• ಮಕ್ಕಳು ಮತ್ತು ವಯೋವೃದ್ಧರಿಗೆ ಓಡಾಟ ನಿರ್ಬಂಧ
• ಸಂಡೆ ಕಫ್ರ್ಯೂ ಯಥಾಸ್ಥಿತಿ
ಭಟ್ಕಳ: ಭಟ್ಕಳ ನಗರ ಸೇರಿದಂತೆ ಜಾಲಿ ಪಟ್ಟಣ ಪಂಚಾಯತ್ ಹಾಗೂ ಹೆಬಳೆ ಪಂಚಾತಯತ್ ವ್ಯಾಪ್ತಿಯಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 6ಗಂಟೆ ವರೆಗೆ ಅಂಗಡಿಗಳು ಬಂದ್ ಮಾಡಲಾಗುತ್ತಿದ್ದು ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಈ ಸಂದರ್ಭದಲ್ಲಿ ರಸ್ತೆಯಲ್ಲಿ ಅನಗತ್ಯ ಓಡಾಟಕ್ಕೆ ನಿಯಂತ್ರಣ ಹೇರಲಾಗಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಹಾಗೂ ಎಎಸ್ಪಿ ನಿಖಿಲ್ ಬಿ. ಅವರು ಶುಕ್ರವಾರ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಭಟ್ಕಳ ತಾಲೂಕಿನಾದ್ಯಂತ ಕೊರೊನಾ ಸೋಂಕು ಹರಡುತ್ತಿರುವುದರಿಂದ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯದಲ್ಲಿ ಹಲವಾರು ಮಾರ್ಗಸೂಚಿಗಳನ್ನು ಸೂಚಿಸಿದ್ದು ಅವುಗಳಲ್ಲಿ ರವಿವಾರದ ಕಫ್ರ್ಯೂ ಕೂಡಾ ಒಂದಾಗಿದೆ. ಅವುಗಳನ್ನೆಲ್ಲಾ ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್, ಹೆಬಳೆ ಗ್ರಾಮ ಪಂಚಾಯತ್ ಹಾಗು ಪುರಸಭಾ ವ್ಯಾಪ್ತಿಯಲ್ಲಿ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಈಗಾಗಲೇ 2-3 ಹಾಟ್ಸ್ಪಾಟ್ಗಳನ್ನು ಗುರುತಿಸಲಾಗಿದ್ದು ಇನ್ನೆರಡು ದಿನಗಳಲ್ಲಿ ಅವುಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಿ ನೋಡಲ್ ಅಧಿಕಾರಿಗಳನ್ನ ನೇಮಿಸಲಾಗುವುದು. ಹಾಟ್ಸ್ಪಾಟ್ ಪ್ರದೇಶದಲ್ಲಿರುವವರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಬಿಟ್ಟು ಬೇರೆ ಯಾವುದೇ ಕಾರಣಕ್ಕೆ ಹೊರಗೆ ಬರುವಂತಿಲ್ಲ, ಅಗತ್ಯ ವಸ್ತುಗಳನ್ನು ಅಲ್ಲಿಯೇ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಟ್ಕಳಕ್ಕೆ ಕೋವಿಡ್ ಹಾಟ್ಸ್ಪಾಟ್ ಜಿಲ್ಲೆಗಳಿಂದ ಬರುವವರನ್ನು ನಿಯಂತ್ರಿಸಲು ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡಲಾಗುವುದು. ಹೊರಗಿನಿಂದ ಬರುವವರ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಶಿರಾಲಿ ಹಾಗೂ ಸರ್ಪನಕಟ್ಟೆ ಚೆಕ್ ಪೋಸ್ಟ್ಗಳಲ್ಲಿ ನಿಗಾ ವಹಿಸಲಾಗುವುದು.
ಭಟ್ಕಳದಲ್ಲಿ ಗುರುವಾರ ಒಂದೇ ದಿನ 175 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ ವಾರ ಮದುವೆಯಲ್ಲಿ ಭಾಗವಹಿಸಿದ್ದ 92 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದ ಅವರು ಕೋವಿಡ್ ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶವಿದ್ದರೂ ಸಹ ನಮ್ಮಲ್ಲಿ ಆಸ್ಪತ್ರೆ ವ್ಯವಸ್ಥೆ ಇರುವುದರಿಂದ ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಈಗಾಗಲೇ ಆಸ್ಪತ್ರೆಯನ್ನು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದ ಅವರು ಯಾರೂ ಕೂಡಾ ಭಯ ಪಡುವ ಅಗತ್ಯವಿಲ್ಲ, ಆದರೆ ಅನಾವಶ್ಯಕ ಹೊರಗೆ ಬರುವುದು, ಚಿಕ್ಕ ಮಕ್ಕಳು, 60ಕ್ಕಿಂತ ಹೆಚ್ಚಿಗೆ ವಯಸ್ಸಾದವರು ತಿರುಗಾಡುವುದು ಮಾಡಬಾರದು. ಅತೀ ಅಗತ್ಯದ ಕೆಲಸವಿದ್ದರೆ ಮಾತ್ರ ಸಾರ್ವಜನಿಕರು ಮನೆಯಿಂದ ಹೊರ ಬನ್ನಿ ಎಂದೂ ಕರೆ ನೀಡಿದ ಅವರು ಅನಾವಶ್ಯಕ ತಿರುಗಾಡುವವರ ಮೇಲೂ ನಿಗಾ ವಹಿಸಲಾಗುವುದು ಎಂದರು.
ಎ.ಎಸ್.ಪಿ. ನಿಖಿಲ್ ಬಿ., ಮಾತನಾಡಿ ಶಿರಾಲಿ, ಸರ್ಪನಕಟ್ಟೆ ಮತ್ತು ಸಾಗರ ರಸ್ತೆಯ ಚೆಕ್ ಪೋಸ್ಟ್ಗಳಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ಹಾಕಲಾಗಿದ್ದು ಭಟ್ಕಳಕ್ಕೆ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಬರುವವರ ಎಲ್ಲಾ ವಿವರ ಸಂಗ್ರಹಿಸಲಾಗುವುದು. ರಾತ್ರಿ ಕಫ್ರ್ಯೂವನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಅನಾವಶ್ಯಕ ಹೊರಗೆ ಬಂದು ಸಮಸ್ಯೆಯಲ್ಲಿ ಸಿಲುಕಬಾರದು. ಐದು ಕಡೆಗಳಲ್ಲಿ ಜ್ವರ ತಪಾಸಣಾ ಕ್ಲಿನಿಕ್ ಸ್ಥಾಪಿಸಲಾಗಿದ್ದು ಪ್ರತಿಯೋರ್ವರೂ ಕೂಡಾ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ತಹಸೀಲ್ದಾರ್ ಎಸ್. ರವಿಚಂದ್ರ ಉಪಸ್ಥಿತರಿದ್ದರು.