ಶ್ರೀನಿವಾಸಪುರ: ಉರ್ದು ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಶಿಕ್ಷಕರು . ಉರ್ದು ಭಾಷೆ ಹಿನ್ನೆಲೆ ಹೊಂದಿರುವ ಮಕ್ಕಳಿಗೆ ಸರಳ ಬೋಧನೆ ಮೂಲಕ ಕನ್ನಡ ಕಲಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಜಿ.ವಿ.ಚಂದ್ರಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಆರ್ಸಿ ವತಿಯಿಂದ ಏರ್ಪಡಿಸಿದ್ದ ಎಸ್ಟಿಐಆರ್ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಮಗು ತನ್ನ ಮಾತೃಭಾಷೆ ಸೇರಿದಂತೆ ಯಾವುದೇ ಭಾಷೆಯನ್ನು ಚೆನ್ನಾಗಿ ಕಲಿತಲ್ಲಿ, ಹಲವು ಭಾಷೆಗಳನ್ನು ಸುಲಭವಾಗಿ ಕಲಿಯಬಲ್ಲದು. ಆದ್ದರಿಂದ ಉರ್ದು ಶಾಲೆಯಲ್ಲಿ ಕನ್ನಡ ಬೋಧನೆ ಮಾಡುವ ಶಿಕ್ಷಕರು, ತರಗತಿಯಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಸಿಆರ್ಪಿ ಸಮೀನಾ ಬಾನು ಮಾತನಾಡಿ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಪ್ರಶಂಸಿಸುವುದರ ಮೂಲಕ ಅವರ ಮನಸ್ಸನ್ನು ಕನ್ನಡ ಕಲಿಕೆಯತ್ತ ಸೆಳೆಯಬೇಕು. ಉರ್ದು ಪರಿಸರದೊಂದಿಗೆ, ಕನ್ನಡ ಪರಿಸರವನ್ನು ಸಮೀಕರಿಸಿ ಪಾಠ ಹೇಳಬೇಕು. ಕನ್ನಡ ಕಲಿಕೆಯಿಂದ ಆಗುವ ಪ್ರಯೋಜನ ಕುರಿತು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ವೀರಭದ್ರಯ್ಯ, ಭವ್ಯ ಸಿಸಿಇ ದಾಖಲಾತಿ ಮಾಡುವ ಬಗ್ಗೆ ಅರಿವು ಮೂಡಿಸಿದರು. ಶಿಕ್ಷಕರಿಂದ ಮಾದರಿ ಬೋಧನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.