ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತೆರಳುತ್ತಿದ್ದ ಮಸೀದಿಯ ‘ಇಮಾಮ್’ ಅಪಘಾತದಲ್ಲಿ ಸಾವು
ಭಟ್ಕಳ: ಗುರುವಾರ ಆರಂಭಗೊಂಡ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲು ಭಟ್ಕಳದಿಂದ ಕಾರವಾರಕ್ಕೆ ಹೊರಟಿದ್ದ ಕಾರೊಂದು ಅಪಘಾತಗೊಂಡ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಅಂಕೋಲಾ ತಾಲೂಕಿನ ರಾ.ಹೆ.66ರಲ್ಲಿ ಜರಗಿದೆ.
ಮೃತರನ್ನು ಭಟ್ಕಳದ ಖಾಜಿಯಾ ಸ್ಟ್ರೀಟ್ ನಿವಾಸಿ ಮೌಲ್ವಿ ಹಾಫಿಝ್ ಜಲಾಲುದ್ದೀನ್ ಶಮ್ಮಾಸ್ ಗೋಲ್ಟೆ (21) ಎಂದು ಗುರುತಿಸಲಾಗಿದೆ.
ಇವರು ಇಲ್ಲಿನ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯಿಂದ ಹಾಫಿಝ್ ಮತ್ತು ಆಲಿಮ್ ಪದವಿ ಪಡೆದು ಮುಷ್ಮಾ ಸ್ಟ್ರೀಟ್ ನಲ್ಲಿರುವ ಮಸೀದಿಯೊಂದರಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದರೆಂದು ತಿಳಿದುಬಂದಿದೆ. ಧಾರ್ಮಿಕ ಶಿಕ್ಷಣದ ನಂತರ ಔಪಚಾರಿಕ ಶಿಕ್ಷಣವನ್ನು ಮುಂದುವರೆಸಲು ಈ ವರ್ಷ ಎಸ್.ಎಸ್.ಎಲ್.ಸಿ ಬಾಹ್ಯ ವಿದ್ಯಾರ್ಥಿಯಾಗಿ ಹೆಸರನ್ನು ನೊಂದಾಯಿಸಿಕೊಂಡಿದ್ದು ಇಂದು ನಡೆಯಲಿದ್ದ ಪ್ರಥಮಭಾಷೆ ಉರ್ದು ಪರೀಕ್ಷೆಯನ್ನು ಬರೆಯಲು ಅವರು ತಮ್ಮ ಸ್ನೇಹಿತರೊಂದಿಗೆ ಕಾರವಾರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇಲ್ಲಿನ ಮುಷ್ಮಾ ಸ್ಟ್ರೀಟ್ ನ ಮಸೀದಿಯೊಂದರಲ್ಲಿ ಇಮಾಮ್ ಆಗಿದ್ದ ಮೌಲ್ವಿ ಹಾಫಿಝ್ ಜಲಾಲುದ್ದೀನ್ ಶಮ್ಸಾಸ್ ನದ್ವಿ ಗೋಲ್ಟೆ (21) ತನ್ನ ಔಪಚಾರಿಕ ಶಿಕ್ಷಣವನ್ನು ಮುಂದುವರೆಸುವ ಮಹಾದಾಸೆಯಿಂದ ಈ ಬಾರಿ ಬಾಹ್ಯ ವಿದ್ಯಾರ್ಥಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲು ಕಾರವಾರ ಜಿಲ್ಲಾ ಕೇಂದ್ರಕ್ಕೆ ತೆರಳುವ ಸಂದರ್ಭ ನಿಯಂತ್ರಣ ತಪ್ಪಿದ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಹೊಸೂರು ಎಂಬಲ್ಲಿ ಗುರುವಾರ ಜರಗಿದೆ.
ಅಹ್ಮದ್ ಇಯಾದ್ ಮೊಹತೆಶಮ್ ಮತ್ತು ಇಸ್ಮಾಯೀಲ್ ಬರ್ಮಾವರ್ ಗಾಯಗೊಂಡವರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಖಾಸಗಿ ಅಭ್ಯರ್ಥಿಯಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯಲು ಭಟ್ಕಳದಿಂದ ಪ್ರತಿ ವರ್ಷ 50 ರಿಂದ 70 ವಿದ್ಯಾರ್ಥಿಗಳು ಕಾರವಾರಕ್ಕೆ ಹೋಗುತ್ತಿದ್ದು ಈ ವರ್ಷ ಪರೀಕ್ಷೆಯನ್ನು ಬರೆಯಲು 50 ವಿದ್ಯಾರ್ಥಿಗಳು ನೊಂದಾಣಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಭಟ್ಕಳದ ಜಾಮಿಯಾ ಶಿಕ್ಷಣ ಸಂಸ್ಥೆಯಿಂದ ಪಾರಂಗತರಾದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರೆಸಲು ಪ್ರತಿವರ್ಷ ಬ್ಯಾಹ್ಯವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಅವರು ದಿನಾಲೂ ಕಾರವಾರಕ್ಕೆ ಹೋಗಿ ಪರೀಕ್ಷೆಯನ್ನು ಬರೆಯುತ್ತಿದ್ದು ಭಟ್ಕಳದಲ್ಲೇ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಡಬೇಕು ಎಂಬ ಕೂಗು ಈಗ ಎಲ್ಲೆಡೆಯಿಂದ ಕೇಳಿ ಬರುತ್ತಿದೆ.