ಕೆ ಬರಲಾಗದ ಸ್ಥಿತಿಯನ್ನು ಎದುರಿಸುತ್ತಿದೆ ಎನ್ನುತ್ತಾರೆ ಇಲ್ಲಿನ ಮಜ್ಲಿಸೇ ಇಸ್ಲಾ ತಂಜೀಮ್ ಕಾರ್ಯಕಾರಿಣಿ ಸದಸ್ಯ ಮುಬಾಶೀರ್ ಹಲ್ಲಾರೆ.