ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಬಿಜೆಪಿ ಬದ್ಧ; ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ್

Source: SO News | By Laxmi Tanaya | Published on 3rd December 2020, 2:37 PM | State News | Don't Miss |

ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ನಮ್ಮ ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವುದು ನಮ್ಮ ಪಕ್ಷದ್ದಾಗಿದೆ. ಕೆಳಹಂತದಲ್ಲಿ ಸರಕಾರ ನಡೆಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಬೃಹತ್ ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. 

ನಗರದ ಅಂಬೇಡ್ಕರ ಭವನದಲ್ಲಿ ಗುರುವಾರ ನಡೆದ 'ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗೆ ನೆಲೆಯಿಲ್ಲ. ಜೆಡಿಎಸ್ ಗೆ ಅಡ್ರೆಸ್ ಇಲ್ಲದಂತಾಗಿದೆ. ಕೆಳ ಹಂತದದಲ್ಲಿ ಅಧಿಕಾರ ನಮ್ಮ ಕಾರ್ಯಕರ್ತರಿಗೆ ದೊರಕುವಂತಾಗಬೇಕು. ಆ ಕಾರಣಕ್ಕೆ ಭಾಜಪಾ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಹೈದರಾಬಾದಿನ ಕಾರ್ಪೋರೇಷನ್ ಚುನಾವಣೆಯಲ್ಲಿ ರಾಷ್ಟ್ರೀಯ ನಾಯಕರು ಕಾರ್ಯಕರ್ತರ ಪರವಾಗಿ ಚುನಾವಣೆಗೆ ಬೆಂಬಲ ನೀಡಿದ್ದಾರೆ. ಭಾಜಪಾದಲ್ಲಿ ಕುಟುಂಬದ ರಾಜಕಾರಣವಿಲ್ಲ. ಇದು ಯಾವುದೇ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಬದಲಾಗಿ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ ಎಂದರು. 

ರಾಜ್ಯ ರಾಜಕೀಯದ ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆಯ ಪರಿಣಾಮ ಅಧೋಗತಿಯೆಡೆಗೆ ಸಾಗುತ್ತಿದೆ. ಜನತಾದಳಕ್ಕೆ ಅಡ್ರೆಸ್ ಇಲ್ಲದಂತಾಗಿದೆ. ಆದರೆ ಭಾಜಪಾ ಸಾಮೂಹಿಕ ನಾಯಕತ್ವದಡಿ ಹೆಮ್ಮರವಾಗಿ ಬೆಳೆಯುತ್ತಿದೆ. 

ಜಿಲ್ಲೆಯಲ್ಲಿ ಬೆಲೆಕೇರಿಯ ಬಂದರನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಆ ಮೂಲಕ ಉತ್ತರ ಕನ್ನಡದ ಅಭಿವೃದ್ಧಿಗೆ ಒತ್ತುಕೊಡುವ ಕೆಲಸ ಸರಕಾರ ಮಾಡುತ್ತಿದೆ. ಪ್ರವಾಸೋದ್ಯಮದಲ್ಲಿ ಜಿಲ್ಲೆಗೆ ಅಪರಿಮಿತ ಅವಕಾಶವಿದೆ. ಆ ನಿಟ್ಟಿನಲ್ಲಿಯೂ ಸಹ ನಮ್ಮ ಸರಕಾರ ಕಾರ್ಯನಿರ್ವಹಿಸುತ್ತದೆ ಎಂದರು. ಭ್ರಷ್ಟಾಚಾರ, ಹಣ ಸೋರಿಕೆಗೆ ತಡೆ ಬಿದ್ದಿದ್ದು ನರೇಂದ್ರ ಮೋದಿಯವರ ಸರಕಾರದ್ದಾಗಿದೆ ಎಂದರು. 

