ಭಟ್ಕಳ: ಭಟ್ಕಳದಲ್ಲಿ ಮೇ 5 ರಂದು ಮಂಗಳೂರು ಆಸ್ಪತ್ರೆಯೊಂದರ ಸಂಪರ್ಕದಿಂದಾಗಿ 28 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಸೋಂಕು ಅವರೆಲ್ಲ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ಮರಳಿದ ಒಂದು ವಾರದ ಬಳಿಕ ಮತ್ತೇ ಆಂಧ್ರಪ್ರದೇಶದಿಂದ ಭಟ್ಕಳಕ್ಕೆ ಬಂದ ಮಹಿಳೆಯೊಬ್ಬರಲ್ಲಿ ಶುಕ್ರವಾರದಂದು ಕೊರೋನಾ ಸೋಂಕು ದೃಢಪಟ್ಟಿದೆ.
ಆಂಧ್ರಪ್ರದೇಶದ ವಿಜಯವಾಡದಿಂದ ಬೆಂಗಳೂರಿಗೆ ಬಂದು ಅಲ್ಲಿ ವಾಸ್ತವ್ಯ ಹೂಡಿ ನಂತರ ಕುಂದಾಪುರಕ್ಕೆ ಸರ್ಕಾರಿ ಬಸ್ಸಿನಲ್ಲಿ ಬಂದು ಅಲ್ಲಿಂದ ಟ್ಯಾಕ್ಸಿಯಲ್ಲಿ ಭಟ್ಕಳ ತಲುಪಿದ ಇಲ್ಲಿನ ಮಗ್ದೂಮ್ ಕಾಲೋನಿಯ 29 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಹೋದೆಯ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎನ್ನುವಂತಾಗಿದೆ ಭಟ್ಕಳದ ಜನರ ಸ್ಥಿತಿ.
ಮೇ31 ರಂದು ಭಟ್ಕಳಕ್ಕೆ ಬಂದಿದ್ದ ಮಹಿಳೆಯನ್ನು ಎರಡು ದಿನಗಳ ವರೆಗೆ ಭಟ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಜೂನ್ 2ರಂದು ಮನೆಗೆ ಬಿಡುಗಡೆಗೊಳಿಸಿದ್ದಾರೆ. ಜೂನ್ 3 ಮತ್ತು 4 ಎರಡು ದಿನ ಆ ಮಹಿಳೆ ಮನೆಯಲ್ಲಿ ಎಲ್ಲರೊಂದಿಗೆ ಬೆರೆತಿದ್ದಾರೆ ವಸ್ತುಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಷ್ಟು ಜನರು ಆಕೆಯ ಸಂಪರ್ಕದಲ್ಲಿ ಬಂದಿರುವವರೋ ಗೊತ್ತಿಲ್ಲ. ಗುರುವಾರ ಸಂಜೆ ಆ ಮಹಿಳೆಯ ಸ್ವ್ಯಾಬ್ ಟೆಸ್ಟ್ ಫಲಿತಾಂಶ ಪಾಸಿಟಿವ್ ಆಗಿದ್ದು ಶುಕ್ರವಾರ ಸಂಜೆ ಆಕೆಯನ್ನು ಕಾರವಾರದ ಕೋವಿಡ್-19 ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಂಟಲು ದ್ರವ ಪರೀಕ್ಷೆಯ ವರದಿ ಬರುವ ಮುಂಚೆಯೇ ಆ ಮಹಿಳೆಯನ್ನು ಮನೆಗೆ ಕಳುಹಿಸಿದ್ದರಿಂದ ಆ ಮಹಿಳೆಯ ಎಷ್ಟೆಲ್ಲ ಮಹಿಳೆರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವುದು ಕೂಡ ತಿಳಿಯದಾಗಿದೆ. ಇದರಿಂದಾಗಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.
ಈ ಕುರಿತಂತೆ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಭರತ್ ಎಸ್. ರನ್ನು ವಿಚಾರಿಸಿದರೆ ಅವರು ಐದು ರಾಜ್ಯಗಳನ್ನು ಹೊರತು ಪಡಿಸಿ ಬೇರೆ ಯಾವುದೇ ರಾಜ್ಯಗಳಿಂದ ಜನ ಬಂದಿದ್ದರೆ ಅವರನ್ನು ಸಾಂಸ್ಥಿಕ ಕ್ವಾರೈಂಟೇನ್ ಮಾಡುವ ನಿಯಮವಿಲ್ಲ. ಸರ್ಕಾರದ ಮಾರ್ಗದರ್ಶಿ ಮತ್ತು ನಿಯಮದ ಪ್ರಕಾರ ಆ ಮಹಿಳೆಯನ್ನು ಮನೆಗೆ ಕಳುಹಿಸಲಾಗಿದೆ ಎಂದು ಸಮಜಾಯಿಸಿ ನೀಡಿದ್ದಾರೆ.
ಮಗ್ದೂಮ್ ಕಾಲೋನಿ ಸೀಲ್ಡೌನ್?: ಶುಕ್ರವಾರ ಮಗ್ದೂಮ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಸಹಾಯ ಆಯುಕ್ತರು ಸೋಂಕಿತ ಮಹಿಳೆಯ ಮನೆಯಿಂದ ನೂರು ಮೀಟರ್ ವರೆಗಿನ ಪ್ರದೇಶವನ್ನು ಸೀಲ್ಡೌನ್ ಮಾಡಲು ಆದೇಶಿಸಿದ್ದಾರೆ. ಕೇವಲ ಸೋಂಕಿತರ ಮನೆಯನ್ನು ಮಾತ್ರ ಸೀಲ್ಡೌನ್ ಮಾಡಲಾಗುತ್ತದೆ ಎಂಬ ಸಚಿವರ ಹೇಳಿಕೆಯನ್ನು ಉದ್ಧರಿಸಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಮಗೆ ಈ ಬಗ್ಗೆ ಯಾವುದೇ ಆದೇಶ ಬಂದಿಲ್ಲ ಎಂದು ಉತ್ತರಿಸಿದರು.