ಭಟ್ಕಳ:ಪುರಸಭೆಯ ಮೇಲೆ ಕಲ್ಲು ತೂರಾಟ ಪ್ರಕರಣ-ಹದಿಮೂರರಲ್ಲಿ ಹನ್ನೊಂದು ಜನರಿಗೆ ಜಾಮೀನು
ಭಟ್ಕಳ: ಸೆ. 14 ರಂದು ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಪುರಸಭೆ ಕಟ್ಟಡದ ಮೇಲೆ ಕಲ್ಲು ತೂರಾಟ ಆರೋಪದಡಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 13 ಜನರ ಪೈಕಿ 11 ಮಂದಿಗೆ ಭಟ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯ ಗುರುವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಆದೇಶ ನೀಡಿದೆ.
ಬಂಧಿತರಾಗಿ ಕಾರವಾರದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಈಶ್ವರ ದುರ್ಗಪ್ಪ ನಾಯ್ಕ, ಮಾಸ್ತಪ್ಪ ದುರ್ಗಪ್ಪ ನಾಯ್ಕ, ಶಂಕರ ವಿ. ನಾಯ್ಕ, ರಾಜೇಶ ನಾಗಪ್ಪ ನಾಯ್ಕ, ದಯಾನಂದ ಮಾದೇವ ನಾಯ್ಕ, ಪುಂಡಲೀಕ ಸುಕ್ರಯ್ಯ ನಾಯ್ಕ, ಜನಾರ್ಧನ ವೆಂಕಟರಮಣ ನಾಯ್ಕ, ರಾಜು ಸುಕ್ರ ನಾಯ್ಕ ಹಾಗೂ ಗಣಪತಿ ನಾರಾಯಣ ನಾಯ್ಕ, ಮಂಜುನಾಥ ದುರ್ಗಪ್ಪ ನಾಯ್ಕ, ಆನಂದ ನಾಯ್ಕ ಎನ್ನುವವರಿಗೆ ಜಾಮೀನು ದೊರೆತಿದೆ. ಇವರ ಜೊತೆಯಲ್ಲಿಯೇ ಬಂಧಿತರಾಗಿದ್ದ ಬಿಜೆಪಿ ಪ್ರಮುಖರಾದ ಗೋವಿಂದ ಜಟ್ಟಪ್ಪ ನಾಯ್ಕ ಮತ್ತು ಕೃಷ್ಣಾ ನಾಗಪ್ಪ ನಾಯ್ಕ ಆಸರಕೇರಿ ಇವರಿಬ್ಬರಿಗೂ ಜಾಮೀನು ದೊರೆತಿಲ್ಲ ಎನ್ನಲಾಗಿದೆ.
ಮತ್ತಿಬ್ಬರ ಬಂಧನ: ಸೆ. 14 ರಂದು ಪುರಸಭೆ ಎದುರು ನಡೆದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮತ್ತೆ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಚೌತನಿಯ ಶಂಕರ ಸಂಕಪ್ಪ ನಾಯ್ಕ ಹಾಗೂ ದೇವೇಂದ್ರ ನಾಯ್ಕ ಎನ್ನುವವರೇ ಬಂಧಿಸಲ್ಪಟ್ಟವರಾಗಿದ್ದಾರೆ. ಇವರನ್ನು ಪೊಲೀಸರು ಭಟ್ಕಳ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದ್ದು ಇಬ್ಬರನ್ನೂ ಕಾರವಾರದ ಕಾರಾಗೃಹಕ್ಕೆ ಕಳುಹಿಸಲಾಗಿದೆ.