ಕಾರವಾರ : ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿಯೇ ಆನ್ಲೈನ್ ಮೂಲಕ ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಹೊಸ ಮತದಾರರ ನೋಂದಣಿ ಕಾರ್ಯ ಪ್ರಾರಂಭಿಸುವುದರೊಂದಿಗೆ ಮತದಾನ ಪ್ರಕ್ರೀಯೆ ಕುರಿತು ವಿದ್ಯಾರ್ಥಿಗಳನ್ನೊಳಗೊಂಡ ಉತ್ತಮ ಅಣಕು ಕಿರುಚಿತ್ರ ತಯಾರಿಸುವಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ಅವರು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲ ಅರ್ಹ ಮತದಾರರು ಹೆಸರು ನೋಂದಣಿ ಮಾಡಲು ಅಗತ್ಯ ಕ್ರಮವಹಿಸಬೇಕು. ಈಗಾಗಲೇ ಹೆಸರು ನೋಂದಾಯಿತ ಹಾಗೂ ನೋಂದಾಯಿಸಬೇಕಿರುವ ಅರ್ಹ ಮತದಾರರ ಯಾದಿಯನ್ನು ಸಿದ್ದಪಡಿಸಬೇಕು. ಜಿಲ್ಲಾ ಮಟ್ಟದ ತರಬೇದಾರರಿ(ಡಿಎಲ್ಎಂಟಿ)ಗೆ ಚುನಾವಣೆ ಹಾಗೂ ಮತದಾನದ ಪ್ರಕ್ರಿಯೆ, ಆನ್ಲೈನ್ ಮೂಲಕ ಹೆಸರು ನೋಂದಾಯಿಸುವ ಕುರಿತು ವಿಶೇಷ ತರಬೇತಿ ಆಯೋಜಿಸಬೇಕು. ನಂತರ ತರಬೇತಿಗೊಂಡ ಡಿಎಲ್ಎಂಟಿಗಳಿಂದ ತಾಲೂಕಾ, ಹೋಬಳಿ ಮಟ್ಟದಲ್ಲಿ ತರಬೇತಿ ಆಯೋಜಿಸಿ ಮತದಾನ ಪ್ರಕ್ರಿಯೆ ಬಗ್ಗೆ ಅರಿವು ಮೂಡಿಸಬೇಕಿದೆ. ವಿಶೇಷವಾಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಹೆಸರು ನೋಂದಣಿ ಮಾಡುವ ಮತ್ತು ಮತದಾನ ಪ್ರಕ್ರಿಯೆಯ ಎಲ್ಲ ಅಂಶಗಳನ್ನು ಒಳಗೊಂಡ ಬಗ್ಗೆ ವಿದ್ಯಾರ್ಥಿಗಳನ್ನೊಳಗೊಂಡ 4 ನಿಮಿಷದ ಅತ್ಯುತ್ತಮ ಅಣಕು ಮತದಾನ ಕಿರುಚಿತ್ರ ತಯಾರಿಕೆಗೆ ಒತ್ತು ನೀಡಬೇಕು. ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಂದ ನಿರ್ಮಾಣಗೊಳ್ಳುವ ಅತ್ತುತ್ತಮ ಅಣಕು ಮತದಾನ ಕಿರುಚಿತ್ರಕ್ಕೆ 10 ಸಾವಿರ ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಸಿಇಒ ತಿಳಿಸಿದರು.
