ಭಟ್ಕಳ, ಜೂನ್ ೩೦: ಹೊನ್ನಾವರದ ಬಳಿಕ ಅನಂತವಾಡಿ ಎಂಬಲ್ಲಿ ಅತಿವೇಗದ ಬಸ್ ರಿಕ್ಷಾ ಒಂದಕ್ಕೆ ಅತಿ ರಭಸದಿಂದ ಗುದ್ದಿದ್ದು ಮುಂದಿದ್ದ ಮಣ್ಣಿನ ಗುಡ್ಡೆಯ ನಡುವೆ ಸಿಲುಕಿ ಪೂರ್ಣ ನುಜ್ಜುಗುಜ್ಜಾದ ರಿಕ್ಷಾದೊಳಗೆ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಪ್ರಯಾಣಿಕರನ್ನು ಹೊನ್ನಾವರದಲ್ಲಿ ಇಳಿಸಿ ಮನ್ಕಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ ರಿಕ್ಷಾ ಗುರುವಾರ ಸಂಜೆ ಏಳು ಘಂಟೆಯ ಹೊತ್ತಿಗೆ ಅಪಘಾತಕ್ಕೀಡಾಗಿದೆ. ಚಾಲಕನನ್ನು ವಿನಾಯಕ್ ವಿಷ್ಣು ಮೊಗೇರ (23) ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಖಾಸಗಿ ಬಸ್ಸು ಮಂಗಳೂರಿನಿಂದ ಮುಂಬೈ ಕಡೆಗೆ ಹೋಗುತ್ತಿದ್ದು ಇನ್ನೊಂದು ವಾಹನವನ್ನು ಅತಿವೇಗದಲ್ಲಿ ಹಿಂದಿಕ್ಕಲು ನಡೆಸಿದ ಪ್ರಯತ್ನದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆ ಸಂಭವಿಸಿದ ತಕ್ಷಣ ಬಸ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಅಪಘಾತದ ತೀವ್ರತೆಗೆ ರಿಕ್ಷಾ ಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕನ ದೇಹವನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು.
ಘಟನೆಯ ಬಳಿಕ ತಕ್ಷಣವೇ ಜಮಾವಣೆಯಾದ ಜನತೆ ಸಿಟ್ಟಿಗೆದ್ದು ಬಸ್ ನತ್ತ ಕಲ್ಲು ತೂರಾಟ ನಡೆಸಿದರು, ಕೆಲವರು ಬಸ್ಸಿಗೆ ಬೆಂಕಿ ಹಚ್ಚಲೂ ಯತ್ನಿಸಿದರು. ಆದರೆ ಆ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಸಿಪಿಐ ಕುಮಾರ ಸ್ವಾಮಿ ಮತ್ತು ಹೆಚ್ಚುವರಿ ಪೋಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ವಿಕೋಪಕ್ಕೆ ತಿರುಗದಂತೆ ನೋಡಿಕೊಂಡರು. ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯ ಬಳಿಕ ಸುಮಾರು ಎರಡು ಘಂಟೆಗಳ ಕಾಲ ವಾಹನಸಂಚಾರ ಸ್ತಬ್ದಗೊಂಡಿತ್ತು.
ಮೃತ ಶರೀರವನ್ನು ಮನ್ಕಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ಮನ್ಕಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ಹೊನ್ನಾವರ ಸಿಪಿಐ ಸಾಹಿಲ್ ಆನ್ಲೈನ್ ಕಛೇರಿಯನ್ನು ಸಂಪರ್ಕಿಸಿ ರಾತ್ರಿ ಒಂಭತ್ತು ಘಂಟೆಗೆ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.