ನಿತೀಶ್ ಕುಮಾರ್ರಿಂದ ಮುಸ್ಲಿಮರ ತುಷ್ಟಿಕರಣಕ್ಕಾಗಿ ಹೊಸ ತಂತ್ರ
ಹೊಸದಿಲ್ಲಿ: ವಂಚನೆಗೊಳಗಾದೆವು ಎನ್ನುವ ಅನಿಸಿಕೆಯಿಂದ ಮುಸ್ಲಿಂ ಅಲ್ಪಸಂಖ್ಯಾತರು ತನ್ನಿಂದ ದೂರವಾಗುತ್ತಿದ್ದಾರೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತನ್ನ ಜೊತೆಗಿರಿಸಲಿಕ್ಕಾಗಿ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಸಂಘಪರಿವಾರದೊಂದಿಗೆ ಸೇರಿ ಸರಕಾರ ರಚಿಸಿದ್ದಕ್ಕೆ ಟೀಕೆ ಕೇಳಿಬರುತ್ತಿರುವ ಬೆನ್ನಿಗೆ ಬಿಹಾರದಲ್ಲಿ ಜನರಗುಂಪಿನಿಂದ ದಾಳಿ ನಡೆದಿರುವುದು ನಿತೀಶ್ರಲ್ಲಿ ಆತಂಕವನ್ನು ಸೃಷ್ಟಿಸಿದೆ.
ಬಿಹಾರದ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದ ಕೆಲಸಗಳನ್ನು ಅವಲೋಕನ ನಡೆಸಲು ನಿತೀಶ್ ಕುಮಾರ್ ತುರ್ತು ಸಭೆಯನ್ನು ಕರೆದು ಸೇವೆಯನ್ನು ಉತ್ತಮಪಡಿಸಲು ಹಲವು ಸೂಚನೆಗಳನ್ನು ನೀಡಿದ್ದಾರೆ. ಬಿಹಾರದಲ್ಲಿ 2200 ಮದ್ರಸಾಗಳಿದ್ದು, ಅಲ್ಲಿಗೆ ತುರ್ತಾಗಿ ಸೌಲಭ್ಯಗಳನ್ನು ಮತ್ತುಆರ್ಥಿಕ ಹಾಗೂ ನಿರ್ಮಾಣ ಕಾಮಗಾರಿಗೆ ನೆರವನ್ನು ಒದಗಿಸಲಾಗುವುದೆಂದು ನಿತೀಶ್ ಘೋಷಿಸಿದರು. ತರಗತಿ ಕೋಣೆಗಳು, ಲೈಬ್ರರಿ, ಲ್ಯಾಬರೇಟರಿಗಳಿಗೆ ಸರಕಾರ ನೆರವು ನೀಡಲಿದೆ. ಮದ್ರಸಾದಿಂದ 10, 12 ನೆ ತರಗತಿ ಪಾಸಾಗುವ ವಿದ್ಯಾರ್ಥಿಗಳಿಗೆ ತಲಾ 10,000ರೂಪಾಯಿ ನೀಡಲಾಗುವುದು. ವಕ್ಫ್ ಮಂಡಳಿಗೆ ಎಲ್ಲ ಜಿಲ್ಲೆಗಳಲ್ಲಿ ಕಚೇರಿಸಹಿತ ಒಂದು ಕಟ್ಟಡ ಹಾಗೂ ಲೈಬ್ರರಿ, ಒಂದು ಕಮ್ಯುನಿಟಿ ಹಾಲ್ನ್ನು ಬಿಹಾರ ಸರಕಾರ ನಿರ್ಮಿಸಿಕೊಡಲಿದೆ.
ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿಯಾದ ದಿನ ಮುಸ್ಲಿಂ ಶಾಸಕರಿಗೆ ಶುಕ್ರವಾರದ ಜುಮಾ ನಮಾಝ್ಗೆ ಹೋಗಲಿಕ್ಕಾಗಿ ನಿತೀಶ್ ತನ್ನ ಭಾಷಣವನ್ನು ಕಡಿತಗೊಳಿಸಿದ್ದರು. ಮುಸ್ಲಿಮರನ್ನು ಕೈಬಿಟ್ಟಿಲ್ಲ ಎನ್ನುವ ಅಭಿಪ್ರಾಯವನ್ನು ಸೃಷ್ಟಿಸಲು ಈ ಎಲ್ಲ ತಂತ್ರಗಳನ್ನು ನಿತೀಶ್ ಪ್ರಯೋಗಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ನಾವು ವಂಚಿತರಾಗಿದ್ದೇವೆ ಎನ್ನುವ ಅನಿಸಿಕೆಯನ್ನು ಮುಸ್ಲಿಮರಿಂದ ಹೋಗಲಾಡಿಸಲು ಈ ಕ್ರಮಗಳನ್ನು ನಿತೀಶ್ ಕೈಗೊಂಡಿದ್ದಾರೆ. ಬಿಹಾರದ ಪ್ರಮುಖ ಮುಸ್ಲಿಂ ನಾಯಕ ಅಲಿ ಅನ್ವರ್ ಬಿಜೆಪಿ ಸಖ್ಯ ಆತ್ಮಹತ್ಯೆಯೆಂದು ಹೇಳಿದ್ದರು. ಶರದ್ ಯಾದವ್ ನಿತೀಶ್ರ ಕ್ರಮದಿಂದ ಮುನಿಸಿಕೊಂಡಿದ್ದಾರೆ.