ಲಾಕ್ಡೌನ್ ನಿಂದಾಗಿ ದುಬೈಯಿಂದ ಬಾಡಿಗೆ ವಿಮಾನದ ಮೂಲಕ ತವರು ಸೇರಿದ ೧೮೪ ಮಂದಿ ಭಟ್ಕಳಿಗರು
ಭಟ್ಕಳ: ಲಾಕ್ಡೌನ್ ನಿಂದಾಗಿ ದುಬೈ,ಯುಎಇ ಯಲ್ಲಿ ಸಿಲುಕಿದ ಭಟ್ಕಳ ಮತ್ತು ಸುತ್ತಮುತ್ತಲಿನ ಸಾವಿರಾರು ಜನರ ಪೈಕಿ ೧೮೪ ಮಂದಿ ಶನಿವಾರದಂದು ಬಾಡಿಗೆ ವಿಮಾನದ ಮೂಲಕ ಮಂಗಳೂರಿಗೆ ಬಂದು ಅಲ್ಲಿಂದ ೪ ಖಾಸಗಿ ಬಸ್ಸುಗಳಲ್ಲಿ ಭಟ್ಕಳ ತಲುಪಿದರು.
ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್ ನ ಮಾಲಿಕ ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷರಾದ ಅತಿಕುರ್ರಹ್ಮಾನ್ ಮುನಿರಿಯ ಮುಂದಾಳುತ್ವದಲ್ಲಿ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಕೊನೆಗೆ ಭಟ್ಕಳವನ್ನು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ.
ಜೂನ್ ೧೨ ರಂದು ರಾಸ್-ಅಲ್-ಖೈಮಾ ವಿಮಾನ ನಿಲ್ದಾಣದಿಂದ ಶುಕ್ರವಾರ ರಾತ್ರಿ ೧೦ಗಂಟೆಗೆ ಮಂಗಳೂರಿಗೆ ಹಾರಾಟ ನಡೆಸಿದ ಬಾಡಿಗೆ ವಿಮಾನವು ರಾತ್ರಿ ಸುಮಾರು ೨ಗಂಟೆ ಮಂಗಳುರು ಅಂತರಾಷ್ಟ್ರಿಯ ವಿಮಾನ ನಿಲ್ದಾಣವನ್ನು ತಲುಪಿತು. ಮಂಗಳೂರಿನಿಂದ ಮೊದಲೆ ನಿರ್ಧರಿಸಿದಂತೆ ಅಲ್ಲಿ ಭಟ್ಕಳ ಮುಸ್ಲಿಮ ಜಮಾಅತ್ ಮಂಗಳೂರು ಹಾಗೂ ತಂಝೀಮ್ ಸಂಸ್ಥೆಯ ಮೇಲು ಉಸ್ತುವಾರಿಯಲ್ಲಿ ೪ ಖಾಸಗಿ ಬಸ್ಸುಗಳ ಮೂಲಕ ಶನಿವಾರ ೧೮೪ ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಭಟ್ಕಳ ಸೇರಿದರು. ಇದರಲ್ಲಿ ಗರ್ಭೀಣಿ ಮಹಿಳೆಯರು ಸೇರಿದಂತೆ ಮಕ್ಕಳು ವಯೋವೃದ್ಧರು ಸೇರಿದ್ದಾರೆ.
ಈ ಕುರಿತಂತೆ ಭಟ್ಕಳ ಪ್ರಯಾಣದ ಎಲ್ಲ ವ್ಯವಸ್ಥೆಯನ್ನು ಮಾಡಿರುವ ಅತಿಕುರ್ರಹ್ಮಾನ್ ಮುನಿರಿ ಶುಕ್ರವಾರ ರಾಸ್ ಅಲ್ –ಖೈಮಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು, ಮೊದಲಿಗೆ ಅಲ್ಲಾಹನಿಗೆ ಕೃತಜ್ಞತೆಯನ್ನು ಸಲ್ಲಿಸಿ ಈ ಕಾರ್ಯಕ್ಕಾಗಿ ಸಹಕರಿಸಿ ಭಾರತೀಯ ರಾಯಭಾರಿ ಕಚೇರಿ ಹಾಗೂ ಮಂಗಳೂರು ಮತ್ತು ಉತ್ತರಕನ್ನಡ ಜಿಲ್ಲಾಧಿಕಾರಿ ಹಾಗೂ ವಿವಿಧ ದಾನಿಗಳನ್ನು ಅಭಿನಂದಿಸಿದ್ದಾರೆ. ಇದೊಂದು ಚಿಕ್ಕ ಪ್ರಯತ್ನವಾಗಿದ್ದು ಭಟ್ಕಳದ ಜನರು ತಮ್ಮ ತಾಯ್ನಾಡಿಗಾಗಿ ಮರಳಲು ಬಯಸುತ್ತಿದ್ದಾರೆ. ಲಾಕ್ಡೌನ್ ನಲ್ಲಿ ಇಲ್ಲಿ ಅವರು ಬಹಳಷ್ಟು ಕಷ್ಟವನ್ನು ಅನುಭವಿಸುತ್ತಿರುವುದು ಗಮನಿಸಿ ಭಟ್ಕಳದ ಜನರ ಸಹಕಾರ ನಿಂತ ಅವರ ಕಾರ್ಯವನ್ನು ಭಟ್ಕಳದ ಜನರು ಶ್ಲಾಘಿಸುತ್ತಿದ್ದಾರೆ.
ಎಲ್ಲರಿಗೂ ಕ್ವಾರೈಂಟೇನ್: ಭಟ್ಕಳಕ್ಕೆ ಬಂದಿಳಿದ ಎಲ್ಲ ಪ್ರಯಾಣಿಕರನ್ನು ನೇರವಾಗಿ ಬಸ್ಸಿನಿಂದ ಇಳಿಸಿ ಕ್ವಾರೈಂಟೈನ್ ಕೇಂದ್ರಗಳಿಗೆ ತಲುಪಿಸಲಾಗಿದೆ. ಇಲ್ಲಿನ ಎರಡು ಲಾಡ್ಜ್ ಹಾಗೂ ಅಂಜುಮನ್ ವಸತಿ ಗೃಹದಲ್ಲಿ ಜನರನ್ನು ಕ್ವಾರೆಂಟೈನ್ ನಲ್ಲಿಡಲಾಗಿದ್ದು ೭ದಿನಗಳ ನಂತರ ಅವರನ್ನು ಮನೆಗಳಿಗೆ ಕಳುಹಿಸಲಾಗುವುದು ಎಂದು ತಿಳಿದುಬಂದಿದೆ.