ಭಟ್ಕಳ: ಭಟ್ಕಳದಲ್ಲಿ ಹೋಂ ಕ್ವಾರೆಂಟೈನಲ್ಲಿದ್ದ ಸುಮಾರು 212ಕ್ಕೂ ಹೆಚ್ಚು ಮಂದಿಯನ್ನು ಕೂಡಲೆ ಆಸ್ಪತ್ರೆ ಇಲ್ಲವೆ ಹಾಸ್ಟೆಲ್ ಕ್ವಾರೆಂಟೈನ್ ಮಾಡಬೇಕು ಎಂಬ ಅಧಿಕಾರಿಗಳ ಆದೇಶದಿಂದ ಹೌಹಾರಿದ ಭಟ್ಕಳದ ಜನತೆ ಈಗಾಗಲೆ ನೆಗಟಿವ್ ವರದಿ ಬಂದವರನ್ನೂ ಕೂಡ ಆಸ್ಪತ್ರೆ ಇಲ್ಲವೆ ಹಾಸ್ಟೆಲ್ ಕ್ವಾರೆಂಟೈನ್ ಗೆ ಕಳುಹಿಸುತ್ತಿರುವ ಕ್ರಮ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ.
ಭಟ್ಕಳದಲ್ಲಿ ಮೇ 5ರಂದು ಎರಡನೆ ಇನ್ನಿಂಗ್ಸ್ ಆರಂಭಿಸಿದ ಕೊರೋನಾ 29 ಜನರನ್ನು ಸೋಂಕಿತರನ್ನಾಗಿಸಿದೆ. ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಆರಂಭಗೊಂಡಿರುವ ಎರಡನೇ ಅವಧಿಯಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 194 ಜನರ ಗಂಟಲ ದ್ರವವನ್ನು ಪರೀಕ್ಷಿಸಲಾಗಿದ್ದು ಅದರಲ್ಲಿ 29 ಮಂದಿ ಸೋಂಕಿತರಾಗಿ ಕಾರವಾರ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಉಳಿದ ಬಹುತೇಕ ಜನರ ವರದಿಯು ನೆಗೆಟಿವ್ ಬಂದಿದ್ದು ಅವರೆಲ್ಲ ಹೋಂ ಕ್ವಾರೆಂಟೈನ್ನಲ್ಲಿದ್ದಾರೆ.
ಈಗಾಗಲೆ ಹೋಂ ಕ್ವಾರೆಂಟೈನ್ ನಲ್ಲಿದ್ದವರನ್ನು ಕರೆದು ಆಸ್ಪತ್ರೆಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದ್ದು 80ಕ್ಕೂ ಹೆಚ್ಚು ಜನರನ್ನು ಸರ್ಕಾರಿ ಕ್ವಾರೆಂಟೈನ್ ನಲ್ಲಿಡಲಾಗಿದೆ. ಹೋಂ ಕ್ವಾರೈಂಟೈನ್ನಲ್ಲಿದ್ದ ಬಹುತೇಕರು ಮಹಿಳೆಯರೇ ಆಗಿದ್ದು ಈಗಾಗಲೆ ಅವರು 8-10 ದಿನಗಳ ಪೂರ್ಣಗೊಳಿಸಿದ್ದಾರೆ. ಕೇವಲ ಇನ್ನೂ 4-5 ದಿನಗಳು ಮಾತ್ರ ಬಾಕಿ ಇದೆ ಹೀಗಿರುವಾಗ ಆಸ್ಪತ್ರೆ ಅಥವಾ ಹಾಸ್ಟೆಲ್ ಕ್ವಾರೆಂಟೈನ್ ನ ಅವಶ್ಯಕತೆ ಇರಲಿಲ್ಲ ಎಂಬುದು ಹೋಂ ಕ್ವಾರೆಂಟೈನಲ್ಲಿದ್ದವರ ವಾದವಾಗಿದೆ. ಕೇಂದ್ರ ಸರ್ಕಾರ ಹೊರಡಿಸಿದ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ ರೋಗದ ಯಾವುದೇ ಲಕ್ಷಣ ಕಂಡು ಬರದೆ ಇದ್ದರೆ ಹತ್ತು ದಿನಗಳ ನಂತರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದೆ. ಆದರೆ ಇಲ್ಲಿ ವರದಿ ನೆಗೆಟಿವ್ ಬಂದರೂ ಕೂಡ ಮನೆಗಳಿಂಗ ಮತ್ತೆ ಆಸ್ಪತ್ರೆಯಲ್ಲಿ ಕ್ವಾರೆಂಟೈನ್ ಮಾಡಲಾಗುತ್ತಿರುವುದು ಸರಿಯಲ್ಲ. ಈಗ ರಮಝಾನ ಉಪವಾಸದ ಸಮಯವಾದ್ದರಿಂದ ಎಲ್ಲರಿಗೂ ತೋಂದರೆಯಾಗುತ್ತಿದೆ ಎಂದು ಹೋಂ ಕ್ವಾರೆಂಟೈನ್ ನಲ್ಲಿದ್ದು ಈಗ ಆಸ್ಪತ್ರೆ ಕ್ವಾರೆಂಟೈನ್ ಸೇರಿದದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತಂತೆ ಕೊರೋನಾ ಸಂಬಂಧಿಸಿದ ಎಲ್ಲ ರೀತಿಯ ವ್ಯವಸ್ಥೆಗಳುನ್ನು ಮಾಡುತ್ತಿರುವ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ “ಭಟ್ಕಳದಲ್ಲಿ 200ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆ ಆಥವಾ ಹಾಸ್ಟೆಲ್ ಕ್ವಾರೆಂಟೈನ್ ಮಾಡಲು ಗುರುತಿಸಲಾಗಿದೆ. ಆದರೆ ಇಲ್ಲಿರುವ ಸೀಮಿತ ಸ್ಥಳಾವಕಾಶವನ್ನು ಗಮದಲ್ಲಿಟ್ಟುಕೊಂಡು ಕೆಲ ವ್ಯಕ್ತಿಗಳನ್ನು ಹೋಂ ಕ್ವಾರೆಂಟೈನನಲ್ಲೆ ಮುಂದುವರೆಸಲಾಗಿದೆ. ಈಗ ನಮ್ಮ ಜನರಲ್ಲಿ ಜಾಗೃತಿಯುಂಟಾಗಿದ್ದು ಎಲ್ಲ ರೀತಿಯ ಸುರಕ್ಷತಾ ಕ್ರಮವನ್ನು ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಲಕ್ಷಣಗಳು ಕಂಡು ಬಂದಲ್ಲಿ ಸ್ವತಃ ಅವರೆ ಬಂದು ವೈದ್ಯರನ್ನು ಭೇಟಿಯಾಗುತ್ತಿದ್ದಾರೆ ಇದು ಒಳ್ಳೆಯ ಬೆಳವಣೆಗೆ ಎಂದು ತಿಳಿಸಿದ್ದಾರೆ.