ಬಂಟ್ವಾಳ : ಭಟ್ಕಳ ಶಿರಾಲಿ ಚಿತ್ರಾಪುರ ಎಂಬಲ್ಲಿ ಮನೆ ಕಳ್ಳತನ ನಡೆಸಿ ಚಿನ್ನಾಭರಣಗಳನ್ನು ಚೀಲದಲ್ಲಿ ಹಾಕಿ ಗುರುವಾರ ಬಂಟ್ವಾಳ ರೈಲ್ವೇ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಆರೋಪಿ ಮಂಗಳೂರು ತಾಲೂಕು, ಕಟೀಲು ಸಮೀಪದ ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ಮನೆ ನಿವಾಸಿ ವಾಸುದೇವ ಪ್ರಭು ಎಂಬವರ ಪುತ್ರ ಉಮಾನಾಥ ಪ್ರಭು (51) ಎಂಬಾತನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ರೈಲ್ವೆ ನಿಲ್ದಾಣದ ಬಳಿ ಕೈಯಲ್ಲಿ ಬ್ಯಾಗ್ ಹಿಡಿದುಕೊಂಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಪೊಲೀಸರಿಗೆ ಆತ ಸಂಶಯ ಬರುವಂತೆ ವರ್ತಿಸಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಈತ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.
ಆರೋಪಿಯ ಕೈಯಲ್ಲಿದ್ದ ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ 5,445 ರೂಪಾಯಿ ಮೌಲ್ಯದ 123.770 ಗ್ರಾಂ ಬೆಳ್ಳಿ ಹಾಗೂ 3,05,043 ರೂಪಾಯಿ ಮೌಲ್ಯದ 108.750 ಗ್ರಾಂ ಚಿನ್ನದ ಆಭರಣಗಳು ಮತ್ತು 52,390 ರೂಪಾಯಿ ನಗದು ಹಣ ಪತ್ತೆಯಾಗಿವೆ. ಈತನನ್ನು ಮತ್ತೆ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ 39.98 ಗ್ರಾಂ ಚಿನ್ನಾಭಾರಣ ಅಡವಿರಿಸುವ ಬಗ್ಗೆ ಮಾಹಿತಿ ನೀಡಿದ್ದು, ಅದನ್ನೂ ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ ಹೀಗೆ ಈತನ ಬಳಿಯಿರುವ ಒಟ್ಟು 4,75,021 ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಹಾಗೂ ನಗದನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