"ಸ್ವಚ್ಛ ಗ್ರಾಮ - ಸ್ವಚ್ಛ ಪರಿಸರ" ಪಾಕ್ಷಿಕಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಕಾರವಾರ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ "ಸ್ವಚ್ಛ ಗ್ರಾಮ - ಸ್ವಚ್ಛ ಪರಿಸರ" ಪ್ರಾಕ್ಷಿಕಾಚರಣೆ ಕಾರ್ಯಕ್ರಮಕ್ಕೆ ಉತ್ತರಕನ್ನಡ ಜಿಲ್ಲಾ ಪಂಚಾಯತ ಕಾರ್ಯಾಲಯದಲ್ಲಿ ಅದ್ದೂರಿಯಾಗಿ ಇಂದು ಚಾಲನೆ ನೀಡಲಾಯಿತು.
ಉತ್ತರಕನ್ನಡ ಜಿಲ್ಲಾ ಪಂಚಾಯತ ಹಾಗೂ ಸ್ವಚ್ಛ ಭಾರತ ಮಿಷನ್ ಸಹಯೋಗದಲ್ಲಿ ಕಾರವಾರದ ಜಿಲ್ಲಾ ಪಂಚಾಯತ ಆವರಣದಲ್ಲಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ವಿವಿಧ ಜಾತಿಯ ಸಸಿಗಳನ್ನು ಜಿಲ್ಲಾ ಪಂಚಾಯತ ಕಚೇರಿಯ ಮುಂಭಾಗದಲ್ಲಿ ನೆಡಲಾಯಿತು. ಆರಂಭದಲ್ಲಿ ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ(ಆಡಳಿತ)ನಾಗೇಶ ರಾಯ್ಕರ್, ಮುಖ್ಯ ಲೆಕ್ಕಾಧಿಕಾರಿ ಸಂಗೀತಾ ಭಟ್, ಜಿಲ್ಲಾ ಯೋಜನಾಧಿಕಾರಿ ವಿ ಎಂ ಹೆಗಡೆ, ಸಾಮಾಜಿಕ ಅರಣ್ಯ ಡಿ ಎಪ್ ಓ ಉದಯ ನಾಯ್ಕ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಪರಿಸರ ರಕ್ಷಣೆ ಕುರಿತು ಪ್ರತಿಜ್ಞೆ ವಿಧಿಯನ್ನು ಭೋದಿಸಲಾಯಿತು.
ಬಳಿಕ ಮಾತನಾಡಿದ ನಾಗೇಶ್ ರಾಯ್ಕರ್ ಜೂನ್ 5 ರಿಂದ 19 ರವರೆಗೆ ಸ್ವಚ್ಛ ಗ್ರಾಮ - ಸ್ವಚ್ಛ ಪರಿಸರದ ಆಚರಣೆ ಪ್ರಯುಕ್ತ ಪಾಕ್ಷಿಕಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ದ್ರವ ತ್ಯಾಜ್ಯ ವಿಲೇವಾರಿಯನ್ನು ಮನೆ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಕಿರು ಚಿತ್ರ, ಯಶೋಗಾಥೆ, ಉತ್ತಮ ಬರಹಗಳನ್ನು ಆಹ್ವಾನಿಸಲು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಶಾಲಾ, ಕಾಲೇಜು, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜಿಲ್ಲಾ ಪಂಚಾಯತ ಕಚೇರಿಗೆ ಇ ಮೇಲ್ ಮೂಲಕ ಸಲ್ಲಿಸುವಂತೆ ಕರೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಸ್ವಚ್ಛ ಭಾರತ ಮಿಷನ್ ಮಾನವ ಸಂಪನ್ಮೂಲ ಸಮಾಲೋಚಕ ಸೂರ್ಯನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು. ಎಸ್ ಬಿ ಎಂ ಮಾಹಿತಿ ಶಿಕ್ಷಣ ಸಂವಹನ ಸಮಾಲೋಚಕ ಕಡತೋಕಾ ಮಂಜು, ಘನ ಮತ್ತು ದ್ರವ ತ್ಯಾಜ್ಯ ಸಮಾಲೋಚಕ ಅಶ್ವಿನ್ ನಾಯ್ಕ, ಶುಚಿತ್ವ ಮತ್ತು ನೈರ್ಮಲ್ಯ ಸಮಾಲೋಚಕ ಈರಣ್ಣ ನಬಾಪುರೆ ಕಾರ್ಯಕ್ರಮ ಸಂಯೋಜಿಸಿದರು.