ಭಟ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ರೋಡ್ಶೋ
ಭಟ್ಕಳ: ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ರವಿವಾರ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ನೂರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು.
ಮೂಡಭಟ್ಕಳ ಬೈಪಾಸ್ನಿಂದ ಮೆರವಣಿಗೆಯಲ್ಲಿ ಹೊರಟ ಬಿಜೆಪಿ ಕಾರ್ಯಕರ್ತರು ಪ್ರಧಾನಮಂತ್ರಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದರು. ನಂತರ ಇಲ್ಲಿನ ಹಳೆಯ ಬಸ್ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇದು ಚುನಾವಣೆಯಲ್ಲ, ಯುದ್ಧ ಎಂದರು. ನನಗೆ ಮೋದಿ ಹೆಸರಿನಲ್ಲಿ ಮತ ಕೇಳಲು ಯಾವುದೇ ಅಂಜಿಕೆ ಇಲ್ಲ. ದೇಶವನ್ನು ಮೇಲಕ್ಕೆ ಎತ್ತಲು ಈ ಚುನಾವಣೆ ನಡೆಯುತ್ತಿದೆ. ಹಿಂದುತ್ವ, ಭಾರತೀಯತೆ ಬೇರೆ ಬೇರೆ ಅಲ್ಲ. ಬಡವರ ಹಾಗೂ ಹಳ್ಳಿಯ ಜನರ ಬದುಕನ್ನು ಬದಲಾಯಿಸುವ ಪ್ರಯತ್ನ ದೇಶದಲ್ಲಿ ನಡೆದಿದೆ. ಹಿಂದಿನ ವೈಭವದ ದಿನಗಳು ಮರುಕಳಿಸುತ್ತಿವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ಗೆ ಅಸ್ತಿತ್ವ ಇಲ್ಲ. ಈ ಚುನಾವಣೆಯನ್ನು ಬಿಜೆಪಿ ಗೆಲ್ಲುವುದು ಶತಸಿದ್ಧವಾಗಿದ್ದು, ಎಷ್ಟು ಮತಗಳ ಅಂತರದ ಗೆಲುವು ಎನ್ನುವುದಷ್ಟೇ ಈಗ ಮುಖ್ಯವಾಗಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಅತಿ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿಯನ್ನು ಗೆಲ್ಲಿಸಬೇಕಾಗಿದೆ ಎಂದರು. ಶಾಸಕ ಸುನಿಲ್ ನಾಯ್ಕ ಮಾತನಾಡಿ, ದೇಶದ ಜನರು ಎಚ್ಚೆತ್ತಿದ್ದು, ಪಕ್ಷದ ಕಾರ್ಯಕರ್ತರು ಇಂದಿನಿಂದ ಚುನಾವಣೆ ದಿನದವರೆಗೆ ಹೆಚ್ಚಿನ ಬದ್ಧತೆಯನ್ನು ತೋರಿಸಬೇಕು ಎಂದರು. ಕೃಷ್ಣ ನಾಯ್ಕ ಆಸರಕೇರಿ, ಗೋವಿಂದ ನಾಯ್ಕ, ರಾಜೇಶ ನಾಯ್ಕ, ಉಮೇಶ ನಾಯ್ಕ, ರವಿ ನಾಯ್ಕ ಜಾಲಿ ಮೊದಲಾದವರು ಉಪಸ್ಥಿತರಿದ್ದರು.