ಭಟ್ಕಳ, ಜು ೧: ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಗುರುವಾರ ರಾತ್ರಿ ನಡೆದ ಬಸ್-ಬೈಕ್ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯುವಕ ಬಳಿಕ ಉಡುಪಿಯ ಆಸ್ಪತ್ರೆಯಲ್ಲಿ ವಿಧಿವಶನಾದ ವರದಿಯಾಗಿದೆ.
ಮೃತ ಯುವಕನನ್ನು ಅಬ್ದುಲ್ ಬದೀ ಕಾಜಿಯಾ (18) ಎಂದು ಗುರುತಿಸಲಾಗಿದ್ದು ಮೂಸಾನಗರ ನಿವಾರಿ ಹುಜೇಫಾ ಕಾಜಿಯಾರವರ ಪುತ್ರರಾಗಿದ್ದಾರೆ.
ಲಭ್ಯವಾದ ಮಾಹಿತಿಗಳ ಪ್ರಕಾರ ಈ ಯುವಕ ಮತ್ತು ಈತನ ಸ್ನೇಹಿತ ಜೀಶಾನ್ ಸುನಹೆರಿ ಇಬ್ಬರೂ ರಂಜಾನ್ ಬಾಜಾರ್ ಗೆ ಭೇಟಿ ನೀಡಿದ ಬಳಿಕ ಬೈಕಿನಲ್ಲಿ ಹಿಂದಿರುತ್ತಿದ್ದಾಗ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಖಾಸಗಿ ಬಸ್ ಕುಂದಾಪುರದಿಂದ ಆಗ ತಾನೇ ಹಿಂದಿರುಗಿ ಸರ್ಕಲ್ ನಲ್ಲಿ ಯು.ಟರ್ನ್ ತೆಗೆಯುತ್ತಿತ್ತು. ಮೊದಲು ಬಸ್ಸಿಗೆ ಢಿಕ್ಕಿ ಹೊಡೆದ ಬಳಿಕ ಆಘಾತದಿಂದ ಎಸೆಯಲ್ಪಟ್ಟ ಯುವಕನ ತಲೆ ಪಕ್ಕದ ವಿದ್ಯುತ್ ಕಂಭಕ್ಕೆ ಬಡಿದು ತೀವ್ರವಾಗಿ ಪೆಟ್ಟಾಗಿತ್ತು. ತಕ್ಷಣವೇ ಆದರ್ಶ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ ಶುಕ್ರವಾರ ಸಂಜೆ ಏಳು ಘಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶನಾಗಿದ್ದಾನೆ.
ಈತ ಮುರ್ಡೇಶ್ವರದ ಕಾಲೇಜು ವಿದ್ಯಾರ್ಥಿಯಾಗಿದ್ದು ಈ ವರ್ಷವೇ ಮೊದಲ ಪೀಯುಸಿ ತೇರ್ಗಡೆಯಾಗಿದ್ದ. ಜೆದ್ದಾದಲ್ಲಿರುವ ಈತನ ದುಃಖತಪ್ತ ತಂದೆ ಅಂತಿಮ ಸಂಸ್ಕಾರಕ್ಕಾಗಿ ಭಟ್ಕಳಕ್ಕೆ ಆಗಮಿಸಿದ್ದಾರೆ.