ಮುರುಡೇಶ್ವರದಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಸಿಎಸ್ ಮಹ್ಮದ್ ರೋಷನ್ ಚಾಲನೆ
ಭಟ್ಕಳ: ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಭಟ್ಕಳ, ಗ್ರಾಪಂ ಮಾವಳ್ಳಿ 1 ಹಾಗೂ ಮಾವಳ್ಳಿ2ರ ಸಹಭಾಗಿತ್ವದಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ 2018ರ ಅಂಗವಾಗಿ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಹಮ್ಮಿಕೊಳ್ಳಲಾದ ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹ್ಮದ್ ರೋಷನ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ವಚ್ಛತೆ ಎನ್ನುವುದು ಒಂದು ದಿನದ ಕೆಲಸವಲ್ಲ. ಅದು ನಮ್ಮ ಸಂಸ್ಕøತಿಯಾಗಬೇಕು. ಭಾರತದಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಹೆಚ್ಚಿನ ಕಾಳಜಿ ತೋರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಮುರುಡೇಶ್ವರ ವಿಶ್ವ ಪ್ರಸಿದ್ಧವಾಗಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ಸಮುದ್ರ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಗ್ರಾಮ ಪಂಚಾಯತ, ಲಯನ್ಸ್ ಕ್ಲಬ್ನ ಸದಸ್ಯರು ಇಂದಿನ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಕೆಲಸ ಇಲ್ಲಿಗೆ ನಿಲ್ಲಬಾರದು. ನನಗೆ ಕೆಲಸ ಮಾಡಲು ಉತ್ತಮ ಸ್ಥಳ ದೊರೆತಿದ್ದು, ಇಲ್ಲಿನ ಸ್ವಚ್ಛತೆಯನ್ನು ಪರೀಕ್ಷಿಸಲು ಮತ್ತೊಮ್ಮೆ ಭೇಟಿ ನೀಡುತ್ತೇನೆ ಎಂದು ವಿವರಿಸಿದರು. ಭಟ್ಕಳ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ, ತಹಸೀಲ್ದಾರ ವಿ.ಎನ್.ಬಾಡ್ಕರ್, ಗ್ರಾಮ ಪಂಚಾಯತ ಮಾವಳ್ಳಿ 1ರ ಅಧ್ಯಕ್ಷೆ ಮಂಗಲಾ ಈಶ್ವರ ನಾಯ್ಕ, ತಾಲೂಕು ಪಂಚಾಯತ ಕಾರ್ಯನಿವಣಾಧಿಕಾರಿ ಸಿ.ಟಿ.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ ಸಿಬ್ಬಂದಿಗಳು, ಬೀಚ್ ರಕ್ಷಣಾ ಸಿಬ್ಬಂದಿಗಳು, ಲಯನ್ಸ್ ಕ್ಲಬ್ ಸದಸ್ಯರೂ ಸೇರಿದಂತೆ 25ಕ್ಕೂ ಅಧಿಕ ಜನರು ಸಿಎಸ್ ಮಹ್ಮದ್ ರೋಷನ್ ನೇತೃತ್ವದಲ್ಲಿ ಶ್ರಮದಾನ ಮಾಡಿದರು. ನಂತರ ಬೀಚ್ನಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಬೋಟ್ ವ್ಯವಸ್ಥೆಗೆ ಪ್ರಯತ್ನ: ಮುರುಡೇಶ್ವರದಲ್ಲಿ ಸಮುದ್ರಕ್ಕೆ ಇಳಿದು ಅಪಾಯಕ್ಕೆ ಸಿಲುಕುವ ಪ್ರವಾಸಿಗರ ತುರ್ತು ರಕ್ಷಣೆಗಾಗಿ ಯಾಂತ್ರಿಕ ದೋಣಿ ಒದಗಿಸುವ ಬಗ್ಗೆ ಪ್ರಯತ್ನಿಸಲಾಗುವುದು ಎಂದು ಜಿಪಂ ಮಹ್ಮದ್ ರೋಷನ್ ಹೇಳಿದರು. ಅವರು ರವಿವಾರ ಲೈಫ್ ಗಾರ್ಡ ಸಿಬ್ಬಂದಿಗಳಿಂದ ಇಲ್ಲಿನ ಅಗತ್ಯತೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು. ದೋಣಿ ಬೇಡಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇಲ್ಲಿನ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.