ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು 18.8.2019ರಂದು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮಕ್ಕೆ ಭೇಟಿ ನೀಡಿದರು. ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ಕಾಳಜಿ ಕೇಂದ್ರಗಳಿಗೆ ಕರೆದು ಕೊಂಡು ಹೋಗುವುದರೊಂದಿಗೆ ಪ್ರವಾಹದ ಪರಿಸ್ಥಿತಿಯನ್ನು ವಿಜಯಭಾಸ್ಕರ್ ಅವರಿಗೆ ಮನವರಿಗೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ವಿಜಯಭಾಸ್ಕರ್ ಅವರು ಮಾತನಾಡುತ್ತ, ನೆರೆಯಿಂದ ಹಾಗೂ ಮಳೆಯಿಂದ ಪೂರ್ತಿ ಮನೆ ಕುಸಿದಿದ್ದರೆ ಮನೆ ನಿರ್ಮಾಣಕ್ಕೆ ಸರ್ಕಾರ 5ಲಕ್ಷ ಪರಿಹಾರವನ್ನು ನೀಡಲಿದೆ. ಅಲ್ಲದೆ ಮನೆ ನಿರ್ಮಾಣ ಮಾಡುವವರಿಗೆ 10 ತಿಂಗಳು ಕಾಲ ಪ್ರತಿ ತಿಂಗಳು 5 ಸಾವಿರ ಬಾಡಿಗೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣ 50 ಸಾವಿರ ನೀಡಲಾಗುವುದು. ಜಿಲ್ಲಾಧಿಕಾರಿಗಳು ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ವಿಜಯಭಾಸ್ಕರ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆಯವರು ವಿಜಯಭಾಸ್ಕರ್ ಅವರಿಗೆ ಮನವಿಯನ್ನು ಸಲ್ಲಿಸುತ್ತ, ಪ್ರವಾಹ ಸಂದರ್ಭದಲ್ಲಿ ರಾಯಬಾಗ ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಸಂಪರ್ಕ ಕಡಿತಗೊಳ್ಳುವುದರಿಂದ ಜನ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಪ್ಲೈಓವರ್ ಎತ್ತರ ಸೇತುವೆಯ ಅಗತ್ಯವಿದೆ ಎಂದು ಮನವಿ ಮಾಡಿದರು. ಅಂಕಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುವಂತ ಪ್ರವಾಹ ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಪ್ರತಿವರ್ಷ ಮಳೆ ಹೆಚ್ಚಾಗುವುದರಿಂದ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹ ಪರಸ್ಥಿತಿಯು ಎದುರಾಗುವುದರಿಂದ ಮುಳುಗಡೆಯಾಗುವ ಗ್ರಾಮಗಳಿಗೆ ರಸ್ತೆ ಸಂಪರ್ಕ ಸುಲಭವಾಗುವಂತೆ ರಸ್ತೆಗಳ ಸಂಪರ್ಕವನ್ನು ಎತ್ತರಿಸಬೇಕು. ಜುಗೂಳ, ಮಂಗಾವತಿ ಸೇರಿದಂತೆ ಮುಂತಾದ ಗ್ರಾಮಗಳ ಸ್ಥಳಾಂತರ ಅಗತ್ಯವಿದೆ ಎಂದು ಪ್ರತಿಪಾದಿಸಿದರು.