ಭಟ್ಕಳ: ಧರ್ಮ ರಕ್ಷಣೆಯ ಹೆಸರಿನಲ್ಲಿ ಹಿಂದುಳಿದ ವರ್ಗದವರನ್ನು ಶೋಷಿಸಲಾಗುತ್ತಿದ್ದು, ಅವರಿಗೆ ಆರ್ಥಿಕ ಬಲವನ್ನು ನೀಡಬೇಕಾದ ಅಗತ್ಯ ಇದೆ ಎಂದು ಉತ್ತರಕನ್ನಡ ಲೋಕಸಭಾ ಮೈತ್ರಿ ಅಭ್ಯರ್ಥಿ ಆನಂದ ಆಸ್ನೋಟಿಕರ್ ಹೇಳಿದರು.
ನಮ್ಮ ಯುವಕರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಎಲ್ಲಿಯೋ ದೂರ ಹೋಗಿ ಹೊಟೆಲ್ ಕೆಲಸ ಮಾಡಿಕೊಂಡು ಬದುಕಲು ಯತ್ನಿಸುತ್ತಿದ್ದಾರೆ. ಅಂತಹ ಅಮಾಯಕರ ಹುಡುಗರಿಗೆ ಅನಂತಕುಮಾರ ಏನನ್ನೂ ಮಾಡಿಲ್ಲ. ಉತ್ತರಕನ್ನಡದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಸಮುದ್ರ ನೀರನ್ನು ಶುದ್ಧೀಕರಿಸಿ ಜನರ ಉಪಯೋಗಕ್ಕೆ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕಾಗಿದೆ. ಜಿಲ್ಲೆಯಲ್ಲಿ ರೇಲ್ವೇ ಇನ್ನಷ್ಟು ಅಭಿವೃದ್ಧಿಯಾಗಬೇಕಾಗಿದೆ. ರೈತರ ಸಾಲ ಮನ್ನಾದಂತೆ ಮೀನುಗಾರರ ಸಾಲವನ್ನೂ ಮನ್ನಾ ಮಾಡಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಇತ್ತೀಚಿನ ಕೆಲ ದಿನಗಳಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಿದೆ. ಚಿತ್ತರಂಜನ್, ಅಟಲ್ ಬಿಹಾರಿ ವಾಜಪೇಯಿ, ಬಂಗಾರಪ್ಪ, ಮೋದಿ ಅಲೆಯಲ್ಲಿ ಗೆದ್ದಿದ್ದ ಅನಂತಕುಮಾರಗೆ ಈ ಚುನಾವಣೆಯಲ್ಲಿ ಯಾವ ಅಲೆಯೂ ಕೈ ಹಿಡಿಯುವುದಿಲ್ಲ ಎಂದರು.