ಕೇಂದ್ರದಲ್ಲಿ ಮತ್ತೆ ಅರಳಿದ ಕಮಲ; ಬಿಜೆಪಿಗೆ ಮತ್ತೆ ಐದು ವರ್ಷದ ಅವಧಿ: ಪ್ರಧಾನಿ ಗಾದಿಗೆ ಮತ್ತೊಮ್ಮೆ ಮೋದಿ

Source: ಪ್ರಜಾವಾಣಿ  | By I.G. Bhatkali | Published on 25th May 2019, 10:55 PM | National News |

ನವದೆಹಲಿ: ದೇಶದ ‘ಕಾವಲುಗಾರನೇ ಕಳ್ಳ’ (ಚೌಕೀದಾರ್ ಚೋರ್) ಎಂದು ಪ್ರಧಾನಿಯನ್ನು ಮೂದಲಿಸಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಆರೋಪವು ಮತದಾರರ ಮನಸ್ಸಿನ ಮೇಲೆ ಕಿಂಚಿತ್ತೂ ಪರಿಣಾಮ ಉಂಟು ಮಾಡಲಿಲ್ಲ. ಐದು ವರ್ಷಗಳ ಹಿಂದೆ ಅಭೂತಪೂರ್ವ ಗೆಲುವಿನ ಸಾಧನೆಯೊಂದಿಗೆ ಪ್ರಧಾನಿ ಪಟ್ಟಕ್ಕೆ ಏರಿದ್ದ ನರೇಂದ್ರ ಮೋದಿಯವರ ಮೋಡಿ ಈಗಲೂ ಪ್ರಬಲವಾಗಿದೆ ಎಂಬುದನ್ನು ಗುರುವಾರ ಪ್ರಕಟವಾಗಿರುವ ಲೋಕಸಭೆಯ ಚುನಾವಣೆಯ ಫಲಿತಾಂಶ ಸಾರಿಹೇಳಿದೆ.

ಸತತ 10 ವರ್ಷಗಳ ಯುಪಿಎ ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು, 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟಕ್ಕೆ ಅಭೂತಪೂರ್ವ ಬೆಂಬಲ ನೀಡಿದ್ದ ಜನ, ಇದೀಗ ಮತ್ತೆ ಅದೇ ‘ಕೂಟ’ವನ್ನು ಮುಕ್ತ ಮನಸ್ಸಿನಿಂದ ಆಶೀರ್ವದಿಸಿದ್ದಾರೆ.

2014ರಲ್ಲಿ ಪ್ರಚಂಡವಾಗಿ ಬೀಸಿದ್ದ ಮೋದಿ ಅಲೆಯೆದುರು ವಿಪಕ್ಷಗಳು ದೂಳೀಪಟವಾಗಿದ್ದವು; ಈ ಬಾರಿ ಅದು ಪುನರಾವರ್ತನೆ ಆಗಬಾರದು ಎಂದು ವಿರೋಧ ಪಕ್ಷಗಳು ನಡೆಸಿದ ಪ್ರಯತ್ನಗಳತ್ತ ಮತದಾರ ಗಮನವನ್ನೇ ಕೊಟ್ಟಿಲ್ಲ.

‘ಬಡಜನರನ್ನು ಮರೆತು, ಶ್ರೀಮಂತ ಉದ್ಯಮಿಗಳನ್ನು ರಕ್ಷಿಸುವತ್ತಲೇ ನರೇಂದ್ರ ಮೋದಿ ಗಮನ ಹರಿಸಿದ್ದಾರೆ. ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ’ ಎಂಬ ವಿಪಕ್ಷಗಳ ಟೀಕೆಗಳಿಗೆ ಕಿವಿಗೊಡದ ಜನತೆ, ಮತ್ತೆ ‘ಮಾತಿನ ಮಲ್ಲ’ನಿಗೇ ಮಣೆ ಹಾಕಿದ್ದಾರೆ.

