ಕಾರವಾರ: ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳು, ಬೆಳೆವಿಮೆ ಪಡೆದ ರೈತ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ಸಕ್ಕರೆ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಸೂಚಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ; ಬೆಳೆವಿಮೆ ಪರಿಹಾರ ಧನವು ನೇರವಾಗಿ ರೈತರ ಖಾತೆಗೆ ಜಮಾಗೊಳ್ಳುವುದರಿಂದ ಪರಿಹಾರ ಪಡೆದಂತಹ ರೈತರು ಸುಮ್ಮನಾಗುತ್ತಿದ್ದು, ಪರಿಹಾರ ಬರದೇ ಇರುವಂತಹ ರೈತರು ಜನಪ್ರತಿನಿಧಿಗಳ ಹತ್ತಿರ ಅಲೆದಾಡಿ ತೊಂದರೆ ಪಡುತ್ತಿದ್ದು, ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ಹೇಳಿದರು.
ಕೃಷಿ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಅವರು ಮಾತನಾಡಿ ಈ ಕುರಿತು ಮಾಹಿತಿ ನೀಡಲು ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟಾರೆ 32,680.14 ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಇಲ್ಲಿಯವರೆಗೆ 30,200.32 ಟನ್ ರಸಗೊಬ್ಬರ ವಿತರಣೆಯಾಗಿರುತ್ತದೆ. 2479.53 ಟನ್ ಹಾಲಿ ದಾಸ್ತಾನು ಇದ್ದು, ಯುರಿಯಾ ಸೇರಿದಂತೆ ಯಾವುದೇ ರಸಗೊಬ್ಬರ ಕೂಡ ಕೊರತೆÀ ಇರುವುದಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ತೋಟಗಾರಿಕಾ ಇಲಾಖೆ ಉಪನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿ, ಕೋವಿಡ್ನಿಂದಾಗಿ ಹೂವು ಹಣ್ಣು, ತರಕಾರಿ ಬೆಳೆ ಹಾನಿಯಾದ ರೈತರಿಗೆ ಪರಿಹಾರ ಧನ ವಿತರಿಸಲು ಬೆಳೆ ಸಮೀಕ್ಷೆ ವರದಿಯಲ್ಲಿ ದಾಖಲಾಗದ ಆದರೆ ಹೂವು ಹಣ್ಣು, ತರಕಾರಿ ಬೆಳೆದು ಹಾನಿಯಾದ ರೈತರಿಗೆ ಪರಿಹಾರ ಧನ ವಿತರಿಸಲು ಮಾರ್ಗಸೂಚಿ ಪ್ರಕಾರ ಹೆಚ್ಚುವರಿ ಅನುದಾನ ಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಸ್ಸಿಪಿ ಟಿಎಸ್ಪಿ ಯೋಜನೆಗಳಡಿಯಲ್ಲಿ 2016-17ರಿಂದ 2019-20ರವರೆಗೆ ಬಾಕಿಯಿರುವ ಬೋರ್ವೇಲ್ ಕಾಮಗಾರಿಗಳ ಬಗ್ಗೆ ವಿಚಾರಿಸಿಸಿದ ಸಚಿವರು, ಗಂಗಾಕಲ್ಯಾಣ ಯೋಜನೆಯನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಇರುವದರಿಂದ ಕಳೆದ 4 ವರ್ಷಗಳಿಂದ ಜಿಲ್ಲೆಯ ಶೋಷಿತ ಸಮುದಾಯದ ಜನಾಂಗದವರಿಗೆ ಅನ್ಯಾಯವಾಗಿದೆ. ಸರ್ಕಾರದ ಯೋಜನೆ ಫಲಪ್ರದವಾಗಿಲ್ಲ, ಇದರಿಂದ ಸರ್ಕಾರದ ಘನತೆಗೆ ಪೆಟ್ಟು ಬಿದ್ದಿದೆ. ಇದನ್ನು ಗಂಭೀರವಾಗಿ ಗಮನದಲ್ಲಿಟ್ಟುಕೊಂಡು ಬೋರ್ವೇಲ್, ಡ್ರೀಲಿಂಗ್, ಮಶಿನ್ ಅಳವಡಿಕೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ, ಅಂಬೇಡ್ಕರ್, ವಾಲ್ಮೀಕಿ, ದೇವರಾಜ ಅರಸು ಅಲ್ಪಸಂಖ್ಯಾತ ನಿಗಮಗಳ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಕಾರವಾರ ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣ ಸಾಧನೆ ಈಗಾಗಲೇ ಶೇ.80ರಷ್ಟು ಆಗಿದ್ದು, ಶೀಘ್ರದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಬೇಕಲ್ಲದೇ ಎಲ್ಲಾ ಅಂಗನವಾಡಿ ಕಟ್ಟಡಗಳು ಸಕಲ ಸೌಕರ್ಯಯುಳ್ಳ ಮಾದರಿ ಅಂಗನವಾಡಿ ಕೇಂದ್ರಗಳಾಗಿ ರೂಪುಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಇಲಾಖೆಯು ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಪಂಚಾಯತ್ ನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಬ್ಬಾರ ಅವರು ಬೆಳಗಿನ ಅವಧಿಯಲ್ಲಿ 20 ಹಾಗೂ ಮಧ್ಯಾಹ್ನದ ಅವಧಿಯಲ್ಲಿ 20 ರಂತೆ ಒಟ್ಟು 40 ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೋಗೇರ, ಶಾಸಕ ಸುನೀಲ ನಾಯ್ಕ, ಡಿಸಿ ಡಾ.ಹರೀಶ ಕುಮಾರ ಕೆ ಮತ್ತು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಎಸ್ಪಿ ಶಿವಪ್ರಕಾಶ ದೇವರಾಜು ಸೇರಿದಂತೆ ಇತರರು ಹಾಜರಿದ್ದರು.