ವೆಂಕಟಾಪುರ ನದಿಯಲ್ಲಿ ಯುವಕ ಮೃತದೇಹ ಪತ್ತೆ
• ಜು.10 ರಂದು ಕಡವಿನಕಟ್ಟಾ ಡ್ಯಾಮಿನಲ್ಲಿ ಈಜುತ್ತಿದ್ದಾಗ ನಾಪತ್ತೆಯಾಗಿದ್ದ ಯುವಕ
ಭಟ್ಕಳ: ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಕಡವಿನ ಕಟ್ಟೆಯಲ್ಲಿ ಈಜಲು ತೆರಳಿದ್ದ ನಗರದ ಉಮರ್ ಸ್ಟ್ರೀಟ್ 2ನೇ ಕ್ರಾಸ್ ನಿವಾಸಿ ಇಬ್ರಾಹೀಮ್ ಆಬೀದಾ(16) ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು ಆತನ ಮೃತದೇಹ ಶುಕ್ರವಾರ ಮಧ್ಯಾಹ್ನ ಶಿರಾಲಿಯ ವೆಂಕಟಾಪುರ ನದಿಯಲ್ಲಿ ದೊರಕಿದೆ.
ಸುರಿಯತ್ತಿರುವ ಮಳೆಯಲ್ಲಿ ಬುಧವಾರ ಸಂಜೆ ತನ್ನ ಗೆಳೆಯರೊಂದಿಗೆ ಕಡವಿನಕಟ್ಟಾ ಡ್ಯಾಮ್ ಗೆ ಈಜಲು ತೆರಳಿದ್ದ ಇಬ್ರಾಹಿಮ್ ಆಬಿದಾ ಉತ್ತಮ ಈಜುಗಾರನಾಗಿದ್ದರೂ ತುಂಬಿಹರಿಯುತ್ತಿದ್ದ ಡ್ಯಾಂ ನ ನೀರಿನ ಸೆಳೆತಕ್ಕೆ ಬಹುದೂರ ಹರಿದು ಹೋಗಿದ್ದು, ಪೊಲೀಸ್ ಇಲಾಖೆ, ಹಾಗೂ ಸ್ಥಳಿಯರು ಹಗಲು ರಾತ್ರಿ ಎನ್ನದೇ ಎರಡು ದಿನಗಳ ಕಾಲ ಯುವಕ ಮೃತದೇಹ ಪತ್ತೆಗಾಗಿ ಹುಡುಕಾಡಿದ್ದರು ಅಲ್ಲದೆ ಮಂಗಳೂರು ಹಾಗೂ ಮುರುಢೇಶ್ವರದಿಂದ ಮುಳುಗು ತಜ್ಞರೂ ಸತತವಾಗಿ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗದೆ ಶುಕ್ರವಾರ ಮಧ್ಯಾಹ್ನ ತನ್ನಿಂದ ತಾನೇ ಶಿರಾಲಿಯ ವೆಂಕಟಾಪುರ ನದಿಯಲ್ಲಿ ಮೃತದೇಹ ಹೊರಬಂದಿದೆ.
ಇಂದು ಬೆಳಿಗ್ಗೆಯಿಂದಲೇ ಮಳೆಗೆ ವಿರಾಮ ಸಿಕ್ಕಿದ್ದು ನದಿಯು ಶಾಂತವಾಗಿದೆ. ಆದ್ದರಿಂದಲೇ ಮೃತದೇಹ ಮೇಲಕ್ಕೆ ಬಂದಿದೆ. ಮೃತದೇಹ ನದಿಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಹಗ್ಗವನ್ನು ಕಟ್ಟಿ ದಡಕ್ಕೆ ಎಳೆದು ತಂದಿದ್ದಾರೆ.
ಮೃತದೇಹ ದೊರೆತ ಸುದ್ದಿತಿಳಿಯುತ್ತಿದ್ದಂತೆ ಸಾವಿರಾರು ಮಂದಿ ವೆಂಕಟಾಪುರದ ನದಿ ಬಳಿ ಸೇರಿದ್ದು ನಂತರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಯಿತು. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಕ್ಕೆ ಹಸ್ತಾಂತರಿಸಿದ್ದು ಸಂಜೆ 5-30ಕ್ಕೆ ಜಾಮೀಯ ಮಸೀದಿಯಲ್ಲಿ ಜನಾಝ ನಮಾಝ್ ನಿರ್ವಹಿಸಿ ಶವಸಂಸ್ಕಾರ ನೆರವೇರಿಸಲಾಯಿತು. ಶವಸಂಸ್ಕಾರ ಕ್ರಿಯೇಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.