ಭಟ್ಕಳ: ಹೆರಿಗೆ ಮಾಡಿಸಲು ಇಲ್ಲಿ ವೈದ್ಯರೇ ಇಲ್ಲ; ಇದು ಭಟ್ಕಳ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಎಂಬ ಶೀರ್ಷಿಕೆಯಡಿ ಸಾಹಿಲ್ಆನ್ಲೈನ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಗೆ ಕೂಡಲೇ ಸ್ಪಂಧಿಸಿದ ಜಿಲ್ಲಾ ಅರೋಗ್ಯಾಧಿಕಾರಿ ಡಾ.ಅಶೋಕ ಕುಮಾರ್ ಸೋಮವಾರ ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುನಾಥ್ ಶೆಟ್ಟಿ ಸೇರಿದಂತೆ ಹಿರಿಯ, ಕಿರಿಯ ವೈದ್ಯರು, ದಾದಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡಿ ಎಂದು ಆದೇಶಿಸಿದ್ದಾರೆ.
ಸಾರ್ವಜನಿಕರ ಬೇಡಿಕೆಗನುಗುನವಾಗಿ ಕೆಲಸ ಮಾಡಿ, ಜನರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂಧಿಸಿ, ರಜೆಗೆ ಹೋಗಬೇಕಾದರೆ ಒಂದು ವಾರ ಮುಂಚೆ ಮೇಲಾಧಿಕಾರಿಗಳ ಅನುಮತಿ ಪಡೆಯಿರಿ ಎಂದು ಆಸ್ಪತ್ರೆಯ ಸಿಬಂಧಿಗಳಿಗೆ ಬಹಳ ಖಡಕ್ ಆಗಿ ಆದೇಶಿಸಿದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳ ಮುಂದೆ ಆಸ್ಪತ್ರೆಯಲ್ಲಿನ ಸಮಸ್ಯೆಯ ಬಗ್ಗೆ ಸಾರ್ವಜನಿಕರು ಅಹವಾಲುಗಳನ್ನು ಮುಂದಿಟ್ಟರು. ಆಸ್ಪತ್ರೆಯಲ್ಲಿ ತೀರಾ ಅಮಾನವೀಯ ರೀತಿಯಲ್ಲಿ ನರ್ಸಗಳು ವರ್ತಿಸುತ್ತಿದ್ದಾರೆ. ಇನ್ನು ವೈದ್ಯರು ಆಸ್ಪತ್ರೆಗೆ ಅಚಾನಕ ರೋಗಿಗಳು ಬಂದರೆ ತಪಾಸಣೆ ಮಾಡಲು ಯಾವೊಬ್ಬ ವೈದ್ಯರು ಇರುವುದಿಲ್ಲ. ಆಸ್ಪತ್ರೆಯಲ್ಲಿ ವೈದ್ಯರಿಗೂ ಹಾಗೂ ನರ್ಸಗಳ ಮಧ್ಯೆ sಸಂವಹನದ ಅಂತರ ತೀರಾ ಇದ್ದು, ಇದು ರೋಗಿಗಳ ಮೇಲೆ ಪರಿಣಾಮ ಬೀಳುತ್ತಿದೆ. ಈ ಬಗ್ಗೆ ನಿಮ್ಮ ಗಮನಕ್ಕೆ ತಂದರೆ ನೀವು ಸಹ ಯಾವುದೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳದೇ ಪೊಳ್ಳು ಭರವಸೆಯನ್ನು ನೀಡುತ್ತಿರಿ. ಈ ಹಿಂದೆ ಆಸ್ಪತ್ರೆಗೆ ಬೇಟಿ ನೀಡಿದಾಗಲು ಸಹ ಆಸ್ಪತ್ರೆಯ ಸಮಸ್ಯೆಯ ಬಗ್ಗೆ ಸವಿವರವಾಗಿ ತಿಳಿಸಿದಾಗಲು ಎಲ್ಲಾ ಸಮಸ್ಯೆಯನ್ನ ಶೀಘ್ರದಲ್ಲಿ ಪರಿಹರಿಸುವುದಾಗಿ ಹೇಳಿ ಹೋಗಿದ್ದೀರಿ. ಈಗಲು ಸಹ ಇಷ್ಟೆಲ್ಲಾ ಸಮಸ್ಯೆ ಇದ್ದರು ಸರಿಯಾದ ಕ್ರಮ ತೆಗೆದುಕೊಳ್ಳುವ ಬದಲು ಸಮಯಾವಕಾಶ ಕೇಳುತ್ತಿರುವಿರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಸಮಸ್ಯೆ ಪರಿಹಾರವಾಗದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಲಾಗುವುದು ಎಂದು ಸಾರ್ವಜನಿಕರು ತಿಳಿಸಿದರು. ಉಗ್ರ ಪ್ರತಿಭಟನೆ ನಡೆಸುವುದಾಗಿಯು ಎಚ್ಚರಿಕೆಯನ್ನು ನೀಡಲಾಯಿತು. ಹಾಗೂ ಮನಸ್ಸಿಗೆ ಬಂದ ಸಮಯಕ್ಕೆ ಆಸ್ಪತ್ರೆಗೆ ಬರುತ್ತಾರೆಂದು ಆಸ್ಪತ್ರೆಯ ದಂತ ವೈದ್ಯೆಯ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬಂತು. ಸಾರ್ವಜನಿಕರ ದೂರಿಗೆ ಒಂದು ಸಲಕ್ಕೆ ದಂತ ವೈದ್ಯೆ ಸಮರ್ಥನೆ ಮಾಡಿಕೊಂಡರು ಜಿಲ್ಲಾ ಆರೋಗ್ಯಾಧಿಕಾರಿ ಎಲ್ಲಾ ದೂರುಗಳನ್ನು ಪಡೆದುಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಭಟ್ಕಳದ ಗರ್ಭಿನಿ ಮಹಿಳೆಯರಿಗೆ ವೈದ್ಯರಿಲ್ಲ ಎಂಬ ಕಾರನ ನೀಡಿ ಚಿಕಿತ್ಸೆಗೆ ಹೆರಿಗೆ ಮಾಡದೆ ಬೇರೆ ಆಸ್ಪತ್ರೆಗೆ ಹೋಗುವಂತೆ ಮಾಡಿದ್ದು ಇದು ವೈದ್ಯರ ನಿರ್ಲಕ್ಷ್ಯತನವಾಗಿದೆ. ಮುಂದೇ ಹೀಗಾಗದಂತೆ ಜಾಗೃತೆ ವಹಿಸಲು ಸೂಚಿಸಿದ್ದೇನೆ. ಸರ್ಕಾರದ ನಿಯಮಾವಳಿಗಳಂತೆ ನಿರ್ಲಕ್ಷ್ಯ ತೋರಿದ ವೈದ್ಯರ ಮೇಲೆ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದ ಅವರು, ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳದ ಸರ್ಕಾರಿ ಆಸ್ಪತ್ರೆಯ ಎಲ್ಲ ಹುದ್ದೆಗಳು ಭರ್ತಿಯಾಗಿವೆ. ಒಂದು ಹುದ್ದೆ ಮಾತ್ರ ಖಾಲಿ ಉಳಿದಿದ್ದು ಅದನ್ನು ಭರ್ತಿ ಮಾಡಲು ಕ್ರಮ ಜರಗಿಸುತ್ತೇನೆ. ಇಷ್ಟಾದರೂ ಇಲ್ಲಿನ ವೈದ್ಯರ ನಿರ್ಲಕ್ಷ್ಯತನದಿಂದಾಗಿ ಹಲವಾರು ಸಮಸ್ಯೆಗಳು ಆಗಾಗ ಉದ್ಭವಿಸುತ್ತಲೇ ಇರುತ್ತದೆ. ಇಲ್ಲಿ ಸಾಕಷ್ಟು ನರ್ಸ್ಗಳು ಇದ್ದಾರೆ ಯಾವುದಕ್ಕೂ ಕೊರತೆಯಿಲ್ಲ ಎಂದರು. ಇಲ್ಲಿನ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೂ ರಕ್ತ ತಪಾಸನೆ ಮತ್ತಿತರ ವೈದ್ಯಕೀಯ ತಪಾಸನೆಗೆಂದು ವೈದ್ಯರು ಬಡಜನರಿಂದ ದುಡ್ಡು ಕೀಳುತ್ತಾರೆ ಇದು ನಿಲ್ಲಬೇಕು ಎಂಬ ವರದಿಗಾರರ ಪ್ರಶ್ನೆಗೆ ಮಾಧ್ಯಮದವರ ಮುಂದೇ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಏನ್ರಿ ಇದೆಲ್ಲ? ಬಿಪಿಎಲ್ ಕಾರ್ಡುದಾರರಿಗೆ ದುಡ್ಡು ತೆಗೆದುಕೊಳ್ಳಲು ಸರ್ಕಾರ ನಿಮಗೆ ಆದೇಶ ನೀಡಿದೆಯೇನ್ರಿ ಎಂದು ರೇಗಿದರು.. ಇದಕ್ಕೆ ವೈದ್ಯಾಧಿಕಾರಿಯಿಂದ ಯಾವುದೇ ಉತ್ತರ ಬರದೆ ಮೌನಕ್ಕೆ ಜಾರಿಕೊಂಡರು..