ಧಾರವಾಡ : ಮೊಬೈಲ್ ನಿಂದ ಮಕ್ಕಳ ಜೀವನ ಹಾಳಾಗಬಾರದು. ಸಾಮ್ರಾಟ ಅಶೋಕ ಕ್ರಿಸ್ತ ಪೂರ್ವ ಕಾಲದಲ್ಲಿಯೇ ಪರಿಸರ ಸಂರಕ್ಷಣೆ ಕಾರ್ಯ ಕೈಗೊಂಡಿದ್ದರು. ಮಕ್ಕಳು ಇತಿಹಾಸ ಅರಿತು ಮುನ್ನಡೆಯಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರೇರಣಾ ಸಭಾಭವನದಲ್ಲಿ ಏರ್ಪಡಿದ್ದ ವಿಶ್ವ ಪರಿಸರ ದಿನಾಚರಣೆ 2022 ರ ಅಂಗವಾಗಿ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಜ್ಞಾನವನ್ನು ಹೊಂದಬೇಕು. ಶಿಕ್ಷಕರು ಸಮಾಜವನ್ನು ಕಾಪಾಡುವುದರ ಜೊತೆಗೆ ಮಕ್ಕಳಿಗೆ ಸರಿಯಾದ ಮಾಹಿತಿ, ಜವಾಬ್ದಾರಿಗಳ ಬಗ್ಗೆ ತಿಳುವಳಿಕೆ ನೀಡಬೇಕು. ಇರುವುದೊಂದೆ ಭೂಮಿ ಅದನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಪರಿಸರ ಅಧಿಕಾರಿ ಶೋಭಾ ಪೋಳ ಮಾತನಾಡಿ, ಸಣ್ಣ ಸಸಿಯು ಮುಂದೆ ದೊಡ್ಡ ಮರವಾಗಿ ನೆರಳನ್ನು ಕೊಡುತ್ತದೆ. ನಮ್ಮ ಪರಿಸರದಲ್ಲಿ ಲಕ್ಷಾಂತರ ಜೀವರಾಶಿಗಳಿವೆ. ಪ್ರಕೃತಿಯಿಂದ ಕಲಿಯಬೇಕಾದ ಅಂಶಗಳು ಸಾಕಾಷ್ಟು ಇವೆ. ಅದರ ಜೊತೆಗೆ ಸಾಮರಸ್ಯದಿಂದ ಬದುಕೋಣ. ಪರಿಸರದ ಸಂರಕ್ಷಣೆ ಮಾಡೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಚ್.ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆಯ ಗಣಕ ಯಂತ್ರ ವಿಭಾಗದ ಮುಖ್ಯಸ್ಥೆ ವಿ.ಆರ್. ತಿವಾರಿ ಮಾತನಾಡಿ, ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಪರಿಸರದ ಮಹತ್ವವನ್ನು ತಿಳಿದುಕೊಳ್ಳಲು ಉಪಯೋಗವಾಗುತ್ತದೆ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ಹೊಂದಿ ಅದನ್ನು ಸಮರ್ಥವಾಗಿ ಕಾಪಾಡಿಕೊಳ್ಳಬೇಕು ಎಂದರು.
ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ ಉಪಸ್ಥಿತರಿದ್ದರು.
ಶಿಕ್ಷಕಿ ವಾಣಿಶ್ರೀ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ವೈಜ್ಞಾನಿಕ ಅಧಿಕಾರಿ ಲಲಿತಾ ಬಿ. ದೊಡವಾಡ ವಂದಿಸಿದರು. ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.