ರಾಜ್ಯ ಕಾರ್ಮಿಕ ಮತ್ತು ಸಕ್ಕರೆ ಸಚಿವ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ, ಆದರೆ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತದ ಅವಶ್ಯಕತೆ ಇದೆ. ಈಗೀನ ಸ್ಥಳೀಯ ಕ್ಷೇತ್ರದ ಚುನಾವಣೆ ಮುಂಬರುವ ವಿಧಾನ ಸಭೆ ಚುನಾವಣೆಗೆ ಮುನ್ಸೂಚನೆಯಾಗಿದೆ. ಈ ಚುನಾವಣೆ ನಮ್ಮ ಕಾರ್ಯಕರ್ತರಿಗೆ ಅಧಿಕಾರಕ್ಕೆ ಏರಲು ಸಹಾಯಕವಾಗುವಂತೆ ನಾವು ಕೆಲಸ ಮಾಡಬೇಕಿದೆ. ಕಾರ್ಯಕರ್ತರ ಕಾರಣಕ್ಕೆ ನಾಯಕರು ಶ್ರಮಪಡಬೇಕು ಎಂಬ ಸಂಕಲ್ಪದೊಂದಿಗೆ ಭಾಜಪಾ ಯಡ್ಯೂರಪ್ಪನವರ ನಾಯಕತ್ವದಲ್ಲಿ ಮುನ್ನುಗ್ಗುತ್ತಿದ್ದೇತ್ತೇವೆ. ಭಾಜಪಾ ಅಧಿಕಾರಕ್ಕೆ ಬಂದ ಮೇಲೆ ವಿವಿಧ ಇಲಾಖೆಯಲ್ಲಿ ರೈತಾಪಿ, ಗಣಿಗಾರಿಕೆ, ಸಹಕಾರಿ, ಕಾರ್ಮಿಕ ಕ್ಷೇತ್ರ ಸೇರಿದಂತೆ ಹಲವಾರು ರೀತಿಯಲ್ಲಿ ಬದಲಾವಣೆಯನ್ನು ತಂದಿದ್ದೇವೆ.
ಪಂಚಾಯತದಲ್ಲಿ ನಮ್ಮ ಕಾರ್ಯಕರ್ತರು ಒಟ್ಟಾಗಿ ನಿರ್ಣಯಿಸಿದ ಅಭ್ಯರ್ಥಿಯನ್ನೇ ಭಾಜಪಾ ಅನುಮೋದಿಸುತ್ತದೆ ಎಂದರು. 

ಗ್ರಾಮ ಸ್ವರಾಜ್ಯ ಸಮಾವೇಶದ ರಾಜ್ಯ ಸಂಚಾಲಕ ಸಿದ್ಧರಾಜು ಮಾತನಾಡಿ, ನಮ್ಮ ಪ್ರಧಾನಿಯ ಹೇಳಿದಂತೆ ಗ್ರಾಮದ ಅಭಿವೃದ್ಧಿಯಾದರೆ ಅದು ರಾಷ್ಟ್ರದ ಅಭಿವೃದ್ಧಿಯಾದಂತೆ. ರಾಷ್ಟ್ರ, ರಾಜ್ಯದಲ್ಲಿ ಭಾಜಪಾ ಅಧಿಕಾರದಲ್ಲಿದೆ. ಅದೇ ರೀತಿ ಸ್ಥಳಿಯ ಭಾಗದಲ್ಲಿಯೂ ಸಹ ನಮ್ಮ ಕಾರ್ಯಕರ್ತರೇ ಅಧಿಕಾರಕ್ಕೆ ಬರಬೇಕು ಎಂದು ಅವರು ಆಶಿಸಿದರು. 

ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ನಾಯಕರು ಗೆದ್ದು ಬಂದಿದ್ದಾರೆ. ಗ್ರಾಮದಿಂದ ದೆಹಲಿಯವರೆಗೆ ಭಾಜಪಾದ ಧ್ವಜ ಹಾರಾಡುವಂತಾಗಬೇಕು. ಗಣಿ ಇಲಾಖೆಯಲ್ಲಿ ನೂತನ ಮರಳು ರೀತಿಯಲ್ಲಿ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸರಕಾರ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಪಂಚಾಯತಕ್ಕೆ ಆರ್ಥಿಕ ಬಲ ತುಂಬಲಾಗುತ್ತದೆ ಎಂದರು. ದೇಶಕ್ಕಾಗಿ, ದೇಶದ ಅಭಿವೃದ್ಧಿ ಜೊತೆಗೆ ಗ್ರಾಮದ ಅಭಿವೃದ್ಧಿಗಾಗಿ ನಮ್ಮ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು. 

ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ರಾಜ್ಯದಲ್ಲಿ ಗ್ರಾಪಂ ಚುನಾವಣೆ ಘೋಷಣೆಯಾಗಿದೆ. ಜಿಲ್ಲೆಯ 231 ಪಂಚಾಯತದಲ್ಲಿ ಚುನಾವಣೆ ನಡೆಯಲಿದ್ದು, ಕಳೆದ ಅವಧಿಯಲ್ಲಿ 900 ಕ್ಕೂ ಅಧಿಕರು ಭಾಜಪಾದ ಕಾರ್ಯಕರ್ತರು ಅಧಿಕಾರಕ್ಕೇರಿದ್ದರು. 2014 ರ ನಂತರದಲ್ಲಿ ಭಾಜಪಾದ ಸಂಘಟನಾತ್ಮಕ ವ್ಯವಸ್ಥೆ ಚುರುಕಾಗಿದೆ.
ಪಂಚಾಯತ ಚುನಾವಣೆಯನ್ನು ವಾರ್ಡ್ ರೂಮ್, ಕಾಲ್ ಸೆಂಟರ್, ಕುಟುಂಬ ಮಿಲನ, ಪೇಜ್ ಪ್ರಮುಖ್, ಪಂಚರತ್ನ ಸೇರಿದಂತೆ ಪಂಚಸೂತ್ರದ ವ್ಯವಸ್ಥೆಯಡಿಯಲ್ಲಿ ಎದುರಿಸಲು ಸಜ್ಜಾಗಿದೆ. ಪಕ್ಷದ ನಾಯಕರಿಗೆ ಕಾರ್ಯಕರ್ತರನ್ನು ಗೆಲ್ಲಿಸುವುದು ಕರ್ತವ್ಯವಾಗಿದೆ. ಇತ್ತಿಚಿನ ದಿನದ ಬೆಳವಣಿಗೆ ನೋಡಿದರ ಜಿಲ್ಲೆಯಲ್ಲಿ ಬಿಜೆಪಿಯ ತಳಹದಿ ಗಟ್ಟಿಯಾಗುತ್ತಿರುವುದು ಎದ್ದು ಕಾಣುತ್ತದೆ ಎಂದರು. ಘಟ್ಟದ ಮೇಲಿನ 126 ಪಂಚಾಯತದಲ್ಲಿ ಕನಿಷ್ಠ 99 ಪಂಚಾಯತವನ್ನು ಬಿಜೆಪಿ ಕಾರ್ಯಕರ್ತರು ಗೆಲ್ಲಲಿದ್ದಾರೆ ಎಂದರು. 

