ಕಾರವಾರ : ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಲು ಶಾಲಾ ದಾಖಲಾತಿ ಆಂದೋಲನವನ್ನು ಇತರೆ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಾಲೆ ಕಡೆ ನನ್ನ ನಡೆ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಜನಾಂದೋಲನದಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆ ಬೇಟಿ ನೀಡಿ ಮಕ್ಕಳನ್ನು ಶಾಲೆಗಳತ್ತ ಕರೆ ತರಬೇಕು. ಅಲ್ಲದೇ ಜನಪ್ರತಿನೀಧಿಗಳು ಮತ್ತು ಗಣ್ಯ ವ್ಯಕ್ತಿಗಳ ನೇತೃತ್ವದಲ್ಲಿ ಶಾಲಾ ದಾಖಲಾತಿ ಆಂದೋಲನವನ್ನು ಹಮ್ಮಿಕೊಂಡರೆ ಪಾಲಕರು ಮತ್ತು ಮಕ್ಕಳು ಆಕರ್ಷಿತರಾಗಿ ಶಾಲೆಗೆ ಮರಳುತ್ತಾರೆ. ಈ ಹಿನ್ನಲೆಯಲ್ಲಿ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಿ.ಪಂ ಸಿಇಒ ಎಮ್ ರೋಶನ್ ಅವರು ಮಾತನಾಡಿ ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು. ಅನ್ಯ ರಾಜ್ಯಗಳಿಂದ ಬಂದಂತಹ ಕೂಲಿ ಕಾರ್ಮಿಕರ ಮಕ್ಕಳು ಕೂಡಾ ಶಿಕ್ಷಣ ಪಡೆಯಬೇಕು. ಈ ಹಿನ್ನಲೆಯಲ್ಲಿ ವಲಸೆ ಮಕ್ಕಳನ್ನು ಗುರುತಿಸಿ ಅವರ ಮಾತೃ ಭಾಷೆಯಲ್ಲಿ ಬ್ರಿಡ್ಜ್ ಕೋರ್ಸ ಕೊಟ್ಟು ಶಿಕ್ಷಣ ನೀಡಬೇಕೆಂದರು. ಮೇ 27 ರಂದು ಬ್ಲಾಕ್ ಮಟ್ಟ ಮತ್ತು 28 ರಂದು ಶಾಲಾ ಮಟ್ಟದಲ್ಲಿ ಸಭೆ ನಡೆಸಿ ಮೇ 29 ರಂದು ಶಾಲೆ ಕಡೆ ನನ್ನ ನಡೆ ಜನಾಂದೋಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಬೇಕೆಂದು ಸೂಚಿಸಿದರು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರು ಮಾತನಾಡಿ ಸರಕು ವಾಹನಗಳಲ್ಲಿ ಶಾಲಾ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೊಗುವಂತಹ ಘಟನೆಗಳು ನಡೆದಿದ್ದು ಕಂಡು ಬಂದಿರುತ್ತದೆ. ಸರಕುವಾಹನಗಳಲ್ಲಿ ಮಕ್ಕಳನ್ನು ಸಾಗಿಸುವುದು ಅಪರಾದವಾಗಿರುತ್ತದೆ. ಈ ಕುರಿತು ಕೂಡಾ ಜನಾಂದೋಲನದಲ್ಲಿ ಜಾಗೃತಿ ಮೂಡಿಸಿಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ ಕುಮಾರ, ಡಿಡಿಪಿಐ ಸೇರಿದಂತೆ ಇತರರು ಉಪಸ್ಥಿತರಿದ್ದರು.