ಹೊಸದಿಲ್ಲಿ: ವೈದ್ಯಕೀಯ ವೆಚ್ಚಕ್ಕಾಗಿ ಸಾಲದ ಬಲೆಗೆ ಬೀಳುತ್ತಿರುವ ಬಡ ಭಾರತೀಯರು: ಕೊರೊನಾ ಸಂಕಷ್ಟ
ಹೊಸದಿಲ್ಲಿ: ಭಾರತದಲ್ಲಿ ಸುಮಾರು ಮೂರನೇ ಎರಡರಷ್ಟು ಭಾರತೀಯರು ಯಾವುದೇ ಆರೋಗ್ಯ ವಿಮೆಯನ್ನು ಹೊಂದದಿರುವುದರಿಂದ ಕೋವಿಡ್-19 ಚಿಕಿತ್ಸೆಗಾಗಿ ಅವರು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುವಂತಹ ಪರಿಸ್ಥಿತಿಯುಂಟಾಗಿದ್ದು, ಸಾವಿರಾರು ಮಂದಿ ಸಾಲದ ಬಲೆಗೆ ಬಿದ್ದಿದ್ದಾರೆಂದು ಬ್ಲೂಮ್ಬರ್ಗ್ ವಾಣಿಜ್ಯ ಸುದ್ದಿಸಂಸ್ಥೆ ವರದಿ ಮಾಡಿದೆ.
ಸರಕಾರಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವುದು ಹಾಗೂ ಕಳಪೆ ಮಟ್ಟದ ಸೌಲಭ್ಯಗಳ ಕಾರಣ ಅನೇಕ ಮಂದಿ ಉತ್ತಮ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳತ್ತ ಮುಖಮಾಡುತ್ತಿರುವುದರಿಂದ ಅವರು ತಮ್ಮ ಜೇಬಿನಿಂದಲೇ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಿದ್ದಾರೆಂದು ಅದು ಹೇಳಿದೆ.
ಜಗತ್ತಿನಾದ್ಯಂತ ಕೊರೋನ ವೈರಸ್ ಬಡವರ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆಯಾದರೂ, ಆರೋಗ್ಯ ಪಾಲನೆಗಾಗಿ ಸರಕಾರ ಮಾಡುತ್ತಿರುವ ವೆಚ್ಚವು ತೀರಾ ಕಡಿಮೆಯಾಗಿರುವ ಭಾರತದಂತಹ ದೇಶಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ವರದಿ ಹೇಳಿದೆ.
ಸಹಸ್ರಾರು ಭಾರತೀಯರು ಕೊರೋನ ಚಿಕಿತ್ಸೆಗಾಗಿ ಚಿನ್ನ, ಆಸ್ತಿ ಅಡವಿಟ್ಟು ಸಾಲ ಪಡೆಯುತ್ತಿದ್ದಾರೆ, ಉಳಿತಾಯ ಕಡಿಮೆಯಾಗಿ ಸಾಲದ ಮೊತ್ತ ಹೆಚ್ಚುತ್ತಲೇ ಹೋಗುತ್ತಿದೆ. ವಾಹನಗಳ ಮಾರಾಟ, ಕಂಪೆನಿಗಳ ಲಾಭ ಹಾಗೂ ಸರಕಾರಿ ಆದಾಯವು ಪಾತಾಳಕ್ಕೆ ಕುಸಿಯತೊಡಗಿದೆ.
ಜನರು ಜವಳಿ, ಉಡುಪುಗಳು, ಪಾದರಕ್ಷೆ ಹಾಗೂ ವೈಯಕ್ತಿಕ ಪಾಲನೆಯ ಸಾಮಗ್ರಿಗಳಿಗೆ ವ್ಯಯಿಸುವುದು ಕಡಿಮೆಯಾಗುತ್ತಿದ್ದು, ಔಷಧಿವಸ್ತುಗಳ ಖರೀದಿಗೆ ಹೆಚ್ಚು ವೆಚ್ಚ ಮಾಡತೊಡಗಿದ್ದಾರೆ. ಹಲವಾರು ಭಾರತೀಯರು ಕೊರೋನ ಚಿಕಿತ್ಸೆಗಾಗಿ ಕಾಳಸಂತೆಯಲ್ಲಿ ಮಾರಾಟವಾಗುವ ದುಬಾರಿ ಬೆಲೆಯ ಜೀವರಕ್ಷಕ ಔಷಧಿಗಳನ್ನು ಖರೀದಿಸಲು ಮೋಟಾರು ಸೈಕಲ್ಗಳು, ಚಿನ್ನ ಮಾತ್ರವಲ್ಲ ಜಾನುವಾರುಗಳನ್ನು ಕೂಡಾ ಮಾರತೊಡಗಿದ್ದಾರೆ ಎಂದು ಬ್ಲೂಮ್ಬರ್ಗ್ ತಿಳಿಸಿದೆ.