ಸುಳ್ಳು ಮಾಹಿತಿ ನೀಡಿದ ಸಚಿವರನ್ನು ಸಂಪುಟದಿಂದ ವಜಾಮಾಡಿ: ಸಿದ್ದರಾಮಯ್ಯ; ಪಠ್ಯ ಮರು ಪರಿಷ್ಕರಣೆ ವಿವಾದ
ಬೆಂಗಳೂರು: 'ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಉದ್ಭವಿಸಿರುವ ಎಲ್ಲ ಅಂಶಗಳ ಕುರಿತು ಸರಕಾರ ನಿಖರ ಮಾಹಿತಿ ಜನರ ಮುಂದೆ ಮಂಡಿಸಬೇಕು. 'ಸುಳ್ಳು ಹೇಳುವುದಿಲ್ಲ' ಎಂದು ಅಧಿಕಾರ ಸ್ವೀಕರಿಸಿ ನಾಡಿನ ಜನರಿಗೆ ಸುಳ್ಳು ಹೇಳಿರುವ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು. ಮಾಧ್ಯಮಗಳಿಗೆ ಸುಳ್ಳು ಮಾಹಿತಿ ಬಿಡುಗಡೆ ಮಾಡಿರುವ ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರಕಾರ ಬೇಷರತ್ತಾಗಿ ನಾಡಿನ ಜನರ ಕ್ಷಮೆ ಕೇಳಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟನೆ ಹೊರಡಿಸಿರುವ ಅವರು, 'ಬರಗೂರು ಸಮಿತಿ ನೇತೃತ್ವದಲ್ಲಿ ತಜ್ಞರು ಬರೆದಿದ್ದ ಪಾಠಗಳಿಗೆ ವೈಜ್ಞಾನಿಕ ತಳಹದಿ ಇರುವುದರಿಂದ ಅವುಗಳನ್ನೆ ಮುಂದುವರಿಸಬೇಕು. ಜೊತೆಗೆ ಕನ್ನಡಿಗರಿಂದ ಬಂದಿರುವ ಪ್ರತಿರೋಧಗಳಿಂದಾಗಿ ಈಗಾಗಲೆ ಮುದ್ರಿಸಲಾಗಿದ್ದ ಪುಸ್ತಕಗಳನ್ನು ಹಿಂಪಡೆದು ಕೆಲವು ಸಂಗತಿಗಳನ್ನು ಮರುಮುದ್ರಿಸಲಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಇಷ್ಟೂ ಹಣವನ್ನು ಸಂಬಂಧಿಸಿದವರಿಂದ ವಸೂಲು ಮಾಡಬೇಕು' ಎಂದು ಸಲಹೆ ನೀಡಿದ್ದಾರೆ.
ಬಿಜೆಪಿ ಸರಕಾರ ಚಕ್ರತೀರ್ಥರ ಮೂಲಕ ಮಾಡಿಸಿರುವ ಅಧ್ವಾನಗಳನ್ನು ಹಲವು ರೀತಿಯಲ್ಲಿ ಗಮನಿಸಬೇಕಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆಯು ಸಂವಿಧಾನ ವಿರೋಧಿ ಆಶಯಗಳುಳ್ಳದ್ದಾಗಿದೆ. ಅಪ್ರತಾಂತ್ರಿಕ ನಿಲುವಿನದ್ದಾ ಗಿದೆ. ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಶೂದ್ರ, ದಲಿತರ ಅಸ್ಮಿತೆಯನ್ನು ನಿರಾಕರಿಸುವುದಾಗಿದೆ ಅಥವಾ ಕೀಳುಗಳೆಯುವುದಾಗಿದೆ. ವರ್ಣ-ಜಾತಿ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಿ ದುಡಿಯುವ ವರ್ಗಗಳ ಪರವಾದ, ಮಾನವೀಯತೆಯ ಪರವಾದ ಹೋರಾಟ ಕಟ್ಟಿದ ಬುದ್ಧ, ಮಹಾವೀರ, ಬಸವಣ್ಣ ಕನಕದಾಸರು, ನಾರಾಯಣ ಗುರುಗಳು, ಸಾವಿತ್ರಿಬಾಯಿ ಫುಲೆ, ಅಂಬೇಡ್ಕರ್, ಕುವೆಂಪು ಮುಂತಾದವರ ಚರಿತ್ರೆಯನ್ನು ನಿರಾಕರಿಸಿರುವುದು ಅಥವಾ ತಿರುಚಲು ಪ್ರಯತ್ನಿಸಿರುವುದು ಅಕ್ಷಮ್ಯ. ಸಾಮ್ರಾಜ್ಯಶಾಹಿಗಳ ವಿರುದ್ಧ ಯುದ್ಧ ಮಾಡಿದ ಅಬ್ಬಕ್ಕ ರಾಣಿ, ಕೆಂಪೇಗೌಡರು ಮುಂತಾದ ಮಹನೀಯರನ್ನು ನಿರ್ಲಕ್ಷಿಸಿರುವುದನ್ನು ಸಹಿಸುವುದು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ವಿಪಕ್ಷ ನಾಯಕ |
ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಲ್ಲಿ ಎಳೆಯ ಮಕ್ಕಳ ಮನಸ್ಸುಗಳಿಗೆ ಸರಕಾರ ಮತ್ತು ಸರಕಾರದ ಹಿಂದೆ ಗುಪ್ತವಾಗಿ ಕೆಲಸ ಮಾಡುತ್ತಿರುವ ಸಂಘಪರಿವಾರ ವಿಷ ಹಾಕಲು ಹೊರಟಿವೆ. ವಿವಾದ ಪ್ರಾರಂಭವಾಗಿ ತಿಂಗಳುಗಳು ಕಳೆಯುತ್ತಿದ್ದರೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳೇನು ಎಂದು ಪರಿಶೀಲಿಸುವ ಬದಲಿಗೆ ಚಕ್ರತೀರ್ಥ ಮಾಡಿರುವ ಪ್ರಮಾದಗಳನ್ನು ಸಮರ್ಥಿಸಿಕೊಳ್ಳುವ ಬೇಜವಾಬ್ದಾರಿತನವನ್ನು ಸರಕಾರ ತೋರಿಸುತ್ತಿದೆ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
'ಗುರುವಾರ ಸುದ್ದಿಗೋಷ್ಠಿ ನಡೆಸಿದ ನಾಲ್ಕೂ ಜನ ಸಚಿವರು ಶಿಕ್ಷಣ ಇಲಾಖೆಯ ಬಗ್ಗೆ ಮಾಹಿತಿಯೇ ಇಲ್ಲದವರು ಮತ್ತು ಅದರಲ್ಲಿ 3 ಜನ ಶೂದ್ರ ಸಮುದಾಯಗಳಿಗೆ ಸೇರಿದ ಸಚಿವರು. ಹಾಗೊಂದು ವೇಳೆ ಸಮರ್ಪಕ ಮಾಹಿತಿ ಇದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೋಷ್ಠಿ ನಡೆಸಬೇಕಾಗಿತ್ತು. ವಾಸ್ತವವಾಗಿ ಸತ್ಯ ಸಂಗತಿಗಳನ್ನು ವಿವರಿಸಬೇಕಾಗಿದ್ದುದು ಸಂಬಂಧಿತ ಶಿಕ್ಷಣ ಸಚಿವರು. ಕಂದಾಯ ಸಚಿವ ಆರ್.ಅಶೋಕ್ ಕುಳಿತುಕೊಂಡು ಸಂಪೂರ್ಣವಾಗಿ ಈ ವಿಚಾರವನ್ನು ರಾಜಕಿ ಕರಣಗೊಳಿಸಲು ಪ್ರಯತ್ನ ಮಾಡಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದ್ದಾರೆ.
“ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದೆಂದು ಹಲವು ಚಿಂತಕರು ಹಾಗೂ ಸಂಸ್ಥೆಗಳು ಹೇಳುತ್ತಾ ಬಂದಿವೆ. ಭಾರತದಲ್ಲಿ ಇದುವರೆಗೆ ರಚನೆಯಾಗಿ ರುವ ಶಿಕ್ಷಣ ಆಯೋಗಗಳು ಮಕ್ಕಳಿಗೆ ಏನನ್ನು ಕಲಿಸಬೇಕು? ಏನನ್ನು ಕಲಿಸಬಾರದು ಎಂದು ಸ್ಪಷ್ಟವಾಗಿ ಹೇಳಿವೆ. ಕಲಿಸಬೇಕಾದ ಸಂಗತಿಗಳಲ್ಲಿ ಮುಖ್ಯವಾಗಿ ಸಂವಿಧಾನದ ಆಶಯಗಳು ಇರಬೇಕು ಮತ್ತು ಕಲಿಸಬಾರದ ಸಂಗತಿಗಳಲ್ಲಿ ಮುಖ್ಯವಾಗಿ ಹಿಂಸೆ, ದ್ವೇಷ, ಅಸಹನೆ, ಅವೈಜ್ಞಾನಿಕತೆ, ಮತಾಂಧತೆ, ಮೌಡ್ಯ, ತಾರತಮ್ಯ ಗುಣಗಳನ್ನು ಯಾವ ಕಾರಣಕ್ಕೂ ಕಲಿಸಬಾರದು ಎಂದು ಒತ್ತಿ ಹೇಳಲಾಗಿದೆ' ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.