ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಹಿನ್ನೆಲೆ:ಭಟ್ಕಳ ವಿವಿಧ ಕಡೆ ತೀವ್ರ ತಪಾಸಣೆ
ಭಟ್ಕಳ: ಶ್ರೀಲಂಕಾದಲ್ಲಿ ಉಗ್ರದ ಬಾಂಬ್ ದಾಳಿಯ ಬಳಿಕ ರಾಜ್ಯದ ಮಹಾನಗರಗಳು ಉಗ್ರರ ಟಾರ್ಗೆಟ್ ಆಗಿವೆ ಎಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದ ಹಿನ್ನೆಲೆ ಭಾನುವಾರದಂದು ತಾಲೂಕಿನ ರೈಲ್ವೆ ನಿಲ್ದಾಣ ಸೇರಿದಂತೆ ಕೆಲವು ಕಡೆ ಕಾರವಾರದಿಂದ ಬಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ತೀವ್ರ ತಪಾಸಣೆ ನಡೆಸಿದ್ದಾರೆ.
ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಶ್ರೀಲಂಕಾ ಬಾಂಬ್ ದಾಳಿಯಿಂದಜಗತ್ತೆ ಬೆಚ್ಚಿ ಬಿದ್ದಿದೆ. ರಾಜ್ಯದ ಮಹಾ ನಗರಗಳು, ಸೂಕ್ಷ್ಮ ಜಿಲ್ಲೆ ಹಾಗೂ ತಾಲೂಕಿನ ಪ್ರಮುಖ ಸ್ಥಳಗಳಲ್ಲಿ ಭದ್ರತಾ ತಪಾಸಣೆ ಬಿಗಿಗೊಳಿಸಲಾಗಿದೆ. ಈ ಹಿನ್ನೆಲೆ ಜಿಲ್ಲೆಯಾದ್ಯಂತ ತೀವ್ರ ತಪಾಸಣೆ ಕಾರ್ಯ ನಡೆಯುತ್ತಿದ್ದು, ತಾಲೂಕಿನ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ರೈಲ್ವೆ ಸುರಂಗದೊಳಗೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿದ್ದಾರೆ.
19 ಜನ ಉಗ್ರರು ರೈಲುಗಳಲ್ಲಿ ಓಡಾಡುತ್ತಿದ್ದಾರೆ ಎನ್ನುವ ಮಾಹಿತಿ ಇರುವ ಹಿನ್ನಲೆ ನಡೆದ ಪರಿಶೀಲನೆ ನಡೆಯಿತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಎಲ್ಲ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ದಕ್ಷಿಣ ಭಾರತದಲ್ಲೂ ಸಂಭಾವ್ಯ ಉಗ್ರರ ದಾಳಿ ಭೀತಿಯಿದೆ ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿದ್ದು, ಹೀಗಾಗಿ ಬಿಗಿ ಭದ್ರತೆಗೆ ಆದೇಶಿಸಲಾಗಿದೆ.