ಕಾರವಾರ : ಕಾರವಾರ ನಗರದಲ್ಲಿ ಮೊದಲ ಬಾರಿಗೆ ಸಂಚಾರ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಇದರಿಂದ ಸಂಚಾರ ನಿರ್ವಹಣೆಗೆ ಸಾಕಷ್ಟು ಅನಕೂಲ ಆಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಹೇಳಿದರು.
ಶನಿವಾರ ನಗರದ ಸಂಚಾರ ಪೊಲಿಸ್ ಠಾಣೆಯಲ್ಲಿ ಸಂಚಾರ ನಿರ್ವಹಣಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಈಗಾಗಲೇ ನಗರದಲ್ಲಿ ಕಾರವಾರ ನಗರಸಭೆ ವತಿಯಿಂದ 23 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳೊಂದಿಗೆ ಒಟ್ಟೂ ನಾಲ್ಕು ವೈರ್ಲೆಸ್ ಜೊತೆ ತಿರುಗುವ ಕ್ಯಾಮರಾಗಳು ಹಾಗೂ ಅದಕ್ಕೆ ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಅಳವಡಿಸಲಾಗಿದೆ. ಈ ಕ್ಯಾಮರಾ 360 ಡಿಗ್ರಿ ರೋಟೆಟ್ ಆಗುವಂತಿದ್ದು. ಸಂಚಾರ ನಿರ್ವಹಣಾ ಕೇಂದ್ರದಿಂದಲೇ ಕ್ಯಾಮರಾ ಝುಮ್ ಮಾಡಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ನಂಬರ್ ಜೊತೆ ಫೋಟೊ ತೆಗೆದು ಸಾಕ್ಷಿ ಸಮೇತ ವಾಹನ ಮಾಲೀಕರಿಗೆ ನೋಟಿಸ್ ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದರು.
ನಾಲ್ಕು ವೈರ್ಲೆಸ್ ಕ್ಯಾಮರಾಗಳನ್ನು ನಗರದ ಸುಭಾಶ ಸರ್ಕಲ್ , ಸವಿತಾ ಹೊಟೆಲ್ ಸರ್ಕಲ್ , ಹೂವಿನ ಚೌಕ ಸರ್ಕಲ್ , ಶಿವಾಜಿ ಸರ್ಕಲ್ಗಳಲ್ಲಿ ಅಳವಡಿಸಲಾಗಿದೆ. ಇವು ದಿನದ 24 ಗಂಟೆ ಕೂಡ ಆ್ಯಕ್ಟಿವ್ ಆಗಿರುತ್ತವೆ. ಸಂಚಾರ ನಿರ್ವಹಣೆಗಷ್ಟೇ ಅಲ್ಲದೇ ಅಪರಾದ ಕೃತ್ಯಗಳನ್ನು ಪತ್ತೆ ಹಚ್ಚಲು ಕೂಡ ಸಾಧ್ಯವಾಗುತ್ತದೆ. ಲೈವ್ ಇರದೇ ಹೋದರೂ ರೆಕಾರ್ಡ್ ಲಭ್ಯ ಇರುತ್ತದೆ. ಅಲ್ಲದೇ ಸಂಚಾರ ದಟ್ಟನೆ ಇರುವ ಸಂದರ್ಭದಲ್ಲಿ ಸಂಚಾರ ನಿರ್ವಹಣಾ ಕೇಂದ್ರಿದಂದಲೆ ಸಾರ್ವಜನಿಕರಿಗೆ ಧ್ವನಿವರ್ಧಕದಿಂದ ಸಂಚಾರ ನಿಯಮದ ಬಗ್ಗೆ ಅರಿವು ಮೂಡಿಸಲು ಉಪಯುಕ್ತವಾಗಲಿದೆ ಎಂದರು.
ಮುಂದಿನ ದಿನಗಳಲ್ಲಿ ನಗರದಲ್ಲಿ ಒಂದು ವ್ಯವಸ್ಥಿತ ಪಾರ್ಕಿಂಗ್ ಮಾಡಬೇಕೆಂಬ ಯೋಜನೆ ಇದೆ. ಸಂಚಾರ ನಿರ್ವಹಣಾ ಕೇಂದ್ರವು ನಮಗೆ ಎಲ್ಲಿ ಹೇಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂಬ ಒಂದು ಚಿತ್ರಣವನ್ನು ನೀಡುವದರಿಂದ ಸಹಕಾರಿಯಾಗಲಿದೆ.
ಅದೇ ರೀತಿ ಮೂರು ನಾಲ್ಕು ತಿಂಗಳ ನಂತರ ಕಾರವಾರ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲಿದೆ. ಇದರ ಯಶಸ್ಸನ್ನುಆಧರಿಸಿ ಶಿರಸಿ ಮತ್ತು ಭಟ್ಕಳದಲ್ಲಿ ಸಂಚಾರ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸುವ ಯೋಚನೆಯಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲಿಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ, ಡಿ ವಾಯ್ ಎಸ್.ಪಿ ಅರವಿಂದ ಕಲಗುಜ್ಜಿ ಸೇರಿದಂತೆ ಎಲ್ಲಾ ಠಾಣೆಯ ಪಿಎಸ್ಐ ಗಳು ಉಪಸ್ಥಿತರಿದ್ದರು.