‘ರಫೇಲ್’ ಭ್ರಷ್ಟಾಚಾರ, ಬ್ಯಾಂಕುಗಳಿಗೆ ವಂಚಿಸಿದವರ ಪಲಾಯನಕ್ಕೆ ಬೆಂಬಲ, ಉದ್ಯೋಗಕ್ಕೆ ಕನ್ನ ಹಾಕಿದ ನೋಟು ರದ್ದತಿ, ಸಣ್ಣಪುಟ್ಟ ವ್ಯಾಪಾರಗಳಿಗೆ ಕಲ್ಲು ಹಾಕಿದ ಜಿಎಸ್‌ಟಿ ಕಾಯ್ದೆ, ವಿದೇಶ ಪ್ರವಾಸ, ಮರಳಿ ಬಾರದ ಕಪ್ಪು ಹಣ, ಸಂವಿಧಾನ ಬದಲಿಸುವ ಹುನ್ನಾರ, ರಾಷ್ಟ್ರೀಯತೆ ಮತ್ತು ಹುಸಿ ದೇಶಭಕ್ತಿಯ ಪ್ರಚಾರ ಎಂಬಂಥ ವಿಪಕ್ಷಗಳ ಆರೋಪಗಳಿಗೆ ಸ್ಪಂದಿಸುವ ಗೋಜಿಗೆ ಹೋಗದ ದೇಶದ ಮತದಾರರು ಮತ್ತೆ ಮೋದಿ ಆಡಳಿತಕ್ಕೆ ಜೈಕಾರ ಕೂಗಿದ್ದಾರೆ.

ಚುನಾವಣೆ ಘೋಷಣೆಗೆ ತುಸು ಮೊದಲು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರರ ದಾಳಿ, ಬಾಲಾಕೋಟ್‌ ಉಗ್ರರ ನೆಲೆಗಳ ಮೇಲೆ ಭಾರತ ನಡೆಸಿದ್ದ ವಾಯು ದಾಳಿ, ಎರಡೇ ದಿನಗಳಲ್ಲಿ ಪಾಕಿಸ್ತಾನದಿಂದ ಮರಳಿದ ವಿಂಗ್‌ ಕಮಾಂಡರ್‌ ಅಭಿನಂದನ್‌ ಮುಂತಾದ ಬೆಳವಣಿಗೆಗಳು ಮತದಾರರ ಮನಸನ್ನು ಬಿಜೆಪಿಯತ್ತ ಹೊರಳಿಸಿರುವುದು ಈ ಫಲಿತಾಂಶದ ಮೂಲಕ ಬಹಿರಂಗಗೊಂಡಿದೆ.

ಅಂತೆಯೇ ಕಳೆದ ಬಾರಿ ಗಳಿಸಿದ್ದಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದು ಬೀಗಿದೆ. ‘ಕಮಲ’ದ ಚಿಹ್ನೆಯಡಿ ಸ್ಪರ್ಧಿಸಿದ್ದ ಅಪರಿಚಿತ ಮುಖಗಳೆಲ್ಲ ‘ನರೇಂದ್ರ ಮೋದಿ’ ಎಂಬ ‘ನಾಮಬಲ’ದಿಂದಲೇ ಸಂಸತ್‌ ಭವನದೊಳಗೆ ಆಸೀನರಾಗುವಂತಾಗಿದೆ. ‘ಸೋಲಿಲ್ಲದ ಸರದಾರರು’ ಎಂದೇ ಬೀಗುತ್ತಿದ್ದ ವಿಪಕ್ಷದ ಮುಖಂಡರಿಗೆ ಸೋಲಿನ ಕಹಿ ಅನುಭವ ಆಗಿದೆ.