ಪ್ರಮೋದ ಹೆಗಡೆ ಮಾತನಾಡಿ, ಗ್ರಾಮ ಪಂಚಾಯತದಲ್ಲಿ ಮತ ಕೇಳುವ ನೈತಿಕತೆ ಇದ್ದರೆ ಅದು, ಬಿಜೆಪಿಗೆ ಮಾತ್ರ ಇದೆ. ಗ್ರಾಮ ವಿಕೇಂದ್ರಿಕರಣಕ್ಕೆ ಮೊದಲು ಹೆಜ್ಜೆಯನ್ನಿಟ್ಟಿದ್ದು ಭಾಜಪಾದ್ದಾಗಿದೆ‌. ಪಂಚಾಯತ ವ್ಯವಸ್ಥೆಗೆ ಜೀವ ತುಂಬಿದ ನಾನಾಜೀ ದೇಶಮುಖ್ ಭಾಜಪಾದ ಕಾರ್ಯಕರ್ತರಾಗಿದ್ದಾರೆ. ಇಡೀ ದೇಶದಲ್ಲಿ ರಾಜಕೀಯದ ಕೇಂದ್ರ ಬೂತ್ ಮಟ್ಟದ್ದಾಗಿದೆ. 

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಡೆಯಲಿರುವ ಚುನಾವಣೆಯ ಯುದ್ಧಕ್ಕೆ ನಾವೆಲ್ಲ ಸೈನಿಕರಂತೆ ತಯಾರಾಗಬೇಕಿದೆ. ಯಡ್ಯೂರಪ್ಪ ನೇತೃತ್ವದಲ್ಲಿ ಭಾಜಪಾ ಸರಕಾರ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗೆ ಬದ್ಧವಾಗಿದೆ. ಸರಕಾರದ ಯೋಜನೆಯನ್ನು ನಿರ್ಲಕ್ಷಕ್ಕೊಳಗಾದ ಸಮುದಾಯಕ್ಕೆ ತೆಗೆದುಕೊಂಡು ಹೋಗುವ ಕೆಲಸ ನಮ್ಮದಾಗಿದೆ ಎಂದರು. 

ಜಿಲ್ಲಾ ಪ್ರಧಾನಕಾರ್ಯದರ್ಶಿ ಚಂದ್ರು ದೇವಾಡಿಗ ಎಸಳೆ ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಮಾಜಿ ಶಾಸಕ ವಿ ಎಸ್ ಪಾಟೀಲ್ ,  ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ ಕುಮಾರ, ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಬೆಳ್ಳೆಕೇರಿ, ತಾಲೂಕಾ ಗ್ರಾಮೀಣ ಘಟಕಾಧ್ಯಕ್ಷ ನರಸಿಂಹ ಹೆಗಡೆ, ಜಿಲ್ಲೆಯ ಭಾಜಪಾದ ಪ್ರಮುಖರಾದ ವಿನೋದ ಪ್ರಭು, ಮಾಜಿ ಶಾಸಕ ಸುನೀಲ ಹೆಗಡೆ, ಎಪಿಎಮ್ಸಿ ಅಧ್ಯಕ್ಷ ವಿಶ್ವನಾಥ ಶೀಗೇಹಳ್ಳಿ, ಸದಾನಂದ ಭಟ್ಟ ನಿಡಗೋಡು, ಗುರುಪ್ರಸಾದ ಹರ್ತೆಬೈಲು, ನಾಗರಾಜ ಶೆಟ್ಟಿ, ದ್ಯಾಮಣ್ಣ ದೊಡ್ಮನಿ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದ ಆರಂಭದಲ್ಲಿ ರೇಖಾ ಹೆಗಡೆ ಸುಶ್ರಾವ್ಯವಾಗಿ ವಂದೇ ಮಾತರಂ ಗೀತೆ ಹಾಡಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...