ಕಲಬುರಗಿ: ಕಲಬುರಗಿಯಲ್ಲಿ ಮಂಗಳವಾರ ನಡೆದ ಸಿಎಎ, ಎನ್ಆರ್ಸಿ ವಿರೋಧಿ ಜನಾಂದೋಲನ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.
ಕರ್ನಾಟಕ ಪೀಪಲ್ಸ್ ಫೋರಂ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಪಿಎಂ ರಾಷ್ಟ್ರೀಯ ಮುಖಂಡ ಸೀತಾರಾಂ ಯೆಚೂರಿ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿನಾಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಚಿಂತಕರಾದ ಸ್ವಾಮಿ ಅಗ್ನಿವೇಶ್, ಸಿ.ಎಂ ಇಬ್ರಾಹಿಂ, ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್, ಮುಸ್ಲಿಂ ಮುಖಂಡರಾದ ತಸ್ಲೀಫ್ ಶರ್ಮಾ, ಚಿಂತಕಿ ಕೆ.ನೀಲಾ, ಸ್ಟೆನಿ ಲೋಬೋ ಸೇರಿದಂತೆ ಹಲವಾರು ಜನ ಭಾಗವಹಿಸಿ ಸಿಎಎ, ಎನ್ಆರ್ಸಿ ವಿರುದ್ಧ ದನಿಯೆತ್ತಿದ್ದಾರೆ.
ನಮ್ಮ ದೇಶಪ್ರೇಮವನ್ನು ನಾವು ನಮ್ಮ ಸಂವಿಧಾನವನ್ನು ಗೌರವಿಸುವುದರ ಮೂಲಕ ತೋರಿಸುತ್ತೇವೆ. ಸಂವಿಧಾನದ ವಿರುದ್ಧ ಕಾನೂನು ರೂಪಿಸುವ ಮೂಲಕ ನೀವು ದೇಶದ್ರೋಹಿಗಳು ಎಂದು ತೋರಿಸುತ್ತಿದ್ದೀರಿ ಎಂದು ಸಿಪಿಎಂ ರಾಷ್ಟ್ರೀಯ ಮುಖಂಡ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ಹಿಂದೂ ಧರ್ಮದ ಹ ಮತ್ತು ಮುಸ್ಲಿಂ ಮ್ ಸೇರಿದರೆ ಹಮ್ ಆಗುತ್ತದೆ. ಇದು ನಮ್ಮ ದೇಶ ಎಂದ ಯೆಚೂರಿಯವರು, ಎನ್ಪಿಆರ್ಗೆ ನಾವು ಮಾಹಿತಿ ಕೊಡುವುದಿಲ್ಲ, ಎನ್ಆರ್ಸಿಗೆ ನಾವು ದಾಖಲೆ ತೋರಿಸುವುದಿಲ್ಲ ಎಂದು ಘೋಷಿಸಿದರು.
ಬೇವುಕೂಫ್ ಸರ್ಕಾರ : ಸಸಿಕಾಂತ್ ಸೆಂಥಿಲ್
ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಎನ್ಆರ್ಸಿಗೆ ರೂಲ್ಸ್ ಇನ್ನು ಮಾಡಿಲ್ಲ ಎಂಬುದು ಮೊದಲ ಸುಳ್ಳಾಗಿದೆ. 2003ರಲ್ಲಿಯೇ ರೂಲ್ಸ್ ಮಾಡಿದ್ದಾರೆ. ಎನ್ಆರ್ಸಿ ಬಗ್ಗೆ ನಾನು ಮಾತಾಡಿಯೇ ಇಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಇನ್ನೊಂದು ಕಡೆ ಗೃಹಮಂತ್ರಿ ಅಮಿತ್ ಶಾ ಎನ್ಆರ್ಸಿ ಜಾರಿಗೆ ತರುವುದಾಗಿ ಹತ್ತು ಬಾರಿ ಹೇಳಿದ್ದಾರೆ ಯಾರನ್ನು ನಂಬುವುದು, ಬೇವುಕೂಫ್ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಎನ್ಪಿಆರ್ ಎನ್ಆರ್ಸಿಗೂ ಸಂಬಂಧವಿಲ್ಲ ಎಂದು ಒಬ್ಬ ಸಂಸದರು ಹೇಳುತ್ತಾರೆ. ಇದು ಎರಡನೇ ಸುಳ್ಳು. ಎನ್ಪಿಆರ್ಗೆ ನೀವು ಸ್ಪಂದಿಸದಿದ್ದರೆ ನಿಮಗೆ ಗ್ಯಾಸ್ ಕೊಡುವುದಿಲ್ಲ, ನಿಮ್ಮ ಓಟಿನ ಹಕ್ಕನ್ನು ಕಿತ್ತುಕೊಳ್ಳುತ್ತಾರೆ. ಅದು ಸುಳ್ಳು.. ಅದಕ್ಕೂ ಜನಗಣತಿಗೂ ಸಂಬಂಧವಿಲ್ಲ ಎಂದು ಸೆಂಥಿಲ್ ತಿಳಿಸಿದರು.
ಎನ್ಪಿಆರ್ಗೆ ನಾವು ಮಾಹಿತಿ ಕೊಡುವುದಿಲ್ಲ. ಎನ್ಪಿಆರ್ ಮತ್ತು ಜನಗಣತಿ ಒಟ್ಟಿಗೆ ಬಂದರೆ ಜನಗಣತಿಗೆ ಮಾತ್ರ ಉತ್ತರ ಕೊಡಿ. ಮುಂಬರುವ ದಿನಗಳಲ್ಲಿ ನಮ್ಮ ಐಕ್ಯತೆಯನ್ನು ಸಡಿಲವಾಗಲು ನಾವು ಬಿಡಬಾರದು.. ದುಡಿಯುವ ವರ್ಗ ಬಹುಸಂಖ್ಯಾತರಾಗಿದ್ದು ನಾವೆಲ್ಲರೂ ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದ್ದರು.
ಇಷ್ಟು ದಿನ ದೇಶದ ಹೆಸರಿನಲ್ಲಿ ಸರ್ಕಾರ ನಮಗೆ ಮೋಸ ಮಾಡಿದ್ದರು. ನಮ್ಮ ಪ್ರತಿಭಟನೆಗಳ ಮೂಲಕ ಮೊದಲ ಬಾರಿಗೆ ಅವರು ನಿಜವಾದ ದೇಶವನ್ನು ನೋಡುತ್ತಿದ್ದಾರೆ. ಹಿಂಸೆಗೆ ಎಲ್ಲಿಯೂ ಅವಕಾಶಕೊಡಬೇಡಿ ಎಂದು ಅವರು ಮನವಿ ಮಾಡಿದರು.
ಕೃಪೆ:www.naanugauri.com