‘ಬಿಜೆಪಿಯನ್ನು ಮತ್ತೆ ಅಧಿಕಾರದ ಸನಿಹಕ್ಕೆ ಸುಳಿಯದಂತೆ ದೂರವಿರಿಸಬೇಕು’ ಎಂಬ ವಿಪಕ್ಷಗಳ ಸರ್ವಪ್ರಯತ್ನ ವೈಫಲ್ಯದ ಸುಳಿಗೆ ಸಿಲುಕಿದ್ದು, ಬಡ ಕುಟುಂಬಗಳಿಗೆ ಮಾಸಿಕ ₹ 6,000 ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದ್ದ ‘ನ್ಯಾಯ್‌’ ಯೋಜನೆಗೂ ಜನಮನ್ನಣೆ ಲಭಿಸಿಲ್ಲ.

ಲಾಲ್‌ಕೃಷ್ಣ ಅಡ್ವಾಣಿ ಆದಿಯಾಗಿ ಪಕ್ಷ ಕಟ್ಟಿ ಬೆಳೆಸಿದ್ದ ಘಟಾನುಘಟಿಗಳನ್ನು ಕಡೆಗಣಿಸಿಯೂ ಮೋದಿ– ಅಮಿತ್‌ ಶಾ ಜೋಡಿ ಸತತ ಎರಡನೇ ಬಾರಿಗೆ ಸ್ವಂತ ಬಲದಿಂದಲೇ ದೆಹಲಿಯ ಗದ್ದುಗೆ ಏರುವ ಎತ್ತರ ತಲುಪಿ ಸಹಜವಾಗಿಯೇ ಸಂಘ ಪರಿವಾರದ ಮೆಚ್ಚುಗೆಗೆ ಪಾತ್ರವಾಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಕಾಶ್ಮೀರಕ್ಕೆ ನೀಡಿರುವ ವಿಶೇಷ ಸೌಲಭ್ಯಗಳ ರದ್ದತಿ, ಸಮಾನ ನಾಗರಿಕ ಕಾಯ್ದೆ ಜಾರಿಯಂತಹ ಭರವಸೆಗಳ ಈಡೇರಿಕೆಯತ್ತ ಬಿಜೆಪಿ ಈಗ ಆಲೋಚಿಸಬಹುದೇ ಎಂಬ ಪ್ರಶ್ನೆಗಳನ್ನೂ ಈ ಫಲಿತಾಂಶ ಮತ್ತೆ ಮುಂಚೂಣಿಗೆ ತಂದಿದೆ.

ಮೂರು ದಿನಗಳ ಹಿಂದೆ ಪ್ರಕಟವಾಗಿದ್ದ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ, ಸರ್ಕಾರ ರಚಿಸುವ ದೊಡ್ಡ ಕನಸನ್ನು ಕಂಡಿದ್ದ ವಿಪಕ್ಷಗಳಿಗೆ ಮುಖಭಂಗವಾಗಿದೆ.

ಫಲಿತಾಂಶದಲ್ಲಿ ಏರುಪೇರು ಆಗಬಹುದು ಎಂದೇ ಭಾವಿಸಿ, ಬಿಜೆಪಿ ವಿರೋಧಿ ಶಕ್ತಿಗಳನ್ನೆಲ್ಲ ಒಟ್ಟುಗೂಡಿಸಲು ಆಂಧ್ರ ಪ್ರದೇಶದ ಎನ್‌.ಚಂದ್ರಬಾಬು ನಾಯ್ಡು ಕೈಗೊಂಡಿದ್ದ ತ್ವರಿತ ಸಂಚಾರದ ಆಶಯಕ್ಕೆ ಆಸ್ಪದವೇ ದೊರೆಯದಂತಾಗಿದೆ. ಅಂತಹ ಪ್ರಯತ್ನಕ್ಕೆ ಕೈಹಾಕಿದವರನ್ನು ಬಿಜೆಪಿಯ ಗೆಲುವು ನಗೆಪಾಟಲಿಗೆ ಈಡು ಮಾಡಿದೆ.

ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರ ಅಬ್ಬರದೆದುರು ಕಮಲವನ್ನು ಅರಳಿಸುವ ಮೋದಿ– ಶಾ ಪ್ರಯತ್ನಕ್ಕೆ ಪಶ್ಚಿಮ ಬಂಗಾಳದಲ್ಲಿ ಆರಂಭದಲ್ಲೇ ಯಶಸ್ಸು ಲಭಿಸಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಪ್ರಧಾನಿಯ ಲೆಕ್ಕಾಚಾರಕ್ಕೆ ಅಲ್ಲಿನ ಮತದಾರರು ತಣ್ಣೀರೆರಚಿದ್ದಾರೆ. ಆದರೆ, ಇತರ ರಾಜ್ಯಗಳಲ್ಲಿ ಸಾಧಿಸಿದ ಮೈತ್ರಿ ಸಫಲವಾಗಿರುವುದು ಕಳೆದ ಬಾರಿಗಿಂತಲೂ ಈ ಬಾರಿಯ ಸಾಧನೆಯು ‘ಸುಧಾರಣೆ’ ಎಂಬಂತೆ ದಾಖಲಾಗಿದೆ.

ಜೆಡಿಯು ಮತ್ತು ಲೋಕ ಜನಶಕ್ತಿ ಪಕ್ಷದೊಂದಿಗೆ ಬಿಜೆಪಿಯು ಬಿಹಾರದಲ್ಲಿ ಮಾಡಿಕೊಂಡಿದ್ದ ಮೈತ್ರಿಗೇ ಜನರು ಒಲವು ತೋರಿದ್ದಾರೆ. ಲಾಲು ಪ್ರಸಾದ್‌ ಅವರ ಆರ್‌ಜೆಡಿ– ಕಾಂಗ್ರೆಸ್‌ ಮೈತ್ರಿ ಹೀನಾಯವಾಗಿ ಸೋಲು ಕಂಡಿದೆ.

ಮೋದಿ ಹೆಸರಿನ ಮಹಾ ಸುನಾಮಿಯನ್ನು ತಡೆಯಲೆಂದೇ ಉತ್ತರ ಪ್ರದೇಶದಲ್ಲಿ ಒಂದಾಗಿದ್ದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಮಾಯಾವತಿಯವರ ಮಹಾ ಮೈತ್ರಿಗೂ ದಿಕ್ಕು ತಪ್ಪಿದಂತಾಗಿದೆ.

ದಕ್ಷಿಣದ ತಮಿಳುನಾಡು ಮತ್ತು ಕೇರಳಗಳಲ್ಲಿ ಕಾಂಗ್ರೆಸ್‌ ಪಕ್ಷವು ‘ಜಾಣತನ’ದೊಂದಿಗೆ ಮಾಡಿಕೊಂಡಿರುವ ಮೈತ್ರಿಗೆ ತುಸು ಸಮಾಧಾನ ತರುವಂತಹ ಫಲಿತಾಂಶ ಸಿಕ್ಕಿದೆ.

ಮೈತ್ರಿಕೂಟ – ಗಳಿಸಿದ ಸ್ಥಾನ

ಎನ್‌ಡಿಎ – 349

ಯುಪಿಎ – 93

ಇತರೆ – 100

ಪಕ್ಷ – ಗಳಿಸಿದ ಸ್ಥಾನ

ಬಿಜೆಪಿ – 303

ಜೆಡಿಯು – 16

ಶಿವಸೇನಾ – 18

ಕಾಂಗ್ರೆಸ್ – 52

ಡಿಎಂಕೆ – 23

ವೈಎಸ್‌ಆರ್‌ಸಿ – 22

ಬಿಎಸ್‌ಪಿ – 10

ಬಿಜೆಡಿ – 13

ಟಿಆರ್‌ಎಸ್‌ – 9

ಟಿಎಂಸಿ – 22

 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...