ಮತದಾರರಿಗೆ ಹೆಸರು ನೋಂದಣಿ, ಚುನಾವಣೆಯ ಪ್ರಕ್ರಿಯೆ ಹಾಗೂ ಮತದಾನದ ಬಗ್ಗೆ ಆನ್ ಲೈನ್ ಮೂಲಕ ಜಾಗೃತಿ ಮೂಡಿಸುವುದು ಸೂಕ್ತವಾಗಿದೆ. ಚುನಾವಣೆಗಳು ಬೇರೆ ಬೇರೆ ಆಯಾಮಗಳಲ್ಲಿ ನಡೆಯುತ್ತಿದ್ದು, ಭಾವಿ ಮತದಾರರಿಗೆ ಚುನಾವಣೆಯ ಪಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಬೇಕಿದೆ. ಮತದಾರರ ಚುನಾವಣಾ ಸುರಕ್ಷತಾ ಕ್ಲಬ್ (ಇಐಅ)ನ ಮೂಲಕ ಎಲ್ಲ ಮತದಾರರಿಗೆ ಚುನಾವಣೆಯ ಚಟುವಟಿಕೆಗಳ ಬಗ್ಗೆ ಪರಿಷ್ಕøತ ಮಾರ್ಗಸೂಚಿಗಳನ್ನು ತರಬೇತಿದಾರರಿಗೆ ನೀಡಲು ಸಾಧ್ಯವಾಗುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕ್ವೀಜ್, ಭಾಷಣ, ಪ್ರಬಂಧ ಸೇರಿದಂತೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಮತದಾನದ ಕುರಿತು ಜಾಗೃತಿ ಮೂಡಿಸಲು ಸಹಾಯಕವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆನ್ಲೈನ್ ಝುಮ್ ಮಿಟಿಂಗ್ನ ಮೂಲಕ ಮತದಾನದ ಮಹತ್ವ ತಿಳಿಸಿದಾಗ ಜಾಗೃತಿ ಜೊತೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಯುವ ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಿದರೆ ಅವರು ತಮ್ಮ ಕುಟುಂಬ ವರ್ಗಕ್ಕೂ ಮಾಹಿತಿ ನೀಡುತ್ತಾರೆ. ಹೀಗಾಗಿ ಯುವಕ ಯುವತಿಯರ ಜೊತೆಗೆ ಸಾರ್ವಜನಿಕರಿಗೂ ಅರಿವು ಮೂಡಿಸಿದಂತಾಗುತ್ತದೆ. ಮತದಾನ ನಮ್ಮ ಸಾರ್ವತ್ರಿಕ ಹಕ್ಕು. ಹಕ್ಕನ್ನು ಚಲಾಯಿಸುವುದು ಸಂವಿಧಾನಿಕ ಕರ್ತವ್ಯವಾಗಿದೆ. ಹೀಗಾಗಿ ಯಾರೊಬ್ಬರು ಕೂಡ ಮತದಾನದಿಂದ ವಂಚಿತರಾಗಬಾರದು. ಮತದಾನರರ ಚುನಾವಣಾ ಸುರಕ್ಷತಾ ಕ್ಲಬ್ನ ಮೂಲಕ ತಮ್ಮ ಚುನಾವಣಾ ಗುರುತಿನ ಚೀಟಿಯನ್ನು ಪಡೆಯುಲು ಆನ್ಲೈನ್ಲ್ಲಿಯೇ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಚುನಾವಣೆ ಪ್ರಕ್ರಿಯೆ ಕುರಿತು ಆನ್ಲೈನ್ಲ್ಲಿ ಫೋಟೊ ಮತ್ತು ವಿಡೀಯೋಗಳನ್ನು ತೋರಿಸುವುದರ ಮೂಲಕ ಜಾಗೃತಿ ಮೂಡಿಸಬಹುದಾಗಿದೆ. ವಿದ್ಯಾವಂತ ಮತ್ತು ಅವಿದ್ಯಾವಂತ ಮತದಾರರಲ್ಲಿ ನೈಜ ಮತ್ತು ನೈತಿಕ ಮತದಾನದ ಜಾಗೃತಿ ಮೂಡಿಸುವುದು ಗ್ರಾಮ ಪಂಚಾಯತ್ಗಳ ಮುಖ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರವಾರ, ಶಿರಸಿ ಡಿಡಿಪಿಐ, ಕುಮಟಾ ಮತ್ತು ಶಿರಸಿ ಡಯಟ್ ಕಾಲೇಜಿ ಪ್ರಾಚಾರ್ಯರು, ಡಿಡಿಪಿಯು, ಜಿಲ್ಲೆಯ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರಕಾರಿ ಇಂಜಿನಿಯರಿಂಗ್, ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯರು ಉಪಸ್ಥಿತರಿದ್ದರು.