ಭಟ್ಕಳ: ಸರಕಾರಿ ಪದವಿ ಪೂರ್ವ ಕಾಲೇಜಿಗೆ ಸಂಬಂಧ ಪಟ್ಟಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ರಿಗೆ ಪ್ರಚಾರದ ಗೀಳು ಹಚ್ಚಿಕೊಂಡಿದ್ದು ಪುಕ್ಕಟೆ ಪ್ರಚಾರಕ್ಕಾಗಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಎಂದು ಬಿಜೆಪಿ ಭಟ್ಕಳ ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ ಹೇಳಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ನಡೆಸಿದ ಅವರು, 2006ರಲ್ಲಿ ಶಿವಾನಂದ ನಾಯ್ಕ ಅವರು ಸಚಿವರಿದ್ದಾಗ ಮಂಜೂರಿಯಾಗಿದ್ದ ಕಾಲೇಜು ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿತ್ತು. ನಂತರದ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದವರೇ ಶಾಸಕರಾಗಿದ್ದರೂ ಸಹ ಕಾಲೇಜಿಗೆ ಜಾಗಾ ಮಂಜೂರಿ ಮಾಡಿಸಲು ಸಾಧ್ಯವಾಗಿಲ್ಲ, ಅದನ್ನು ಮುಚ್ಚಿಕೊಳ್ಳಲು ನಮ್ಮ ಶಾಸಕರು ಮಾಡಿಸಿದ ಜಾಗಾ ಮಂಜೂರಿ ಕುರಿತು ತಕರಾರು ತೆಗೆಯುತ್ತಿದ್ದಾರೆ. ಇವರಿಗೆ ಜಾಗಾ ಮಂಜೂರಿ ಕುರಿತು ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದ ಅವರು ಹೆಬಳೆಯಲ್ಲಿ ಅಡಿಗಲ್ಲನ್ನಿಟ್ಟ ಜಾಗದ ವಿವಾದ ನ್ಯಾಯಾಲಯದ ಮುಂದಿದೆ ಎನ್ನುವುದು ತಿಳಿದೂ ಅವರು ಪ್ರಚಾರಕ್ಕಾಗಿ ಆಗಾಗ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಬಿ.ಜೆ.ಪಿ. ಮಂಡಳದ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ ಅವರು ಮಾತನಾಡಿ ಈಗ ಇರುವ ಭಾಡಿಗೆ ಕಟ್ಟದಲ್ಲಿ ಕ್ರೀಡಾಂಗಣದ ಕೊರತೆ, ಪಾರ್ಕಿಂಗ್ ಜಾಗಾ ಇತ್ಯಾದಿಗಳಿಲ್ಲದೇ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕೂಡಾ ಗಣನೀಯವಾಗಿ ಕಡಿಮೆಯಾಗಿದ್ದು ಈಗ ಮಂಜೂರಿಯಾದ ಜಾಗಾ ಸೂಕ್ತವಿದ್ದು ಕಟ್ಟಡಕ್ಕೆ 2 ಕೋಟಿ ರೂಪಾಯಿ ಮಂಜೂರಿಯಾಗಿದೆ, ವಿಶಾಲವಾದ ಕ್ರೀಡಾಂಗಣ ಸಹ ಇದ್ದು ರಾ.ಹೆ. ಯಿಂದ ಕೇವಲ 1.5 ಕಿ.ಮಿ. ದೂರದಲ್ಲಿದೆ. ಅಲ್ಲದೇ ಪಕ್ಕದಲ್ಲಿ ಐ.ಟಿ.ಐ. ಕಾಲೇಜು ಸೇರಿದಂತೆ ಇತರೇ ಕಾಲೇಜಿಗೂ ಸ್ಥಳವಿದೆ ಎಂದರು. ಒಂದು ವರ್ಷದಲ್ಲ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕಾಲೇಜು ಅಲ್ಲಿಯೇ ಪ್ರಾರಂಭವಾಗಲಿದೆ ಎಂದರು.
ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ಶಿವಾನಂದ ನಾಯ್ಕ ಅವರು ಸಚಿವರಿದ್ದಾಗ ಅವರ ಕ್ಷೇತ್ರಕ್ಕೆ ಬಂದ ಕಾಲೇಜುಗಳಲ್ಲಿ ಮೂರು ಕಾಲೇಜು ಭಟ್ಕಳ ತಾಲೂಕಿಗೆ ನೀಡಿದ್ದಾರೆ. ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಐ.ಟಿ.ಐ. ಕಾಲೇಜು ಇಂದು ಅನೇಕ ಬಡ ಮಕ್ಕಳಿಗೆ ವರದಾನವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರವಿ ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ದಿನೇಶ ನಾಯ್ಕ, ಮೋಹನ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.