ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಗಣರಾಜ್ಯೋತ್ಸವ ಪರೇಡ್ನಲ್ಲಿ ಕೇಂದ್ರ ಸರಕಾರ ಅವಕಾಶ ನಿರಾಕರಿಸಿದ್ದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಮಂಗಳವಾರ ಕಾಲ್ನಡಿಗೆ ಜಾಥಾ ನಡೆಸಿತು.
ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಕಚೇರಿಯಿಂದ ಕುದ್ರೋಳಿ ದೇವಸ್ಥಾನದವರೆಗೆ ನಡೆದ ‘ನಮ್ಮ ನಡಿಗೆ ಬ್ರಹ್ಮಶ್ರೀ ನಾರಾಯಣ ಗುರು ಕಡೆಗೆ’ ಕಾಲ್ನಡಿಗೆ ಜಾಥಾಗೆ ಮಾಜಿ ಉಪಮುಖ್ಯಮಂತ್ರಿ, ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ, ನಾರಾಯಣ ಗುರುಗಳು ಮಾನವತೆಯ ಹಾಗೂ ಸಮಾನತೆಯ ಸಂದೇಶ ಸಾರಿದ ಮಹಾ ಮಾನವತಾವಾದಿ. ಅವರ ತತ್ವ ಆದರ್ಶಗಳು ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಕೇಂದ್ರ ಸರಕಾರದ ಈ ನಿಲುವು ನಾರಾಯಣ ಗುರುಗಳನ್ನು ಹಾಗೂ ಅವರ ಚಿಂತನೆಗಳನ್ನು ಅಪಮಾನಿಸಿದೆ. ಕೇಂದ್ರ ಸರಕಾರ ಕೂಡಲೇ ಕ್ಷಮೆ ಕೇಳಬೇಕು, ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಈ ಸಂದರ್ಭ ಎಐಸಿಸಿ ಕಾರ್ಯದರ್ಶಿಗಳಾದ ಐವನ್ ಡಿಸೋಜಾ, ಪಿವಿ ಮೋಹನ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್. ಲೋಬೋ, ಮುಖಂಡರುಗಳಾದ ಶಾಹುಲ್ ಹಮೀದ್, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್ ಬಜಾಲ್, ಎನ್.ಎಸ್. ಕರೀಂ, ಆಶೀತ್ ಪಿರೇರಾ, ಮೊಹಮ್ಮದ್ ಶಮೀರ್ ಸುರತ್ಕಲ್, ಸಿ.ಎಂ.ಮುಸ್ತಫಾ, ಸಜಿತ್ ಶೆಟ್ಟಿ, ಬೆಳ್ಳಿಪ್ಪಾಡಿ ಅಭಿಷೇಕ್ ರಘು, ರಮಾನಂದ ಪೂಜಾರಿ, ನವೀದ್ ಅಖ್ತರ್, ಪ್ರಸಾದ್ ಗಾಣಿಗ, ಫೈಝಲ್ ಕಡಬ, ಅನಿಲ್ ಪೈ, ನವೀನ್ ಕುಮಾರ್, ಮೊಹಮ್ಮದ್ ಇರ್ಷಾದ್, ಅಶ್ವಥ್ ರಾಜ್, ಮೊಹಮ್ಮದ್ ಇರ್ಷಾದ್, ಹಸನ್ ಫಳ್ನೀರ್, ಫಯಾಝ್ ಅಮ್ಮೆಮ್ಮಾರ್, ಬಿ.ಎಸ್. ಇಸ್ಮಾಯೀಲ್, ಸಂಜನಾ ಛಲವಾದಿ, ಸೌಹಾನ್ ಎಸ್.ಕೆ, ಪವನ್ ಸಾಲ್ಯಾನ್, ಹಬೀಬ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.