ಭಟ್ಕಳ: ಶಿವಮೊಗ್ಗ, ದ.ಕ. ಉಡುಪಿ ಜಿಲ್ಲೆಗಳ ನಂತರ ಈಗ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲಿಟ್ಟಿರುವ ಕೇಸರಿ ಶಾಲು ಉಪನ್ಯಾಸಕಿಯರ ಬುರ್ಕಾ ನಿಷೇಧಿಸುವಂತೆ ಅಗ್ರಹ ವ್ಯಕ್ತಪಡಿಸಿದೆ.
ಸೋಮವಾರ ಕೇಸರಿ ಶಾಲನ್ನು ಧರಿಸಿ ಕಾಲೇಜ್ ಕ್ಯಾಂಪಸ್ ಪ್ರವೇಶಿಸಿದ ಸಂಘಪರಿವಾರದ ಸಂಘಟನೆಗಳ ವಿದ್ಯಾರ್ಥಿಗಳು ಇಲ್ಲಿನ ನಾಲ್ವರು ಮುಸ್ಲಿಮ್ ಉಪನ್ಯಾಸಕೀಯರು ಬುರ್ಖಾ ಧರಿಸಿ ಕಾಲೇಜು ಕ್ಯಾಂಪಸ್ ಪ್ರವೇಶಿಸಕೂಡದೆಂದು ಆಗ್ರಹಿದ್ದಾರೆ.
ಈ ಕುರಿತಂತೆ ಕಾಲೇಜಿನ ಇನ್ಚಾರ್ಜ್ ಪ್ರಾಂಶುಪಾಲೆ ಡಾ.ಭಾಗಿರತಿ ನಾಯ್ಕ ಮಾಧ್ಯಮದವರೊಂದಿಗೆ ಮಾತನಾಡಿ ಪಕ್ಕದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬುರ್ಕಾ ವಿರೋಧಿಸುತ್ತಿರುವ ಘಟನೆಯ ಪರಿಣಾಮ ನಮ್ಮಲ್ಲಿನ ಕೆಲ ವಿದ್ಯಾರ್ಥಿಗಳ ಮೇಲೆ ಬೀರಿದ್ದು ಇಲ್ಲಿನ ನಾಲ್ಕು ಮುಸ್ಲಿಮ್ ಉಪನ್ಯಾಸಕೀಯರು ಬುರ್ಕಾವನ್ನು ಧರಿಸಿ ಪಾಠ ಮಾಡುತ್ತಾರೆ ಅವರಿಗೊಂದು ನ್ಯಾಯಾ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿ ಕಳೆದ ಒಂದು ವಾರದ ಹಿಂದೆ ಬುರ್ಕಾ ಧರಿಸಕೂಡದಂತೆ ಪ್ರಾಂಶುಪಾಲರಿಗೆ ಮನವಿಯನ್ನು ಸಲ್ಲಿಸಿದ್ದರು. ಪ್ರಾಂಶುಪಾಲರು ಒಂದು ವಾರದ ಗಡುವು ನೀಡಿದ್ದು ಮೇಲಾಧಿಕಾರಿಗಳಿಗೆ ವಿಚಾರಿಸಿ ನಿರ್ಣಯಿಸಲಾಗುವುದು ಎಂದು ತಿಳಿಸಿದ್ದರು. ಈಗ ಆ ಗಡುವು ಮುಗಿದ ಕಾರಣ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಆದೇಶವಿಲ್ಲ: ಸರ್ಕಾರ ಉಪನ್ಯಾಸಕರಿಗೆ ಯಾವುದೇ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿಲ್ಲ. ಉಪನ್ಯಾಸಕರು ತಮ್ಮ ತಮ್ಮ ಉಡುಪನ್ನು ಧರಿಸಿ ಕಾಲೇಜಿಗೆ ಬರಹುದಾಗಿದ್ದು ಇದರಲ್ಲಿ ಯಾರದೇ ಅಡ್ಡಿಗಳಿಲ್ಲ ಎಂದು ತಿಳಿಸಿದ ಭಾಗಿರತಿ ಇಂದಿನ ಘಟನೆಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಮೇಲಾಧಿಕಾರಿಗಳಿಗೆ ವಿಷಯವನ್ನು ತಿಳಿಸಲಾಗಿದೆ ಎಂದರು.
ನಮ್ಮ ಧರ್ಮ ನಮಗೆ ಬುರ್ಕಾವನ್ನು ಹಾಕಲು ಹೇಳುತ್ತದೆ. ಆದ್ದರಿಂದ ನಾವು ಬುರ್ಕಾ ಹಾಕಿಕೊಂಡು ಬರುತ್ತೇವೆ. ಇದು ನಮ್ಮ ನಮ್ಮ ಧರ್ಮ ನಮಗೆ ನೀಡಿದ ಆದೇಶವಾಗಿದೆ. ಸರ್ಕಾರ ನಮಗೆ ಯಾವುದೇ ವಸ್ತ್ರ ಸಂಹಿತೆಯನ್ನು ಅಳವಡಿಸುವಂತೆ ಆದೇಶಿಸಿಲ್ಲ ಎಂದು ಉಪನ್ಯಾಸಕೀಯರು ತಿಳಿಸಿದ್ದಾರೆ.