ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಕಾರಗದ್ದೆ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಸಿಮೆಂಟ್ ಕಾಂಕ್ರೀಟ್ ರಸ್ತೆಯು ಕಿತ್ತು ಹೋಗಿದ್ದು, ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರವಿವಾರ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಕಾರಗದ್ದೆಯಲ್ಲಿ ಜನರ ಅನುಕೂಲಕ್ಕಾಗಿ ರು.15 ಲಕ್ಷ ವ್ಯಯಿಸಿ 1.5ಕಿಮೀ. ಉದ್ದದ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಇದಕ್ಕೂ ಪೂರ್ವದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಒಳಚರಂಡಿ ಮ್ಯಾನ್ಹೋಲ್ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಆದರೆ 3 ತಿಂಗಳ ಮಳೆಗಾಲದ ಅವಧಿಯಲ್ಲಿ ರಸ್ತೆ ಸಂಪೂರ್ಣ ಕುಸಿದು ಹೋಗಿದ್ದು, ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಿಲ್ಲದಂತಾಗಿದೆ. ಸ್ಥಳೀಯವಾಗಿ 40-45 ಮನೆಗಳಿದ್ದು, ಕಳೆದ ಒಂದು ವಾರದಿಂದ ಪರಸ್ಪರ ಸಂಪರ್ಕವೇ ತಪ್ಪಿ ಹೋದಂತಾಗಿದೆ. ಕಾರಗದ್ದೆ ಜನರಿಗೆ ದಿಗ್ಬಂಧನ ವಿಧಿಸಿದಂತಾಗಿದ್ದು, ಕನಿಷ್ಠ ಆಸ್ಪತ್ರೆಗೆ ತೆರಳಲೂ ಆಗುತ್ತಿಲ್ಲ. ಪ್ರಸಕ್ತ ರಸ್ತೆ ಅವ್ಯವಸ್ಥೆಗೆ ಗುಣಮಟ್ಟವಿಲ್ಲದ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯೇ ಕಾರಣವಾಗಿದೆ. ಈ ಕಾಮಗಾರಿಗಳಲ್ಲಿ ಲಕ್ಷಾಂತರ ರುಪಾಯಿ ಭ್ರಷ್ಟಾಚಾರ ನಡೆದಿದ್ದು, ರಸ್ತೆ ಕುಸಿದು ಬಿದ್ದು ಹಲವು ದಿನಗಳೇ ಕಳೆದು ಹೋದರೂ ಯಾವ ಅಧಿಕಾರಿಯೂ ಇತ್ತ ತಲೆ ಹಾಕಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ದತ್ತಾತ್ರೇಯ ನಾಯ್ಕ, ಈ ಪರಿಯಲ್ಲಿ ರಸ್ತೆಯನ್ನು ಹಾಳುಗೆಡುಹಿರುವುದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ, ಮುಂದಿನ ಒಂದು ವಾರದ ಒಳಗೆ ರಸ್ತೆ ದುರಸ್ತಿ ಮಾಡಬೇಕು, ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದೇ ಇದ್ದರೆ ಪಟ್ಟಣ ಪಂಚಾಯತ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುತ್ತೇವೆ, ಜನರಿಗೆ ಉಂಟಾಗುವ ಹಾನಿಯ ಬಗ್ಗೆ ಅಧಿಕಾರಿಗಳೇ ಪರಿಹಾರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಕ್ರಪ್ಪ ನಾಯ್ಕ, ರವಿ ನಾಯ್ಕ, ಶ್ರೀಧರ ನಾಯ್ಕ, ಮಂಜುನಾಥ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.