ಅತ್ತೆ, ಮಾವ, ಭಾವಮೈದುನರಿಂದ ಮಾರಣಾಂತಿಕ ಹಲ್ಲೆ : ಅಳಿಯನಿಂದ ಪೊಲೀಸರಿಗೆ ದೂರು
ಚಿಂತಾಮಣಿ,: ಕ್ಷುಲ್ಲಕ ಕಾರಣವೊಡ್ಡಿ ನನ್ನ ಅತ್ತೆ, ಮಾವ, ಭಾವಮೈದುನರು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆಂದು, ಅವರ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕೆಂದು ಚಿಂತಾಮಣಿ ನಗರ ಪೊಲೀಸರಿಗೆ ಟಿಪ್ಪು ನಗರದ ವಾಸಿ ಅರ್ಷದ್ಖಾನ್ ಬಿನ್ ಇಬ್ರಾಹಿಂ ಎಂಬುವರು ದೂರನ್ನು ಸಲ್ಲಿಸಿದ್ದಾರೆ.
ಟಿಪ್ಪು ನಗರದ ವಾಸಿಗಳಾದ ನಹೀಂ ಎಂಬುವರ ಮಗಳಾದ ಶಿರನ್ತಾಜ್ ಎಂಬಾಕೆಯನ್ನು ವಿವಾಹವಾಗಿದ್ದು, ಈ ಹಿಂದೆ ನನ್ನ ಮೇಲೆ ಅತ್ತೆ, ಮಾವ ವರದಕ್ಷಿಣೆ ದೂರನ್ನು ದಾಖಲಿಸಿದ್ದು, ನಗರದ ನ್ಯಾಯಾಲಯದಲ್ಲಿ ಇಬ್ಬರೂ ಒಪ್ಪಿ ರಾಜಿ ಮಾಡಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ಅತ್ತೆಯವರ ಮನೆ ಬಳಿ ಅವರ ಮನೆಯೊಂದಕ್ಕೆ ಬಾಡಿಗೆ ನೀಡುತ್ತಾ ವಾಸವಾಗಿದ್ದೇವೆ.
ಆದರೆ ಫೆ. ೧೮ ರಂದು ನನ್ನ ಮಗನನ್ನು ಶಾಲೆಗೆ ಕರೆದುಕೊಂಡು ಹೋಗುವ ವಿಚಾರದಲ್ಲಿ ನನ್ನ ಹೆಂಡತಿ ಶಿರನ್ತಾಜ್ ನನ್ನನ್ನು ಬೈದರೂ ತಲೆ ಕಡಿಸಿಕೊಳ್ಳದೆ ಸುಮ್ಮನಿದ್ದೆ. ಆದರೂ ಅದೇ ದಿನ ಸಂಜೆ ೬ ಗಂಟೆಯಲ್ಲಿ ನನ್ನ ಮಾವ ನಹೀಂ ನನ್ನ ಮೊಬೈಲ್ಗೆ ಕರೆ ಮಾಡಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ಧಾಣದ ಸಮೀಪವಿರುವ ಬೋವಿ ಕಾಲೋನಿಯ ಬಳಿ ಬರುವಂತೆ ಹೇಳಿದರು. ಅದರಂತೆ ನಾನು ಹಣ್ಣುಗಳ ವ್ಯಾಪಾರ ಮಾಡುವ ಗಾಡಿಯೊಂದಿಗೆ ಅಲ್ಲಿಗೆ ತೆರಳಿದಾಗ ಅತ್ತೆ ಗುಲಾಬ್ಜಾನ್, ಮಾವ ನಹೀಂ, ಭಾವಮೈದ ಸಾಧಿಕ್ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು.
ನನ್ನನ್ನು ಮಾವ ಮತ್ತು ಅತ್ತೆಯವರು ಬಿಗಿಯಾಗಿ ಹಿಡಿದುಕೊಂಡು ಇವನನ್ನು ಸಾಯಿಸಿ ಬಿಡಿ ಎಂದು ಹೇಳುತ್ತಿದ್ದಂತೆ ಭಾವಮೈದ ಸಾಧಿಕ್ ನನ್ನ ಗಾಡಿಯಲ್ಲಿದ್ದ ಹಣ್ಣುಗಳು ಕತ್ತರಿಸುವ ಚಾಕುವಿನಿಂದ ನನ್ನ ಕುತ್ತಿಗೆಯ ಎಡ ಭಾಗಕ್ಕೆ ಗಾಯಗೊಳಿಸಿದ್ದು, ತದನಂತರ ಅದೇ ಚಾಕುವಿನಿಂದ ಮಾವ ನಹೀಂ ನನ್ನ ಬಲಗೈಗೆ ಗಾಯಗೊಳಿಸಿದ. ಅತ್ತೆ ನನ್ನ ಮರ್ಮಸ್ಥಾನಕ್ಕೆ ಕಾಲಿನಿಂದ ಒದ್ದು ನೋವುಂಡು ಮಾಡಿರುತ್ತಾರೆ. ಅಷ್ಟರಲ್ಲಿ ಅದೇ ಹಾದಿಯ ಮೂಲಕ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ನನ್ನ ಸ್ನೇಹಿತರಾದ ಸಾಧಿಕ್ ಖಾನ್, ರಿಯಾಜ್ ಎಂಬುವರು ಜಗಳ ಬಿಡಿಸಿ ನನ್ನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗಾಗಿ ದಾಖಲು ಮಾಡಿರುತ್ತಾರೆ.
ಆಸ್ಪತ್ರೆಯಲ್ಲಿದ್ದ ನನಗೆ ಹಿರಿಯರು ರಾಜಿ ಪಂಚಾಯ್ತಿ ಮಾಡುವುದಾಗಿ ತಿಳಿಸಿದ್ದರಿಂದ ಸುಮ್ಮನಿದ್ದು, ಆದರೆ ಇದುವರೆವಿಗೂ ಯಾರೊಬ್ಬರು ಪಂಚಾಯ್ತಿಗೆ ಬಾರದ ಕಾರಣ ತಡವಾಗಿ ದೂರು ಸಲ್ಲಿಸಿದ್ದು, ನನ್ನನ್ನು ಹೊಡೆದು ಗಾಯ ಪಡಿಸಿದ ಅತ್ತೆ, ಮಾವ ಹಾಗೂ ಭಾವಮೈದನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಅರ್ಷದ್ಖಾನ್ ನೀಡಿರುವ ದೂರಿನಲ್ಲಿ ತಿಳಿಸಿದ್ದು, ದೂರುದಾರ ನೀಡಿರುವ ದೂರಿನಂತೆ ನಗರ ಪೊಲೀಸರು ದೂರನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.