ಧಾರವಾಡ:ಇಲ್ಲಿನ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಗಳ ಅವಲಂಬಿತರಿಗೆ ಜಿಲ್ಲಾಡಳಿತದಿಂದ ತತ್ಕ್ಷಣದ ಪರಿಹಾರವಾಗಿ 2 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ಗಳನ್ನು ನೀಡಲಾಗುತ್ತಿದೆ. ಇಂದು ಬೆಳಿಗ್ಗೆ ಧಾರವಾಡ ನಗರದ ಮೃತರ ಮನೆಗಳಿಗೆ ತೆರಳಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಚೆಕ್ಗಳನ್ನು ಮೃತರ ಅವಲಂಬಿತರಿಗೆ ನೀಡಿದರು.
ಕುಮಾರೇಶ್ವರ ನಗರದ ಸಂಗಮೇಶ್ ಮಾನ್ವಿಯವರ ಮನೆಗೆ ತೆರಳಿ ಅವರ ಪತ್ನಿ ವಿಜಯಲಕ್ಷೀ ಅವರಿಗೆ ಹಾಗೂ ಮೆಹಬೂಬ್ ನಗರದ ಅಸ್ಲಾಂ ಶೇಖ್ ಅವರ ಮನೆಗೆ ಭೇಟಿ ನೀಡಿ ಅವರ ಪತ್ನಿ ನಾಜಮಿ ಅವರಿಗೆ ಪರಿಹಾರದ ಚೆಕ್ಗಳನ್ನು ಹಸ್ತಾಂತರಿಸಿ, ಸಾಂತ್ವನ ಹೇಳಿದರು.
ಕಳೆದು ಹೋದ ಜೀವಗಳಿಗೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಘಟನೆ ತೀವ್ರ ನೋವು ತಂದಿದೆ, ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಆ ಕುಟುಂಬಗಳಿಗೆ ಬರಲಿ. ತಕ್ಷಣದ ಪರಿಹಾರವಾಗಿ ಜಿಲ್ಲಾಡಳಿತದಿಂದ ಮೃತರ ಅವಲಂಬಿತರಿಗೆ ತಲಾ 2 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ನೀಡಲಾಗಿದೆ. ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಮಹಮದ್ ಜುಬೇರ್, ತಹಶೀಲ್ದಾರ್ ಪ್ರಕಾಶ್ ಕುದುರಿ ಮತ್ತಿತರರು ಇದ್ದರು.