ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸುಲಭವಾಗಿ ಸೆಳೆದು, ಮತ ಗಿಟ್ಟಿಸಿಕೊಳ್ಳಬಹುದು ಎಂದು ಯೋಚಿಸಿದವರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ. ಸೋಶಿಯಲ್ ಮೀಡಿಯಾ ಮೂಲಕ ಮಾಡುವ ಪ್ರಚಾರಕ್ಕೆ, ಸುಳ್ಳು ಸುದ್ದಿಗಳಿಗೆ ಆಯೋಗ ಕೊಕ್ಕೆ ಹಾಕಿದೆ.
ಹೌದು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ಕಡ್ಡಾಯವಾಗಿ ತಾವು ಹೊಂದಿರುವ ಸೋಶಿಯಲ್ ಮೀಡಿಯಾ ಖಾತೆಗಳ ಮಾಹಿತಿ ನೀಡಬೇಕು. ಜೊತೆಗೆ ತನ್ಮೂಲಕ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲು ಎಲ್ಲಾ ಸೋಶಿಯಲ್ ಮೀಡಿಯಾಗಳು ಕಡ್ಡಾಯವಾಗಿ ಅಧಿಕಾರಿಗಳನ್ನು ನೇಮಿಸಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ ಕಟ್ಟಾಜ್ಞೆ ಹೊರಡಿಸಿದ್ದಾರೆ.
ಲೋಕಸಭೆ ಚುನಾವಣೆಗೆ ದಿನಾಂಕ ಘೋಷಿಸುವ ಮುನ್ನ ಅವರು ಚುನಾವಣಾ ಸಿದ್ಧತೆಗಳು ಹಾಗೂ ಆಯೋಗ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಸೋಶಿಯಲ್ ಮೀಡಿಯಾ ಮೂಲಕ ಜನರನ್ನು ಸೆಳೆಯುವ ತಂತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾವು ಚುನಾವಣಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿ ಆನ್ಲೈನ್ ಸಂಪರ್ಕ ಸೇವೆಗಳ ಸಂಬಂಧ ನೀತಿ ಸಂಹಿತೆಯನ್ನು ರೂಪಿಸುತ್ತಿದೆ ಎಂದು ಹೇಳಿದರು. ಇದರಂತೆ ಸೋಶಿಯಲ್ ಮೀಡಿಯಾಗಳಲ್ಲಿ ರಾಜಕೀಯ ಜಾಹೀರಾತಿಗೆ ಪೂರ್ವ ದೃಢೀಕರಣ ಪಡೆಯುವುದು ಅಗತ್ಯವಿರುತ್ತದೆ.
ಗೂಗಲ್, ಫೇಸ್ಬುಕ್ , ಟ್ವಿಟ್ಟರ್ ಹಾಗೂ ಯೂಟೂಬ್ಗಳು ರಾಜಕೀಯ ಪಕ್ಷಗಳಿಂದ ಬರುವ ಜಾಹೀರಾತುಗಳನ್ನು ಪರಿಶೀಲನೆಗೆ ಒಳಪಡಿಸಬೇಕು. ಸೋಶಿಯಲ್ ಮೀಡಿಯಾಗಳಿಗಾಗಿ ಖರ್ಚು ಮಾಡುವ ಮೊತ್ತವೇ ಅಭ್ಯರ್ಥಿ ಇಡೀ ಚುನಾವಣೆಗಾಗಿ ಖರ್ಚು ಮಾಡುವ ಮೊತ್ತದಲ್ಲಿ ಸೇರಿರುತ್ತದೆ ಎಂದರು