ಭಟ್ಕಳ:ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಜರಗಿಸಲಾಗುವುದು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
ಅವರು ಸೋಮವಾರ ಭಟ್ಕಳಕ್ಕೆ ಭೇಟಿ ನೀಡಿ ಇಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೊರೋನ ವೈರಸ್ ಕುರತಂತೆ ಹಲವು ಸುಳ್ಳು ಸುದ್ದಿಗಳು ಹರಡುತ್ತಿದ್ದು ಕೊರೋನ ಜಿಹಾದ್ ಹೆಸರಲ್ಲಿ ಇತ್ತಿಚೆಗೆ ಸಾಮಾಜಿಕ ಜಾಲಾತಾಣದಲ್ಲಿ ದ್ವೇಷಭರಿತ ಲೇಖನವೊಂದು ವೈರಲ್ ಆಗಿದ್ದು ಪೊಲೀಸ್ ಇಲಾಖೆ ಯಾವ ಕ್ರಮ ಜರಗಿಸಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ, ಅಂತಹ ಸುಳ್ಳು ಸುದ್ದಿ ಹರಡುವವರ ಕುರಿತಂತೆ ತಮ್ಮ ಗಮನಕ್ಕೆ ತಂದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸಲಾಗುವುದು ಎಂದ ಅವರು ದಾಂಡೇಲಿ ಹಾಗೂ ಶಿರಸಿಯಲ್ಲಿ ಎರಡು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಾಕಿದ ಕುರಿತು ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ನಿಯಮ ಮೀರಿದ 46 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಯಲ್ಲಿರುವ ಕೂಲಿ ಕಾರ್ಮಿಕರು, ಮೀನುಗಾರರು ಅಲ್ಲಿಂದ ಬರಲು ಅವಕಾಶವಿಲ್ಲ, ಜಿಲ್ಲಾಡಳಿತ ಅವರಿದ್ದಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಎಂದರು.
ನಾಗರೀಕರು ಪರಸ್ಪರ ದೂರ ಇದ್ದು ಕೊರೊನಾ ವೈರಾಣುವನ್ನು ಶಾಶ್ವತವಾಗಿ ತೊಲಗಿಸಲು ಸಹಕರಿಸಬೇಕು ಕೆಲವೊಂದು ಕಡೆಗಳಲ್ಲಿ ಗುಂಪು ಸೇರುವುದು ಕಂಡು ಬಂದಿದ್ದು ಇನ್ನೂ ಹೆಚ್ಚಿನ ನಿಗಾ ವಹಿಸಲು ಭಟ್ಕಳ ನಗರದಲ್ಲಿ ದ್ರೋಣ್ ಕ್ಯಾಮರಾ ಕಣ್ಗಾವಲು ನಡೆಸಲು ಯೋಚಿಸಲಾಗುತ್ತಿದೆ. ನಾಗರೀಕರಿಗೆ ಕನಿಷ್ಟ ಅಗತ್ಯತೆಗಳನ್ನು ಪೂರೈಸಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗಿದ್ದು ಅದರಲ್ಲಿಯೂ ಭಟ್ಕಳ ನಗರದಲ್ಲಿ ಹೆಚ್ಚಿನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಭಟ್ಕಳದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಆದರೂ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು ಇನ್ನೂ ಹೆಚ್ಚು ಜಾಗೃತಿಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ದಿನಸಿ, ಔಷಧ, ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆ ಇಲ್ಲ, ಕೃಷಿಕರು ತಮ್ಮ ವಸ್ತುಗಳನ್ನು ಅಗತ್ಯ ಮಾರುಕಟ್ಟೆ ತಲುಪಿಸಲು ಕೂಡಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಅವರು ಯಾವುದೇ ಕಾರಣಕ್ಕೂ ಮನೆ ಕೆಲಸಕ್ಕೆ ಹೋಗುವವರು ಮುಂದಿನ ಆದೇಶದ ತನಕ ಹೊಗುವುದನ್ನು ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗೌತಮ್, ಪಿ.ಎಸ್ಐ ಹನುಮಂತ್ ಕುಡಗುಂಟಿ ಉಪಸ್ಥಿತರಿದ್ದರು.