ಭಟ್ಕಳ: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ಈಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವುದರ ಮೂಲಕ ನಾಗ್ಪುರದ ಗುಪ್ತ ಕಾರ್ಯ ಸೂಚಿಯನ್ನು ಜಾರಿ ಮಾಡಲು ಹೊರಟಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಶನಿವಾರ ಮುರುಡೇಶ್ವರಕ್ಕೆ ಹೋಗುವ ಮೊದಲು ಭಟ್ಕಳ-ಶಿರೂರು ಟೋಲ್ಗೇಟ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪಠ್ಯ ಪುಸ್ತಕದಲ್ಲಿರುವ ಶ್ರೀನಾರಾಯಣ ಗುರು, ಭಗತ್ ಸಿಂಗ್ ಮತ್ತು ಕುವೆಂಪುರವರ ವಿಚಾರಗಳನ್ನು ತೆಗೆದು ಈಗ ಸ್ವಾತಂತ್ರ್ಯ ಹೋರಾಟದ ವಿರೋಧಿ ಹೆಡಗೆವಾರ್ ವಿಚಾರಗಳನ್ನು ಸೇರಿಸಿ ಸಣ್ಣಮಕ್ಕಳ ಮನಸ್ಸಿನಲ್ಲಿ ದ್ವೇಷವನ್ನು ಬಿತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಇದು ಕರ್ನಾಟಕದ ಸಂಸ್ಕೃತಿಗೆ ಒಗ್ಗುವ ವಿಚಾರವಲ್ಲ. ಕೂಡಲೇ ಇದನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ಬಡವರಿಗೆ ಜನಸಾಮಾನ್ಯರಿಗಾಗಿ ಏನನ್ನೂ ಮಾಡದ ಇವರು ದೌರ್ಜನ್ಯ, ದಬ್ಬಾಳಿಕೆಯನ್ನಷ್ಟೇ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ಜನ ಬೇಸತ್ತಿದ್ದಾರೆ. ಉಡುಪಿಯಲ್ಲಿ ನಡೆದ ಸಾಮರಸ್ಯ ನಡಿಗೆ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ಕರಾವಳಿಯಲ್ಲಿ ಬಿಜೆಪಿಯ ಕುಸಿತ ಕಾಣುತ್ತಿರುವುದರ ಸಂಕೇತವಾಗಿದೆ ಎಂದು ಹರಿಪ್ರಸಾದ್ ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಕಾಂಗ್ರೆಸ್ ಮುಖಂಡರಾದ ಮುಝಮಿಲ್ ಕಾಝಿಯಾ, ತಂಝೀಮ್ ಅಧ್ಯಕ್ಷ ಎಸ್. ಎಂ.ಸೈಯದ್ ಪರ್ವೇಜ್, ಕೆ.ಎಂ.ಅಪ್ಪಾಕ್, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ ಹಾಗೂ ಮತ್ತಿತರರು ಉಪಸ್ಥಿತರಿದ್ದರು.